ನಿಯಮ ಉಲ್ಲಂಘಿಸಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಯಲ್ಲಾಪುರ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಆರ್ ಡಿ ಜನಾರ್ಧನ್ ಬಿಸಿ ಮುಟ್ಟಿಸಿದ್ದಾರೆ. ಸಂಚಾರಿ ನಿಯಮ ಉಲ್ಲಂಘಿಸಿದ ಮಕ್ಕಳಿಗೆ ಅರಿವು ಮೂಡಿಸಿ, ಮತ್ತೆ ತಪ್ಪು ಮಾಡಿದರೆ ಪೊಲೀಸರನ್ನು ಕಾಲೇಜಿಗೆ ಕರೆಯಿಸುವುದಾಗಿ ಎಚ್ಚರಿಸಿದ್ದಾರೆ.
ಕಾಲೇಜಿಗೆ ಬೈಕ್ ತರುವ ವಿದ್ಯಾರ್ಥಿಗಳನ್ನು ಕರೆದ ಆರ್ ಡಿ ಜನಾರ್ಧನ್ ಅವರು ದಿಢೀರ್ ಆಗಿ ಎಲ್ಲಾ ವಾಹನಗಳ ದಾಖಲೆ ತಪಾಸಣೆ ಮಾಡಿದರು. ಈ ವೇಳೆ ಕೆಲ ವಿದ್ಯಾರ್ಥಿಗಳಲ್ಲಿ ವಾಹನ ಚಲಾಯಿಸಲು ಪರವಾನಿಗೆ ಇರಲಿಲ್ಲ. ಕೆಲವರ ವಾಹನದ ದಾಖಲೆ ಸರಿಯಾಗಿರಲಿಲ್ಲ. ಕೆಲವರು ಹೆಲ್ಮೆಟ್ ಧರಿಸುತ್ತಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಕಾಲೇಜಿನ ಶಿಸ್ತು ಸಮಿತಿಯ ಸದಸ್ಯ ಶರತ್ಕುಮಾರ್, ಮಹಾದೇವಪ್ಪ ಹುಲಕೊಪ್ಪ, ಎಂ. ವಿ. ಗೇರಗದ್ದೆ, ನಿತೇಶ್ ಡಿ. ಮೋರೆ, ಮೊಹಮ್ಮದ್ ಅಸ್ಲಂಖಾನ್ ವಿದ್ಯಾರ್ಥಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
`ಸಂಚಾರಿ ನಿಯಮ ಉಲ್ಲಂಘಿಸಿರುವುದು ಗಮನಕ್ಕೆ ಬಂದರೆ ನಾನೇ ಫೋನ್ ಮಾಡಿ ಪೊಲೀಸರನ್ನು ಕರೆಯಿಸುವೆ. ಬೈಕನ್ನು ಜಪ್ತು ಮಾಡಿ ಸರ್ಕಾರಕ್ಕೆ ಒಪ್ಪಿಸುವೆ’ ಎಂದವರು ವಿದ್ಯಾರ್ಥಿಗಳಿಗೆ ಎಚ್ಚರಿಸಿದರು. ಸಂಚಾರಿ ನಿಯಮ ಉಲ್ಲಂಘನೆಯಿoದ ಆಗುವ ಅಪಘಾತ, ಸಾವು-ನೋವುಗಳ ಬಗ್ಗೆ ಮನವರಿಕೆ ಮಾಡಿದರು. ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವಂತೆ ಪೊಲೀಸರು ಸೂಚನೆ ನೀಡಿದ ಹಿನ್ನಲೆ ಈ ಕಾರ್ಯಾಚರಣೆ ನಡೆದಿದ್ದು, ವಿಶೇಷವಾಗಿ ವಾಹನ ಪರವಾನಿಗೆ ಇಲ್ಲದವರಿಗೆ ಕಾಲೇಜು ಆವರಣದಲ್ಲಿಯೇ ಪರವಾನಿಗೆ ಕೊಡಿಸುವ ಆಂದೋಲನದ ಚಿಂತನೆ ನಡೆಯಿತು.
ಆರ್ಟಿಓ ಕಚೇರಿಗೆ ಕಾಲೇಜಿನಿಂದ ಪತ್ರ ಬರೆಯಲಾಯಿತು. ಕಾಲೇಜು ಮಕ್ಕಳಿಗೆ ವಾಹನ ಪರವಾನಿಗೆ ನೀಡುವುದು ಹಾಗೂ ಜಾಗೃತಿ ಮೂಡಿಸಲು ಅಭಿಯಾನ ನಡೆಸುವಂತೆ ಆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.