ಕಾಮಿಡಿ ಕಿಲಾಡಿ ಖ್ಯಾತಿಯ ಚಂದ್ರಶೇಖರ ಸಿದ್ದಿ ಆತ್ಮಹತ್ಯೆಗೆ ಶರಣಾಗಿ 10 ದಿನ ಕಳೆದ ನಂತರ ಮಹತ್ವದ ವಿಡಿಯೋವೊಂದು ಹೊರ ಬಿದ್ದಿದೆ. ಚಂದ್ರಶೇಖರ ಸಿದ್ದಿ ಅವರ ಆಪ್ತರೇ ಹೊಡೆದು ಥಳಿಸಿದ ದೃಶ್ಯಾವಳಿಗಳು ಆ ವಿಡಿಯೋದಲ್ಲಿದೆ.
ಆ ವಿಡಿಯೋದಲ್ಲಿ ಚಂದ್ರಶೇಖರ ಸಿದ್ದಿ ಅವರ ಪತ್ನಿ ವನಜಾಕ್ಷಿ ಸಿದ್ದಿ ಅವರು ಬಡಿಗೆ ಹಿಡಿದು ನಿಂತಿದ್ದಾರೆ. ಜೊತೆಗೆ ತಮ್ಮ ಪತಿಯನ್ನು ಅವರು ಅದೇ ಬಡಿಗೆಯಿಂದ ಥಳಿಸಿದ್ದಾರೆ. ಅಲ್ಲಿದ್ದ ಮತ್ತಿಬ್ಬರು ಚಂದ್ರಶೇಖರ ಸಿದ್ದಿ ಅವರಿಗೆ ಹೊಡೆದಿದ್ದು, ವ್ಯಕ್ತಿಯೊಬ್ಬರು `ಹೊಡೆಯಬೇಡಿ’ ಎನ್ನುತ್ತಿರುವ ಮಾತುಗಳು ಸೆರೆಯಾಗಿದೆ. ಸೋಫಾ ಮೇಲೆ ಚಂದ್ರಶೇಖರ ಸಿದ್ದಿ ಅವರು ಕುಳಿತಿದ್ದಾಗ ಎಲ್ಲರೂ ಸೇರಿ ಒಮ್ಮೆಲೆ ಮುಗಿ ಬಿದ್ದಿರುವುದು ವಿಡಿಯೋದಲ್ಲಿ ಕಾಣುತ್ತಿದೆ.
ವೈರಲ್ ಆದ ವಿಡಿಯೋ ನೋಡಿ.. ಇನ್ನಷ್ಟು ವಿವರ ಮುಂದೆ ಓದಿ..
ಯಲ್ಲಾಪುರ ತಾಲೂಕಿನ ತೆಲಂಗಾರ್ ಬಳಿಯ ವಜ್ರಳ್ಳಿ ಚಂದ್ರಶೇಖರ ಸಿದ್ದಿ ಅವರು ಕಾಮಿಡಿ ಕಿಲಾಡಿ ಮೂಲಕ ಲಕ್ಷಾಂತರ ಜನರನ್ನು ನಕ್ಕು ನಲಿಸಿದ್ದರು. ಅದಾದ ನಂತರ ಧಾರಾವಾಹಿ ಪಾತ್ರ ನಿಭಾಯಿಸಿದ್ದ ಅವರು ಊರಿಗೆ ಮರಳಿದ್ದರು. ಕಟ್ಟಿಗೆಯ ಶ್ರೀಪತಿ ಕೋಟೆಮನೆ ಅವರ ತೋಟದ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಚಂದ್ರಶೇಖರ ಸಿದ್ದಿ ಅವರ ಜೊತೆ ಅವರ ಪತ್ನಿ ವನಜಾಕ್ಷಿ ಸಿದ್ದಿ ಹಾಗೂ ಮೂರು ವರ್ಷದ ಮಗ ಸಹ ಅಲ್ಲಿಯೇ ಉಳಿದಿದ್ದರು. ಜುಲೈ 31ರಂದು ಚಂದ್ರಶೇಖರ ಸಿದ್ದಿ ಅವರು ಅಂಗನವಾಡಿಗೆ ಹೋಗಿದ್ದ ಮಗನನ್ನು ಮನೆಗೆ ತಂದು ಬಿಟ್ಟಿದ್ದರು. ಅದಾದ ನಂತರ ತಂಬಿಗೆ ಹಿಡಿದು ಬೆಟ್ಟಕ್ಕೆ ಹೋಗಿದ್ದ ಅವರು ಅಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.
ಚಂದ್ರಶೇಖರ ಸಿದ್ದಿ ಅವರ ಸಾವಿನ ಬಗ್ಗೆ ಅವರ ತಾಯಿ ಲಕ್ಷ್ಮೀ ಸಿದ್ದಿ ಅವರು ಸಂಶಯವ್ಯಕ್ತಪಡಿಸಿದ್ದರು. 2020ರಲ್ಲಿ ಚಂದ್ರಶೇಖರ ಸಿದ್ದಿ ಅವರ ತಂದೆ ನಾಗಪ್ಪ ಸಿದ್ದಿ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಮಗ ಸಹ ಅದೇ ದಾರಿ ತುಳಿದ ಬಗ್ಗೆ ಲಕ್ಷ್ಮೀ ಸಿದ್ದಿ ನೋವು ತೋಡಿಕೊಂಡರು. `ಸೀತಾರಾಮ ಕಲ್ಯಾಣ ಧಾರಾವಾಹಿಯಲ್ಲಿ ಮಗ ಉತ್ತಮ ಪಾತ್ರ ಮಾಡಿ ಮನೆಗೆ ಬಂದಿದ್ದ. ಕಟ್ಟಿಗೆಯಲ್ಲಿ ಕೆಲಸ ಸಿಕ್ಕಿದ್ದರಿಂದ ಅಲ್ಲಿ ವಾಸವಾಗಿದ್ದ. ಆದರೆ, ಆತ ಮತ್ತೆ ಮನೆಗೆ ಮರಳಲೇ ಇಲ್ಲ’ ಎನ್ನುತ್ತ ಭಾವುಕರಾಗಿದ್ದರು.
`ಚಂದ್ರಶೇಖರ ಸಿದ್ದಿ ಮದ್ಯಪಾನ ಮಾಡಿದಾಗಲೆಲ್ಲ ನನಗೆ ಹೊಡೆಯುತ್ತಿದ್ದ. ನನ್ನ ಮೇಲೆ ಅನಗತ್ಯ ಅನುಮಾನ ಪಡುತ್ತಿದ್ದ. ಆರು ತಿಂಗಳ ಹಿಂದೆ ಈ ಬಗ್ಗೆ ಪೊಲೀಸರಿಗೆ ಹೇಳಿದ್ದು, ಆಮೇಲೆ ನಂತರ ರಾಜಿ-ಸಮಾಧಾನ ನಡೆದಿತ್ತು. ನಂತರ ನಾವಿಬ್ಬರು ಸುಂದರ ಸಂಸಾರ ನಡೆಸುತ್ತಿದ್ದೇವು. ನನಗೂ ನಾಟಕ ತರಬೇತಿ ನೀಡುವುದಾಗಿ ಚಂದ್ರಶೇಖರ್ ಸಿದ್ದಿ ಹೇಳಿದ್ದರು. ನಮ್ಮ ನಡುವೆ ಸದ್ಯ ಯಾವುದೇ ಸಮಸ್ಯೆ ಇರಲಿಲ್ಲ’ ಎಂದು ಚಂದ್ರಶೇಖರ ಸಿದ್ದಿ ಅವರ ಪತ್ನಿ ವನಜಾಕ್ಷಿ ಸಿದ್ದಿ ಹೇಳಿದ್ದಾರೆ.
ಈ ನಡುವೆ ಚಂದ್ರಶೇಖರ ಸಿದ್ದಿ ಅವರಿಗೆ ಕುಟುಂಬದವರೇ ಹೊಡೆದ ವಿಡಿಯೋ ವೈರಲ್ ಆಗಿದ್ದು, ಮೂರು ತಿಂಗಳ ಹಿಂದಿನ ವಿಡಿಯೋ ಎನ್ನುವ ಮಾಹಿತಿಯಿದೆ. ಆ ಅವಧಿಯಲ್ಲಿ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ರಾಜಿ-ಸಂಧಾನ ನಡೆದ ಬಗ್ಗೆಯೂ ಅಲ್ಲಿನವರು ಮಾಹಿತಿ ನೀಡಿದ್ದಾರೆ.
Discussion about this post