ಕುಡಿಯುವ ನೀರಿನ ಕಬ್ಬಿಣ ಕದ್ದು ಮಾರಾಟ ಹಾಗೂ ಸಾರ್ವಜನಿಕ ಕೆಲಸ ಮಾಡಿಕೊಡಲು ಲಂಚ ಪ್ರಕರಣದಲ್ಲಿ ಭಾಗಿಯಾಗಿರುವ ಶಿರಸಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಹಾಗೂ ಕಂದಾಯ ಅಧಿಕಾರಿ ಆರ್ ಎಂ ವರ್ಣೇಕರ್ ಅವರಿಗೆ ಜೈಲು ಊಟವೇ ಗತಿ. ಅವರಿಬ್ಬರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಈ ಇಬ್ಬರು ಶಿರಸಿಗೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ಕಬ್ಬಿಣ್ಣದ ಪೈಪ್ ಕಳ್ಳತನದ ಆರೋಪದಲ್ಲಿದ್ದರು. ಆ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ 3 ಲಕ್ಷ ರೂಪಾಯಿಯ ಲಂಚಕ್ಕೆ ಕೈ ಒಡ್ಡಿದ್ದರು. ಹಣಪಡೆಯುವ ವೇಳೆ ಲೋಕಾಯುಕ್ತರು ದಾಳಿ ನಡೆಸಿದ್ದು, ಇಬ್ಬರು ಹಣದ ಜೊತೆ ಸಿಕ್ಕಿಬಿದ್ದಿದ್ದರು.
ಶಿರಸಿ ನಗರದ ವಿಕಾಸಾಶ್ರಮ ಮೈದಾನದ ಸಮೀಪ ರಮೇಶ ಹೆಗಡೆ ಎಂಬಾತರ ಜಾಗದ ವಿಷಯವಾಗಿ ಕೆಲಸ ಮಾಡಿಕೊಡಲು ನಗರಸಭೆ ಸದಸ್ಯ ಗಣಪತಿ ನಾಯ್ಕ ಲಂಚ ಬೇಡಿದ್ದರು. ಆರ್ ಎಂ ವರ್ಣೇಕರ್ ಸಹ ಅದರಲ್ಲಿ ಪಾಲು ಕೇಳಿದ್ದು, ಹೀಗಾಗಿ ರಮೇಶ ಹೆಗಡೆ ಅವರು ಲೋಕಾಯುಕ್ತರ ಮೊರೆ ಹೋಗಿದ್ದರು.
ಜುಲೈ 16ರಂದು ಶಿರಸಿ ಎಪಿಎಂಸಿ ಹತ್ತಿರ ಇರುವ ಜಿಯೋ ಕಚೇರಿ ಬಳಿ ಲಂಚ ಸ್ವೀಕರಿಸುವಾಗ ಈ ಇಬ್ಬರು ಸಿಕ್ಕಿಬಿದ್ದರು. ಬಂಧಿತರ ವಿಚಾರಣೆ ನಡೆಯುತ್ತಿದ್ದು, ಈ ನಡುವೆ ಆರೋಪಿತರಿಬ್ಬರು ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದರು. ಆದರೆ, ಲೋಕಾಯುಕ್ತರ ಪರವಾಗಿ ವಕೀಲ ಎಲ್ ಎಂ ಪ್ರಭು `ಯಾವುದೇ ಕಾರಣಕ್ಕೂ ಭ್ರಷ್ಟರಿಗೆ ಜಾಮೀನು ಕೊಡಬಾರದು’ ಎಂದು ವಾದಿಸಿದರು. ಆರೋಪಿತರು ಪ್ರಭಾವಿಗಳಿರುವುದರಿಂದ ಸಾಕ್ಷಿ ನಾಶ ಸಾಧ್ಯತೆಯಿರುವುದನ್ನು ಅವರು ನ್ಯಾಯಾಲಯದ ಮನವರಿಕೆ ಮಾಡಿದರು.
ವಾದ ಆಲಿಸಿದ ಸೆಷನ್ಸ್ ಮತ್ತು ವಿಶೇಷ ನ್ಯಾಯಾಧೀಶರಾದ ಡಿ ಎಸ್ವಿಜಯಕುಮಾರ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.
Discussion about this post