ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಕಿರವತ್ತಿಯ ಅರಣ್ಯ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಪಾಠ ಮಾಡಿದ್ದಾರೆ. `ಕಾನೂನು ಪುಸ್ತಕ ಹಿಡಿದು ಇಲ್ಲಿ ಕಾಡು ರಕ್ಷಿಸಲು ಆಗುವುದಿಲ್ಲ. ಜನರ ಪ್ರೀತಿ ವಿಶ್ವಾಸಗಳಿಸಿ ಕಾಡು ಉಳಿಸಿ’ ಎಂದು ಶಿವರಾಮ ಹೆಬ್ಬಾರ್ ಕಿವಿಮಾತು ಹೇಳಿದ್ದಾರೆ.
ಅರಣ್ಯಾಧಿಕಾರಿ ಕಚೇರಿ ಆವರಣದಲ್ಲಿ ಗಿಡ ನೆಟ್ಟ ಅವರು ನೇರವಾಗಿ ಕಚೇರಿ ಒಳಗೆ ಪ್ರವೇಶಿಸಿದರು. ಹೊಸದಾಗಿ ಈ ಅರಣ್ಯ ವಿಭಾಗಕ್ಕೆ ಬಂದ ಸಿಬ್ಬಂದಿಯನ್ನು ಮಾತನಾಡಿಸಿದ ಅವರು `ಎಲ್ಲಿಂದ ಬಂದ್ದಿದ್ದೀರಿ?’ ಎಂದು ವಿಚಾರಿಸಿದರು. ನಾನಾ ಭಾಗದಿಂದ ಇಲ್ಲಿಗೆ ವರ್ಗವಾಗಿ ಬಂದವರನ್ನು ಉದ್ದೇಶಿಸಿ `ಕಾನೂನು ಪುಸ್ತಕ ಇಲ್ಲಿ ಕೆಲಸಕ್ಕೆ ಬರುವುದಿಲ್ಲ. ಕಾಡು ರಕ್ಷಣೆಗಾಗಿ ಜನರ ವಿಶ್ವಾಸಗಳಿಸಿ ಕೆಲಸ ಮಾಡಬೇಕು’ ಎಂದು ಸೂಚಿಸಿದರು.
ಮನೆಯಿಂದ ಹೊರಗೆ ಬಿದ್ದರೆ ಕಾಡು ಸಿಗುತ್ತದೆ. ಅರಣ್ಯವನ್ನು ಉಳಿಸಿ ಜನರನ್ನು ಸಂಬಾಳಿಸಿ’ ಎಂದು ಶಿವರಾಮ ಹೆಬ್ಬಾರ್ ಕಿವಿಮಾತು ಹೇಳಿದರು. `ಈ ವರ್ಷ ಎಷ್ಟು ಗಿಡ ನೆಡಲು ಸಿದ್ಧತೆ ಮಾಡಿಕೊಂಡಿದ್ದೀರಿ? ಕಾಡು ರಕ್ಷಣೆಗೆ ಹೊಸದಾಗಿ ಯಾವ ಯೋಜನೆ ತಂದ್ದೀರಿ?’ ಎಂದು ವಲಯ ಅರಣ್ಯಾಧಿಕಾರಿ ಅಜಯ್ ನಾಯ್ಕ ಹಾಗೂ ಎಸಿಎಫ್ ಭಾಗ್ಯಶ್ರೀ ಬೀರಾರ್ ಅವರನ್ನು ಪ್ರಶ್ನಿಸಿದರು.
2 ಲಕ್ಷ ಗಿಡ ನೆಡಲು ಸಿದ್ಧತೆ ನಡೆದಿದೆ. ಈ ಬಾರಿ ಅರಣ್ಯದಲ್ಲು ಗಿಡ ನೆಡುವ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರ ಸಹಯೋಗಪಡೆಯಲಾಗುತ್ತದೆ. ಈ ಬಗ್ಗೆ ಇಲಾಖೆಯಿಂದಲೂ ಸೂಚನೆ ಬಂದಿದೆ’ ಎಂದು ಅರಣ್ಯಾಧಿಕಾರಿ ಅಜಯ ನಾಯ್ಕ ಮಾಹಿತಿ ನೀಡಿದರು.