ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಪ್ರವಾಸೋದ್ಯಮ ಅಭಿವೃದ್ಧಿ ಸಭೆ ನಡೆಸಿದ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ `ಅಗಸ್ಟ 15ರಿಂದ ಟುಪಲೋವ್ ಯುದ್ದ ವಿಮಾನ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ಜರುಗಿಸಿ’ ಎಂದು ಸೂಚನೆ ನೀಡಿದ್ದಾರೆ. ಇದರೊಂದಿಗೆ ಹೊನ್ನಾವರದ ಬೋಟಿಂಗ್, ಜಿಲ್ಲೆಯ ರೆಸಾರ್ಟ-ಹೋಂ ಸ್ಟೇ ಮಾರ್ಗದರ್ಶಿ ವಿಷಯಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ.
`ಕಾರವಾರದ ರವೀಂದ್ರ ನಾಥ್ ಕಡಲ ತೀರದಲ್ಲಿನ ಟುಪಲೋವ್ ಯುದ್ದ ವಿಮಾನವನ್ನು ಆಗಸ್ಟ್ 15ರಿಂದ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಇದರ ಉದ್ಘಾಟನೆ ಕಾರ್ಯಕ್ರಮ ನಡೆಸಲು ತಯಾರಿ ಮಾಡಬೇಕು. ಇದರೊಂದಿಗೆ ಈ ಸ್ಥಳದಲ್ಲಿ ಕೆಫೆಟೋರಿಯಾ ಮತ್ತು ಮ್ಯೂಸಿಯಂ ಕಾರ್ಯಗಳನ್ನು ಶೀಘ್ರದಲ್ಲಿ ಕೈಗೊಳ್ಳಬೇಕು’ ಎಂದು ಕೆ ಲಕ್ಷ್ಮೀಪ್ರಿಯಾ ಅವರು ಪ್ರವಾಸೋದ್ಯಮ ಅಧಿಕಾರಿಗಳಿಗೆ ಸೂಚಿಸಿದರು.
`ಹೊನ್ನಾವರದಲ್ಲಿ ಬೋಟಿಂಗ್ ಚಟುವಟಿಕೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು. ಬೋಟ್ ಮಾಲೀಕರು ಮತ್ತು ಬೋಟ್ ನಡೆಸುವವರು ಹೊಂದಿರಬೇಕಾದ ಎಲ್ಲಾ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ ನಂತರ ಅವರಿಗೆ ಅನುಮತಿ ನೀಡಬೇಕು. ಅನುಮತಿ ಪಡೆದ ಬೋಟುಗಳಿಗೆ ಮಾತ್ರ ಗುರುತಿನ ಸಂಖ್ಯೆ ನೀಡಬೇಕು. ಬೋಟಿಂಗ್ ಮತ್ತು ಪ್ರೀವೆಡ್ಡಿಂಗ್ ಚಟುವಟಿಕೆಗಳಿಗೆ ನಿರ್ದಿಷ್ಟವಾದ ದರ ನಿಗದಿ ಮಾಡಿ, ಟಿಕೆಟ್ ಕೌಂಟರ್ ವ್ಯವಸ್ಥೆ ಮಾಡಬೇಕು’ ಎಂದು ಸೂಚಿಸಿದರು. `ಬೋಟ್ಗಳಲ್ಲಿ ಪ್ರವಾಸಿಗರ ಸಂಖ್ಯೆ ನಿಗದಿಪಡಿಸಬೇಕು. ಎಲ್ಲಾ ಪ್ರವಾಸಿಗರಿಗೆ ಲೈಫ್ ಜಾಕೆಟ್ ವ್ಯವಸ್ಥೆ ಸೇರಿದಂತೆ ಸಂಪೂರ್ಣ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ನಿಗದಿಪಡಿಸಿದ ಅವಧಿಯೊಳಗೆ ಬೋಟಿಂಗ್ ನಡೆಸಲು ಅವಕಾಶ ನೀಡಬೇಕು’ ಎಂದರು.
`ಉತ್ತರ ಕನ್ನಡ ಜಿಲ್ಲೆಯಲ್ಲಿನ ಅನಧಿಕೃತ ಹೋಂ ಸ್ಟೇಗಳ ಕುರಿತಂತೆ ಪಂಚಾಯತ್, ಕಂದಾಯ ಮತ್ತು ಪೊಲೀಸ್ ಇಲಾಖೆಯ ಮೂಲಕ ಪರಿಶೀಲಿಸಿ ವರದಿಪಡೆಯಬೇಕು. ಅಧಿಕೃತವಾಗಿರುವ ಹೋಂ ಸ್ಟೇಗಳಿಗೆ ಅನುಮತಿಯನ್ನು ನೀಡುವಂತೆ ಮತ್ತು ನವೀಕರಣದ ಬಗ್ಗೆ ಅರಿವು ಮೂಡಿಸಬೇಕು’ ಎಂದರು. `ಭೀಮಕೋಲ ಕೆರೆಯನ್ನು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ದಿ ಸಮಿತಿಯ ಮೂಲಕ ನಿರ್ವಹಣೆ ಮಾಡುವ ಕುರಿತಂತೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು. ಗೋಕರ್ಣ, ಓಂ, ಕುಡ್ಲೆ, ಕಾಸರಕೋಡು, ಅಪ್ಸರಕೊಂಡ ಕಡಲತೀರ ಹಾಗೂ ತದಡಿ ಹಿನ್ನಿರ ಪ್ರದೇಶದಲ್ಲಿ ಜಲ ಸಾಹಸ ಕ್ರೀಡೆಗಳನ್ನು ನಡೆಸಲು ಟೆಂಡರ್ ಆಹ್ವಾನಿಸಿ’ ಎಂದು ಸೂಚಿಸಿದರು.
`ಕಡಲತೀರದಲ್ಲಿ ಪ್ರವಾಸಿಗರ ಸುರಕ್ಷತೆಯ ದೃಷ್ಠಿಯಿಂದ ವಾಚ್ ಟವರ್ಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕು’ ತಿಳಿಸಿದರು. ಈ ಸಭೆಯಲ್ಲಿ ಜಿ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಂಜುನಾಥ ನಾವಿ ಇತರರಿದ್ದರು.
Discussion about this post