ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತರಾಗಿ ಶ್ರಮಿಸಿದ ಯಲ್ಲಾಪುರದ ಸತೀಶ್ ನಾಯ್ಕ ಅವರಿಗೆ ಕೆಪಿಸಿಸಿ ಯಲ್ಲಾಪುರ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸ್ಥಾನ ನೀಡಿದೆ. ಆ ಮೂಲಕ ಪಕ್ಷದ ಸಭೆ-ಸಮಾರಂಭಗಳಲ್ಲಿ ಬ್ಯಾನರ್ ಕಟ್ಟುವ ಕೆಲಸದಿಂದಹಿಡಿದು ವೇದಿಕೆ ನಿರ್ಮಾಣದವರೆಗೂ ದುಡಿದ ಕಾರ್ಯಕರ್ತನನ್ನು ಕಾಂಗ್ರೆಸ್ ಗುರುತಿಸಿದೆ.
ಸತೀಶ ನಾಯ್ಕ ಅವರು ಶಾಸಕ ಶಿವರಾಮ ಹೆಬ್ಬಾರ್ ಅವರ ಗರಡಿಯಲ್ಲಿ ಪಳಗಿದವರು. ಎರಡು ದಶಕಗಳಿಂದ ಅವರು ಶಿವರಾಮ ಹೆಬ್ಬಾರ್ ಅವರ ಜೊತೆಯಿದ್ದಾರೆ. ಮಂಜುನಾಥ ನಗರದ ಮೂಲ ನಿವಾಸಿಯಾಗಿರುವ ಅವರು ಆ ಭಾಗದ ವಾರ್ಡ ಸದಸ್ಯರಾಗಿಯೂ ಅವರು ಕೆಲಸ ಮಾಡುತ್ತಿದ್ದಾರೆ.
ತುರ್ತು ಸನ್ನಿವೇಶಗಳಲ್ಲಿ ಜನ ಫೋನ್ ಮಾಡಿದಾಗ ತಕ್ಷಣ ಸ್ಥಳಕ್ಕೆ ಹೊಗಿ ಅವರ ಸಮಸ್ಯೆ ಆಲಿಸುತ್ತಿದ್ದಾರೆ. ಕಲೆ, ಸಾಹಿತ್ಯದ ವಿಷಯದಲ್ಲಿಯೂ ಸತೀಶ ನಾಯ್ಕ ಅವರು ಮುಂಚೂಣಿಯಲ್ಲಿದ್ದಾರೆ. ಪಟ್ಟಣ ಪಂಚಾಯತ ಅಧ್ಯಕ್ಷ ಆಕಾಂಕ್ಷಿಯಾಗಿದ್ದ ಸತೀಶ್ ನಾಯ್ಕ ಅವರಿಗೆ ಕೊನೆಕ್ಷಣದಲ್ಲಿ ಆ ಹುದ್ದೆ ಕೈ ತಪ್ಪಿತ್ತು. ಪಟ್ಟಣ ಪಂಚಾಯತ ಅಧಿಕಾರ ಅವಧಿ ಮುಗಿಯುವ ಸಮಯದಲ್ಲಿ ಅವರಿಗೆ ಪಕ್ಷ ನಗರ ಘಟಕದ ಅಧ್ಯಕ್ಷ ಸ್ಥಾನ ನೀಡಿದೆ.

ಶಾಸಕ ಶಿವರಾಮ ಹೆಬ್ಬಾರ್ ಅವರ ಜೊತೆ ಮಾಜಿ ಶಾಸಕ ವಿ ಎಸ್ ಪಾಟೀಲ್, ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್, ಪ್ರಮುಖರಾದ ವಿಜಯ್ ಮಿರಾಶಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ ಎಸ್ ಭಟ್ ಅವರ ಶಿಫಾರಸ್ಸಿನಿಂದ ಸತೀಶ್ ನಾಯ್ಕ ಅವರಿಗೆ ಈ ಹುದ್ದೆ ಸಿಕ್ಕಿದೆ. ಮುಂದಿನ ಚುನಾವಣೆಗೆ ಈ ಹುದ್ದೆ ಮಹತ್ವಪೂರ್ಣವಾಗಿದೆ.