ಜನ ಜಾಗೃತಿಗಾಗಿ ಸರಕಾರ ಕೋಟ್ಯಂತರ ರೂ ವೆಚ್ಚ ಮಾಡುತ್ತಿರುವ ವೇಳೆ ಯಲ್ಲಾಪುರ ಆರ್ ಜಿ ಭಟ್ಟ ಬೆಳಸೂರು ಕೈಯಿಂದ ಹಣಭರಿಸಿ ಸ್ವಯಂ ಸ್ಪೂರ್ತಿಯಿಂದ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಯಾರ ಬಳಿಯೂ ಕೈ ಒಡ್ಡದ ಅವರು ಕಥೆ, ನಾಟಕ, ಯಕ್ಷಗಾನಗಳ ಮೂಲಕ ಕಾಲಕ್ಕೆ ತಕ್ಕಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. RG ಭಟ್ಟ ಬೆಳಸೂರು ಕೊರೊನಾ ಜಾಗೃತಿಗಾಗಿ ಕಳೆದ ವರ್ಷ 12 ನಾಟಕಗಳ ಹಸ್ತಪ್ರತಿ ರಚಿಸಿದ್ದಾರೆ. ಪ್ರಸ್ತುತ ವ್ಯಾಪಕವಾಗಿ ಹರಡುತ್ತಿರುವ ಡೆಂಗ್ಯ ಜ್ವರಕ್ಕೂ ಅದು ಅನ್ವಯ. ತಾವು ಬರೆದಿರುವ ಎಲ್ಲಾ ನಾಟಕಗಳಿಗೆ ಜೀವ ತುಂಬುದ ಕಲಾವಿದರನ್ನು ಹುಡುಕಿ, ಅವರ ಜೊತೆ ತಾವು ಸೇರಿ ವಿವಿಧಡೆ ಪ್ರದರ್ಶನ ನೀಡಿದ್ದಾರೆ. ಎಲ್ಲಾ ನಾಟಕಗಳಲ್ಲಿಯೂ ಅವರದ್ದೇ ಮುಖ್ಯ ಪಾತ್ರ. `ರೋಗಿ ವಿರುದ್ಧ ಹೋರಾಟ ಬೇಡ. ರೋಗದ ವಿರುದ್ಧ ಹೋರಾಡೋಣ’ ಎಂಬ ಸಂದೇಶ ನಾಟಕದ ಸಾರಾಂಶ. ವೈರಸ್ ಹರಡದಂತೆ ತಡೆಯಲು ಅನುಸರಿಸಬೇಕಾದ ಮುನ್ನಚ್ಚರಿಕೆಗಳ ಬಗ್ಗೆ ನಾಟಕದಲ್ಲಿ ಹೇಳಲಾಗುತ್ತದೆ. ಈಗಲೂ ಅವರು ಎಲ್ಲಡೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡುವ ಬಗ್ಗೆ ಸಾರುತ್ತಿದ್ದಾರೆ.
ಜಡ್ಡಿ, ಜೂಜನಬೈಲ್, ವೆಂಕಟ್ರಮಣ ಮಠ, ಕೊಂಕಣಕೊಪ್ಪ, ಎರಕಿನಬೈಲ್, ಸವಣಗೆರೆ ಮೊದಲಾದ ಕಡೆ ತಮ್ಮ ನಾಟಕ ಪ್ರದರ್ಶಿಸಿದ್ದಾರೆ. ಅವರ ಮೇಲಿನ ಪ್ರೀತಿಗೆ ಕೆಲ ಕಲಾವಿದರು ಯಾವುದೇ ಗೌರವಧನ ಪಡೆಯದೇ ಜನ ಜಾಗೃತಿಗಾಗಿ ಕೈ ಜೋಡಿಸಿದ್ದಾರೆ. ಪ್ರತಿ ನಾಟಕ ಪ್ರದರ್ಶನದಲ್ಲಿಯೂ 4 ಕಲಾವಿದರು ಭಾಗವಹಿಸುತ್ತಾರೆ. ಇನ್ನೂ ನಾಟಕ ಮುಗಿದ ನಂತರ ಅಲ್ಲಿ ಸೇರಿದ ಜನರಿಗೆ ತಾವು ರಚಿಸಿದ ನಾಟಕಗಳ ಪ್ರತಿಯನ್ನು ಸಹ ಉಚಿತವಾಗಿ ನೀಡುತ್ತ ಬಂದಿದ್ದಾರೆ. ಇವರು ರಚಿಸಿ ಪಾತ್ರದಾರಿಯಾಗಿ ಅಭಿನಯಿಸಿದ ನಾಟಕಗಳ ಚಿತ್ರಿಕರಣ ನಡೆಸಿ, ಅದನ್ನು ಪ್ರಸಾರ ಮಾಡುವ ಬಗ್ಗೆಯೂ ಅವರಿಗೆ ಮನಸಿದೆ. ಜೀವನೋಪಾಯಕ್ಕಾಗಿ ಕೃಷಿ, ಜೊತೆಗೆ ಹೋಂ ಗಾರ್ಡ ಆಗಿ ದುಡಿಯುತ್ತಿದ್ದ ಇವರು ಇದೀಗ ನಿವೃತ್ತರಾಗಿದ್ದಾರೆ.
ತಮ್ಮ ಸ್ವ ನಿವಾಸದಲ್ಲಿ ಇವರು ದುರ್ಗಾಂAಬಿಕಾ ಗೃಂಥಾಲಯವನ್ನು ಹೊಂದಿದ್ದು, ಯಾವುದೇ ಊರಿಗೆ ಹೋಗಬೇಕಾದರೂ ಸೈಕಲ್ ಬಳಸುತ್ತಾರೆ. ಈ ಹಿಂದೆ ಓದುಗರ ಬೇಡಿಕೆಗೆ ಅನುಗುಣವಾಗಿ ಸೈಕಲ್ ಮೂಲಕ ಅವರವರ ಮನೆಗೆ ತೆರಳಿ ಅಗತ್ಯವಿರುವ ಪುಸ್ತಕಗಳನ್ನು ಉಚಿತವಾಗಿ ಒದಗಿಸುವ ಕೆಲಸ ಮಾಡುತ್ತಿದ್ದರು. `ಜನರಿಗೆ ಆರೋಗ್ಯ ತಿಳುವಳಿಕೆ ಮೂಡಿಸಲು ಸ್ವಂತವೆಚ್ಚಲ್ಲಿ ಈ ಅಭಿಯಾನ ನಡೆಸುತ್ತಿದ್ದೇನೆ. ಅನೇಕ ಕಲಾವಿದರು ನನ್ನೊಂದಿಗೆ ಕೈ ಜೋಡಿಸಿದ್ದಾರೆ. ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ ಎಲ್ಲಾ ನಾಟಕದಲ್ಲಿಯೂ ನಾಲ್ಕು ಕಲಾವಿದರನ್ನು ಮಾತ್ರ ಬಳಸಿಕೊಂಡು 30 ನಿಮಿಷ ಪ್ರದರ್ಶನ ನೀಡಲಾಗುತ್ತಿದೆ’ ಎಂದವರು ತಿಳಿಸಿದರು.