ಯಲ್ಲಾಪುರದ ಅರಬೈಲ್ ಘಟ್ಟದಲ್ಲಿ ಸಂಚರಿಸುತ್ತಿದ್ದ ಸಿಗರೇಟಿನ ಲಾರಿ ಕದ್ದು ಅದನ್ನು ಸುಟ್ಟು ಹಾಕಿದ್ದ ಪ್ರಕರಣದ ಬೆನ್ನು ಬಿದ್ದಿರುವ ಪೊಲೀಸರು ಮತ್ತೊಬ್ಬ ಕಿಡಿಗೇಡಿಯನ್ನು ಬಂಧಿಸಿದ್ದಾರೆ.
2013ರಲ್ಲಿ ಅರಬೈಲ್ ಘಟ್ಟದಲ್ಲಿ ಲಾರಿ ಕಳ್ಳತನ ನಡೆದಿತ್ತು. ಸಿಗರೇಟು ಸಾಗಿಸುತ್ತಿದ್ದ ಲಾರಿಯನ್ನು ನಾಲ್ವರು ಸೇರಿ ಅಪಹರಿಸಿದ್ದರು. ಸಿಗರೇಟನ್ನು ಮಾರಾಟ ಮಾಡಿ ಆ ಲಾರಿಯನ್ನು ಸುಟ್ಟು ಸಾಕ್ಷಿ ನಾಶ ಮಾಡಿದ್ದರು. ಕೆಲ ದಿನಗಳ ಹಿಂದೆ ಪೊಲೀಸರು ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ರಾಜೇಂದ್ರ ಸಿಂಗ್ ಎಂಬಾತನನ್ನು ಬಂಧಿಸಿದ್ದರು. ಇದೀಗ ಅದೇ ಪ್ರಕರಣದ ಮತ್ತೊಬ್ಬ ಆರೋಪಿ ಮಹಮದ್ ರಫಿಕ್ ಎಂಬಾತನನ್ನು ಬಂಧಿಸಿದ್ದಾರೆ.
ಗುಜರಾತಿನ ದಾಹೋಡಿನಲ್ಲಿರುವ ಸರಕಾರಿ ವಸಹಾತುವಿನಲ್ಲಿ ಮಹಮದ್ ರಫಿಕ್ ಅವಿತಿದ್ದರು. ಸರ್ಕಾರದ ಸೌಲಭ್ಯಗಳನ್ನುಪಡೆಯುತ್ತಿದ್ದರು. ಇದೇ ಆಧಾರದಲ್ಲಿ ಕಿಡಿಗೇಡಿಯ ಜಾಡು ಹಿಡಿದ ಯಲ್ಲಾಪುರ ಪಿಎಸ್ಐ ಸಿದ್ದು ಗುಡಿ ತಮ್ಮ ತಂಡದ ಜೊತೆ ಅಲ್ಲಿಗೆ ತೆರಳಿದರು. ಪೊಲೀಸ್ ಸಿಬ್ಬಂದಿ ಶಫಿ ಶೇಖ್, ಗಿರೀಶ ಲಮಾಣಿ ಹಾಗೂ ಪರಶುರಾಮ ದೊಡ್ಡಮನಿ ಸೇರಿ ಮಹಮದ್ ರಫಿಕ್ರನ್ನು ಹಿಡಿದರು.
12 ವರ್ಷಗಳ ಹಿಂದೆಯೇ ಪೊಲೀಸರು ಮಹಮದ್ ರಫಿಕ್’ರನ್ನು ಹಿಡಿದಿದ್ದರು. ನ್ಯಾಯಾಲಯದಿಂದ ಜಾಮೀನುಪಡೆದು ಪರಾರಿಯಾಗಿದ್ದ ಮಹಮದ್ ರಫಿಕ್ ನಂತರ ಕೋರ್ಟಿಗೆ ಬಂದಿರಲಿಲ್ಲ. ಆತನ ಬಗ್ಗೆ ಕಿಂಚಿತ್ತು ಸುಳಿವು ಸಿಗುವಂತಿರಲಿಲ್ಲ. ಅದಾಗಿಯೂ ಪೊಲೀಸರು ಚಾಣಾಕ್ಷತನದಿಂದ ಮಹಮದ್ ರಫಿಕ್’ರನ್ನು ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸಿದರು.
Discussion about this post