ಎರಡು ಗುಂಟೆ ಭೂಮಿಗಾಗಿ ಯಲ್ಲಾಪುರದ ಜಗದೀಶ ವಾಲೀಕರ್ ಹಾಗೂ ರತ್ನವ್ವ ವಾಲೀಕರ್ ನಡವೆ ವೈಮನಸ್ಸು ಮೂಡಿದ್ದು, ಇದೇ ವಿಷಯವಾಗಿ ಜಗಳ ತೆಗೆದ ರತ್ನವ್ವ ವಾಲೀಕರ್ ಅವರು ಜಗದೀಶ ವಾಲೀಕರ್ ಅವರಿಗೆ ಬೂಟಿನಿಂದ ಹೊಡೆದಿದ್ದಾರೆ.
ಯಲ್ಲಾಪುರದ ಹೊಸಳ್ಳಿ ಬಳಿಯ ಹದ್ದಿನಸರದಲ್ಲಿ ಜಗದೀಶ ಹನುಮಂತಪ್ಪ ವಾಲೀಕರ್ (69) ಅವರು ವಾಸವಾಗಿದ್ದಾರೆ. ಕೃಷಿ ಜೊತೆ ಕೂಲಿ ಕೆಲಸ ಮಾಡಿಕೊಂಡು ಅವರು ಬದುಕು ಕಂಡುಕೊAಡಿದ್ದಾರೆ. ಹೊಸಳ್ಳಿಯಲ್ಲಿ ರತ್ನವ್ವ ನಾಗಪ್ಪ ವಾಲೀಕರ್ (41) ಅವರು ವಾಸವಾಗಿದ್ದು, ಅವರು ಸಹ ಕೂಲಿ ಕಾರ್ಮಿಕರಾಗಿದ್ದಾರೆ. ಜಗದೀಶ ವಾಲೀಕರ್ ಹಾಗೂ ರತ್ನವ್ವ ವಾಲೀಕರ್ ಅವರು ಸಂಬAಧಿಕರಾಗಿದ್ದಾರೆ.
ಹೀಗಿರುವಾಗ ಹೊಸಳ್ಳಿ ಗ್ರಾಮದ ಸರ್ವೇ ನಂ 173ರಲ್ಲಿ ಜಗದೀಶ ವಾಲೀಕರ್ ಅವರು 2 ಗುಂಟೆ ಭೂಮಿ ಹೊಂದಿದ್ದಾರೆ. ಆ ಭೂಮಿಯ ಬಗ್ಗೆ ರತ್ನವ್ವ ವಾಲೀಕರ್ ಅವರು ಮೊದಲಿನಿಂದಲೂ ತಂಟೆ-ತಕರಾರು ಮಾಡುತ್ತಿದ್ದಾರೆ. ಫೆಬ್ರವರಿ 18ರಂದು ಸಹ ಜಾಗದ ವಿಷಯವಾಗಿ ಜಗಳ ತೆಗೆದ ರತ್ನವ್ವ ವಾಲೀಕರ್ ಅವರು ಜಗದೀಶ ವಾಲೀಕರ್ ಅವರ ಮೇಲೆ ಆಕ್ರಮಣ ನಡೆಸಿದ್ದಾರೆ. ತಮ್ಮ ಕಾಲಿನಲ್ಲಿದ್ದ ಬೂಟು ತೆಗೆದು ಜಗದೀಶ ವಾಲೀಕರ್ ಅವರ ಕೆನ್ನೆಗೆ ಬಾರಿಸಿದ್ದಾರೆ.
ಈ ನೋವು ಹಾಗೂ ಅವಮಾನ ಸಹಿಸದ ಜಗದೀಶ ವಾಲೀಕರ್ ಅವರು ಯಲ್ಲಾಪುರ ಪೊಲೀಸ್ ಠಾಣೆಗೆ ಆಗಮಿಸಿ, ತಮಗಾದ ಅನ್ಯಾಯದ ಬಗ್ಗೆ ಹೇಳಿದ್ದಾರೆ. ಯಲ್ಲಾಪುರ ಪೊಲೀಸರು ರತ್ನವ್ವ ವಾಲೀಕರ್ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಿದ್ದಾರೆ.