ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು (Madenur Manu) ಶನಿವಾರ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆ ಆಗಿದ್ದಾರೆ.
ಪರಪ್ಪನ ಅಗ್ರಹಾರ ಜೈಲು ಸೇರಿ ನ್ಯಾಯಾಂಗ ಬಂಧನದಲ್ಲಿದ್ದ ಮನು ಇಂದು ರಿಲೀಸ್ ಆದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಸಹ ಕಲಾವಿದೆಯ ಮೇಲೆ ರೇಪ್ – ಮಡೆನೂರು ಮನು ಜೈಲುಪಾಲು
ಶಿವಣ್ಣ, ದರ್ಶನ್ ಹಾಗೂ ಧ್ರುವ ಸರ್ಜಾ ಬಗ್ಗೆ ಮಾತನಾಡಿರುವ ಆಡಿಯೋ ನನ್ನದಲ್ಲ. ನಾನು ಮೊದಲು ಶಿವಣ್ಣ ಅವರನ್ನು ಭೇಟಿ ಮಾಡಿ ಅವರಿಗೆ ನಡೆದ ಎಲ್ಲಾ ಘಟನೆಯನ್ನು ತಿಳಿಸುತ್ತೇನೆ. ಮೂರು ವರ್ಷಗಳ ಶ್ರಮವನ್ನು ಹಾಳು ಮಾಡಿದ್ದಾರೆ. ಐದಾರು ಮಂದಿ ಸೇರಿಕೊಂಡು ನನ್ನ ಮೇಲೆ ಪ್ಲಾನ್ ಮಾಡಿ ಈ ರೀತಿ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಾಕಷ್ಟು ಅಡೆತಡೆಗಳ ನಡುವೆ ಸಿನಿಮಾ ರಿಲೀಸ್ ಆಯ್ತು. ನನ್ನ ವಿರುದ್ಧ ಪ್ರತಿ ಹಂತದಲ್ಲಿಯೂ ಷಡ್ಯಂತ್ರ ನಡೆದಿದೆ. ಸಿನಿಮಾ ರಿಲೀಸ್ಗೂ ಮೊದಲೇ ಕುಣಿಗಲ್ ಬಳಿ ಮೊಟ್ಟೆ ಹೊಡೆದಿದ್ದಾರೆ. ನನ್ನ ಮೇಲೆ ಹಲ್ಲೆ ನಡೆಸಿ ಬಟ್ಟೆಗಳನ್ನು ಹರಿದಿದ್ದಾರೆ. ಅವರೇ ನನ್ನ ಮೇಲೆ ಕೇಸ್ ಮಾಡಿದ್ದಾರೆ. ಏನೇ ಆದರೂ ಕಲೆ ತಾಯಿ ಶಾರದೆ ಕೈ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಟ ಮಡೆನೂರು ಮನು ರೇಪ್ ಕೇಸ್ – 31 ತಿಂಗಳ ವಾಟ್ಸಾಪ್ ಚಾಟ್ ಪಡೆದಿರೋ ಪೊಲೀಸರು
ಅತ್ಯಾಚಾರ ಕೇಸ್ನಲ್ಲಿ ಕಾನೂನು ಹೋರಾಟ ಮಾಡುತ್ತೇನೆ. ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇದೆ ಎಂದು ಮನು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.