`ಯಲ್ಲಾಪುರದ ದೇಹಳ್ಳಿ ಗ್ರಾಮ ಪಂಚಾಯತದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಈ ಬಗ್ಗೆ ದೂರು ನೀಡಲಾಗಿದೆ. ಆದರೆ, ತನಿಖೆ ನಡೆಸಲು ಬಂದ ಅಧಿಕಾರಿಯೂ ಭ್ರಷ್ಟರ ಜೊತೆ ರಾಜಿ-ಸಂಧಾನದ ಮಾತುಕಥೆ ನಡೆಸಿದ್ದಾರೆ’ ಎಂದು ಆ ಭಾಗದ ನಾಗರಾಜ ಚಾಪೆತೋಟ ದೂರಿದ್ದಾರೆ. ತನಿಖಾಧಿಕಾರಿ ವಿರುದ್ಧವೇ ಲೋಕಾಯುಕ್ತ ದೂರು ನೀಡುವುದಾಗಿ ಅವರು ಘೋಷಿಸಿದ್ದಾರೆ.
ಸಾರ್ವಜನಿಕ ಸೇವಾ ಕೇಂದ್ರದ ಮುಖ್ಯಸ್ಥ ಧೀರಜ ತಿನ್ನೇಕರ್ ಹಾಗೂ ಗ್ರಾ ಪಂ ಸದಸ್ಯ ವಿಶ್ವನಾಥ ಹಳೆಮನೆ ಜೊತೆ ನಾಗರಾಜ ಚಾಪೆತೋಟ ಸುದ್ದಿಗೋಷ್ಠಿ ನಡೆಸಿದ್ದು, ನರೆಗಾ ಒಂಬುಡ್ಸಮೆನ್ ಸಿ ಟಿ ನಾಯ್ಕ ವಿರುದ್ಧ ಹಲವು ಆರೋಪ ಮಾಡಿದ್ದಾರೆ. `ದೇಹಳ್ಳಿಯ ಶಾಲಾ ಮೈದಾನ ಸಮತಟ್ಟು ಕಾಮಗಾರಿಗೆ 2021-22ರಲ್ಲಿ 4 ಲಕ್ಷ ರೂ ಕ್ರಿಯಾಯೋಜನೆ ಮಾಡಲಾಗಿತ್ತು. ಆದರೆ, ಸುಮಾರು 70 ಸಾವಿರ ರೂ ಖರ್ಚಾಗಿದೆ. ಕಾಮಗಾರಿ ನಡೆದು ಪೂರ್ಣ ಬಿಲ್ ಆಗಿದ್ದರೂ ಕಾಮಗಾರಿಯೇ ನಡೆದಿಲ್ಲ ಎಂದು ಪಿಡಿಓ ತಪ್ಪು ಮಾಹಿತಿ ನೀಡಿದ್ದಾರೆ. ಸರಿಯಾದ ಮಾಹಿತಿ ಕೊಡದೇ ಇದ್ದಾಗ ಈ ಬಗ್ಗೆ ಜಿಲ್ಲಾ ಒಂಬುಡ್ಸಮನ್ ಅವರಿಗೆ ದೂರಿದರೂ ಸರಿಯಾಗಿ ತನಿಖೆಯಾಗಿಲ್ಲ’ ಎಂದವರು ದೂರಿದರು.
`ಒಂಬುಡ್ಸಮನ್ ಸಿ ಟಿ ನಾಯ್ಕ ಅವರು ತನಿಖೆಗೆ ಬಂದು ತಾ ಪಂA ಕಚೇರಿಯಲ್ಲಿ ಕೂತಿದ್ದರು. ಆ ದಿನ ಪಿಡಿಒ ನಸ್ರೀನ ಭಾನು ಗೈರಾಗಿದ್ದರು. ಕಾಮಗಾರಿ ವಿಚಾರವಾಗಿ ಕೈಗೊಂಡ ಕ್ರಮದ ಬಗ್ಗೆ ಕೇಳಿದಾಗ ತಾ ಪಂಗೆ ವರದಿ ನೀಡುವಂತೆ ನೋಟೀಸ್ ನೀಡಿದ್ದಾಗಿ ಒಂಬುಡ್ಸಮನ್ ಹೇಳಿದ್ದು, ಜುಲೈ 5ರಂದು ಮತ್ತೊಮ್ಮೆ ವಿಚಾರಣೆಗಾಗಿ ಕರೆದಾಗಲೂ ಪಿಡಿಒ ಹಾಜರಾಗಿಲ್ಲ’ ಎಂದು ವಿವರಿಸಿದರು.
`ಜುಲೈ 31ರಂದು ಸ್ಥಳ ಪರಿಶೀಲನೆಗೆ ಸ್ಥಳ ಭೇಟಿ ನಡೆಯಿತು. ಆದರೆ, ಆ ದಿನ ವಿಡಿಯೋ ಚಿತ್ರಿಕರಣಕ್ಕೆ ಅವಕಾಶ ಕೊಡಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಅಧಿಕಾರಿಗಳು ನಮ್ಮ ವಿರುದ್ಧ ಕಿಡಿಕಾರಿದರು’ ಎನ್ನುತ್ತ ಆ ದಿನದ ಪರಿಸ್ಥಿತಿ ಬಗ್ಗೆ ನಾಗರಾಜ ಚಾಪೆತೋಟ ವಿವರಿಸಿದರು. ಗ್ರಾ.ಪಂ ಸದಸ್ಯ ವಿಶ್ವನಾಥ ಹಳೆಮನೆ ಮಾತನಾಡಿ `ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. 25 ಕೂಲಿಗಳ ಹೆಸರು ಹಾಕಿ ಬೇರೆ 13 ಜನರ ಖಾತೆಗಳಿಗೆ ಹಣ ವರ್ಗಾಯಿಸಲಾಗಿದೆ. ನಕಲಿ ಸಹಿ ಹಾಕಿರುವ ಅನುಮಾನವಿದೆ’ ಎಂದರು.
`ಈ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದ್ದರೂ ಒಂಬುಡ್ಸಮನ್ ಸರಿಯಾದ ತನಿಖೆ ನಡೆಸಿಲ್ಲ. ಪಿಡಿಒ ಸರಿಯಾದ ಮಾಹಿತಿ ನೀಡಿಲ್ಲ. ತನಿಖೆ ನಡೆಸಲು ಬಂದ ಅಧಿಕಾರಿಗಳೇ ಭ್ರಷ್ಟಾಚಾರದಲ್ಲಿ ತೊಡಗಿರುವ ಶಂಕೆಯಿದೆ. ಹೀಗಾಗಿ ಲೋಕಾಯುಕ್ತ ದೂರು ನೀಡಲಾಗುತ್ತದೆ’ ಎಂದು ಹೇಳಿದರು.
Discussion about this post