ಅರಣ್ಯ ಇಲಾಖೆಯಲ್ಲಿ ನಡೆದ ಅಕ್ರಮ, ಅವ್ಯವಹಾರದ ತನಿಖೆ ಜೊತೆ ಅರಣ್ಯಾಧಿಕಾರಿಗಳ ದಬ್ಬಾಳಿಕೆಗೂ ಕಡಿವಾಣ ಹಾಕುವಂತೆ ಜೊಯಿಡಾದ ಜನ ಆಗ್ರಹಿಸಿದ್ದಾರೆ. ಕುಂಬಾರವಾಡಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಜಮಾಯಿಸಿದ ಜನ ತಮ್ಮ ಬೇಡಿಕೆ ಈಡೇರದೇ ಇದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
Advertisement. Scroll to continue reading.
`ಅಕ್ಟೊಬರ್ 30ರ ಒಳಗೆ ತಹಶೀಲ್ದಾರ್ ಮಧ್ಯಸ್ಥಿಕೆಯಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ಹೋರಾಟಗಾರರ ಸಭೆ ನಡೆಯಬೇಕು. ಇಲ್ಲವಾದಲ್ಲಿ ದಾಂಡೇಲಿ ಡಿಎಫ್ಓ ಕಚೇರಿ ಎದುರು ಉಗ್ರ ಹೊರಾಟ ನಡೆಸುತ್ತೇವೆ’ ಎಂದು ಅಲ್ಲಿನವರು ಹೇಳಿದ್ದು, ಸಭೆ ನಡೆಸುವ ಭರವಸೆ ಹಿನ್ನಲೆ ಬುಧವಾರದ ಹೋರಾಟವನ್ನು ಹಿಂಪಡೆದಿದ್ದಾರೆ. `ಅರಣ್ಯ ಇಲಾಖೆ ದೌರ್ಜನ್ಯ ಹಾಗೂ ಪ್ಯಾಕೇಜ್ ವಿಷಯದಲ್ಲಿ 152 ಕೋಟಿ ಹಗರಣ ನಡೆದಿದ್ದು, ಆ ಬಗ್ಗೆ ಸಮಗ್ರ ತನಿಖೆ ನಡೆಯಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕುಣಬಿ ಸಮಾಜ ಜಿಲ್ಲಾ ಅಧ್ಯಕ್ಷ ಸುಭಾಷ ಗಾವಡಾ ಮಾತನಾಡಿ `ಈ ಕಾಡು, ಜಮೀನು ಜನರ ಹಕ್ಕು. ಇದನ್ನು ಮೊಟಕುಗೊಳಿಸುವ ಹುನ್ನಾರ ಸಹಿಸುವುದಿಲ್ಲ. ಪರಿಸರ ರಕ್ಷಣೆ ಸ್ಥಳೀಯರ ರಕ್ತದಲ್ಲಿದ್ದು, ಸರ್ಕಾರಿ ಹಣ ದುರುಪಯೋಗ ಸಹಿಸುವುದಿಲ್ಲ’ ಎಂದರು. `ಬಿಎಸ್ಎನ್ಎಲ್ ನೆಟವರ್ಕ ಸ್ಥಾಪನೆಗೆ ಸಹ ಅರಣ್ಯ ಇಲಾಖೆ ತೊಂದರೆ ಮಾಡುತ್ತಿದೆ’ ಎಂದು ದತ್ತಾರಾಮ ದೇಸಾಯಿ ದೂರಿದರು. ಕೃಷಿ ಸಮಾಜದ ಜಿಲ್ಲಾಧ್ಯಕ್ಷ ಗೋಪಾಲ ಭಟ್ ಮಾತನಾಡಿ `ಅರಣ್ಯ ಹಕ್ಕು ಕಾಯ್ದೆಯ ಸಾಮುದಾಯಿಕ ಹಕ್ಕು ಜಾರಿ ಮಾಡಿದರೆ ಇಲ್ಲಿ ಅರಣ್ಯ ಇಲಾಖೆಯೇ ಇರುವುದಿಲ್ಲ. ಜನರ ಪರವಾಗಿರುವ ಕಾನೂನಿನಲ್ಲಿ ಜನ ಹಕ್ಕು ಕೇಳಿಪಡೆಯಬೇಕಾಗಿದ್ದು, ಜನಪ್ರತಿನಿಧಿಗಳು ಜನಪರವಾಗಿರಬೇಕು’ ಎಂದರು.
`ಅರಣ್ಯ ರಕ್ಷಕರು ಜನರ ಮನೆಗೆ ನುಗ್ಗಿ ದಬ್ಬಾಳಿಕೆ ಮಾಡುತ್ತಿದ್ದಾರೆ. ಅರಣ್ಯ ಇಲಾಖೆಯವರಿಂದಲೇ ಕಾಡು ನಾಶವಾಗುತ್ತಿದೆ’ ಎಂದು ಪ್ರತಿಭಟನಾಕಾರರು ಕೆಲ ನಿದರ್ಶನಗಳನ್ನು ನೀಡಿದರು. `ಕಾಳಿ ಹುಲಿ ಯೋಜನೆ ವ್ಯಾಪ್ತಿಯಲ್ಲಿ ವಾಸಿಸುವ ಮೂಲನಿವಾಸಿಗಳಿಗೆ ಅಧಿಕಾರಿಗಳು ಅನಗತ್ಯ ತೊಂದರೆ ಮಾಡುತ್ತಿದ್ದಾರೆ. ಬೇರೆ ಬೇರೆ ಭಾಗದ ಕರಡಿ, ಹುಲಿಗಳನ್ನು ಇಲ್ಲಿ ಬಿಟ್ಟು ಜನರಲ್ಲಿ ಭಯ ಹುಟ್ಟಿಸಲಾಗುತ್ತಿದೆ’ ಎಂದು ದೂರಿದರು.