ಮನೆ ನಿರ್ಮಾಣದ ವೇಳೆ 3 ಮರ ಕಡಿತ ತಪ್ಪಿನ ಪ್ರಾಯಶ್ಚಿತಕ್ಕಾಗಿ ಡಾ ಕಿರಣ್ ಎಂಬ ವಿಜ್ಞಾನಿ ಕುಮಟಾ ಬಳಿಯ ಹಿರೆಗುತ್ತಿಯಲ್ಲಿ 101 ಗಿಡಗಳನ್ನು ನೆಟ್ಟಿದ್ದು, ಅದರ ಸಂಪೂರ್ಣ ಆರೈಕೆಯ ಹೊಣೆ ಹೊತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದವರಾದ ಡಾ ಕಿರಣ್ ಅಂಕ್ಲೇಕರ್ ಅವರು ಓದಿದ್ದು, ಬೆಳೆದಿದ್ದು ಎಲ್ಲವೂ ಗೋಕರ್ಣದಲ್ಲಿ. ವನ್ಯಜೀವಿ ಛಾಯಾಚಿತ್ರದಲ್ಲಿಯೂ ಆಸಕ್ತಿ ಇರುವ ಅವರು ವನ್ಯಜೀವಿ ಹಾಗೂ ಪ್ರಾಣಿಗಳ ಆರೋಗ್ಯಕ್ಕೆ ಸಂಬoಧಿಸಿದ ಕಂಪನಿಯಲ್ಲಿ ವಿಜ್ಞಾನಿಯಾಗಿದ್ದಾರೆ. ಪುಣೆಯಲ್ಲಿರುವ ಅವರು ಕಂಪನಿ ತಯಾರಿಸುವ ಔಷಧಗಳ ಗುಣಮಟ್ಟ ಕಾಯ್ದಿರಿಸುವಿಕೆಯ ಜವಾಬ್ದಾರಿ ಹೊಂದಿದ್ದಾರೆ.
ಎoದಿಗೂ ಬೇರೆಯವರ ಮನಸ್ಸು ನೋಯಿಸದ ಅವರು ಕಳೆದ ವರ್ಷ ಅನಿವಾರ್ಯವಾಗಿ 2 ತೆಂಗು ಹಾಗೂ 1 ಮಾವಿನ ಮರ ತೆಗೆಸಿದರು. ಬಾಲ್ಯದಲ್ಲಿ ಫಲ ಕೊಟ್ಟ ಮರ ನಾಶವಾಗುವುದನ್ನು ನೋಡಲು ಅವರಿಂದ ಆಗಲಿಲ್ಲ. ಮರ ಕಡಿಸಿದ ನೋವು ಅವರನ್ನು ನಿತ್ಯ ಕಾಡಿಸುತ್ತಿತ್ತು. ಆ ಮರಗಳ ಸಾವಿನ ಸೂತಕದಿಂದ ಹೊರಬರಲಾರದೇ ಅವರು ಒದ್ದಾಡುತ್ತಿದ್ದರು. ಮಾಡಿದ ತಪ್ಪಿನ ಪ್ರಾಯಶ್ಚಿತಕ್ಕಾಗಿ 101 ಗಿಡಗಳನ್ನು ನೆಡುವ ಸಂಕಲ್ಪ ಮಾಡಿದ ಅವರು ಆ ಗಿಡಗಳ ಕಾವಲು, ನೀರುಣಿಸುವುದು ಸೇರಿ ಅವುಗಳ ಬೆಳವಣಿಗೆಯ ಸಮಗ್ರ ಹೊಣೆವಹಿಸಿಕೊಂಡಿದ್ದಾರೆ.
ಪರರಾಜ್ಯದಲ್ಲಿದ್ದರೂ ಹಾತೊರೆಯುವ ಕನ್ನಡ ಮನ:
ಇನ್ನೂ ಕಲೆ, ಸಾಹಿತ್ಯ, ನಾಟಕ, ಸಂಗೀತದಲ್ಲಿಯೂ ಅವರಿಗೆ ಅಪಾರ ಆಸಕ್ತಿ. ಹೀಗಾಗಿ `ಸಂಗಾಡಿ ಬಳಗ’ ಎಂಬ ತಂಡಕಟ್ಟಿಕೊoಡು ಸಾಹಿತ್ಯದ ಸೇವೆ ಮಾಡುತ್ತಿದ್ದಾರೆ. ಕನ್ನಡದ ಬಗ್ಗೆ ಅಪಾರ ಕಾಳಜಿ ಹೊಂದಿದ ಅವರು ತಾವು ಸಂಚರಿಸಿದ 20 ದೇಶಗಳಲ್ಲಿಯೂ ಕನ್ನಡಿಗರನ್ನು ಕೊಂಡಾಡಿದ್ದಾರೆ. ಜಿಲ್ಲೆಯ ಸಂಸ್ಕೃತಿಗಳ ಬಗ್ಗೆ ಇತರರಿಗೆ ಪರಿಚಯಿಸಿದ್ದಾರೆ. ಗೋಕರ್ಣದಲ್ಲಿ ಬಾಲ್ಯ ಕಳೆದ ನೆನಪುಗಳ ಬಗ್ಗೆ ಪುಸ್ತಕ ಬರೆಯುತ್ತಿದ್ದು, `ನೂರೊಂದು ಹನಿಗವನ’ ಎಂಬ ಇನ್ನೊಂದು ಪುಸ್ತಕವೂ ಸಿದ್ಧವಾಗಿದೆ. `ನನ್ನ ತಂದೆ-ತಾಯಿ ಶಿಕ್ಷಕರಾಗಿದ್ದರು. ನನ್ನ ಎಲ್ಲಾ ಒಳ್ಳೆಯ ಕೆಲಸಗಳಿಗೆ ಅವರೇ ಪ್ರೇರಣೆ’ ಎನ್ನುತ್ತ ಡಾ ಕಿರಣ್ ಭಾವುಕರಾದರು.