ಯಲ್ಲಾಪುರದ ವಿಶ್ವೇಶ್ವರ ಹೆಬ್ಬಾರ್ ಅವರ ತೋಟಕ್ಕೆ ನುಗ್ಗಿ ಅಡಿಕೆ ಕಳ್ಳತನ ಮಾಡಿದ್ದ ಶಿರಸಿಯ ಭಾಸ್ಕರ ಬೋವಿವಡ್ಡರ್ ಹಾಗೂ ಯಲ್ಲಾಪುರದ ಹರುಷ ಬೋವಿವಡ್ಡರ್ ಅವರು ದೇವಾಲಯವನ್ನು ದರೋಡೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಅವರಿಬ್ಬರು ಸೇರಿ ಹಾಸಣಗಿ ಬಳಿಯ ಬೆಂಡಿಗೇರಿ ಗ್ರಾಮದ ದ್ಯಾಮವ್ವ ದೇವಾಲಯ ಕಾಣಿಕೆ ಹುಂಡಿ ಒಡೆದ ಅನುಮಾನವ್ಯಕ್ತವಾಗಿದೆ.
ಯಲ್ಲಾಪುರ ಮಂಚಿಕೇರಿ ಬಳಿಯ ಬೆಂಡಿಗೇರಿ ಹರುಷ ಈರಪ್ಪ ಬೋವಿವಡ್ಡರ್ (24) ಹಾಗೂ ಶಿರಸಿ ಗೌಡಳ್ಳಿ ಬಳಿಯ ಕೋಗುಲಕೋಳಿಯ ಭಾಸ್ಕರ ಕೃಷ್ಣ ಭೋವಿವಡ್ಡರ್ (19) ಸೇರಿ ನವೆಂಬರ್ 5ರಂದು ಯಲ್ಲಾಪುರದ ಇಡಗುಂದಿ ಬಳಿಯ ದೋಣಗಾರದಲ್ಲಿ ವಾಸವಾಗಿರುವ ವಿಶ್ವೇಶ್ವರ ವೆಂಕಟ್ರಮಣ ಹೆಬ್ಬಾರ್ ಅವರ ಅಡಿಕೆ ತೋಟಕ್ಕೆ ನುಗ್ಗಿದ್ದರು. ಅವರ ಅಡಿಕೆ ತೋಟದಲ್ಲಿ ಕಳ್ಳತನ ಮಾಡಿ ಅವರು ಪರಾರಿಯಾಗಿದ್ದು, ವಿಶ್ವೇಶ್ವರ ಹೆಬ್ಬಾರ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದಾಗ ಕಳ್ಳರಿಬ್ಬರು ಸಿಕ್ಕಿಬಿದ್ದಿದ್ದರು.
ಪೊಲೀಸರನ್ನು ಕಂಡ ಕೂಡಲೇ ಅವರಿಬ್ಬರು ತಮ್ಮ ತಪ್ಪು ಒಪ್ಪಿಕೊಂಡಿದ್ದರು. ಪೊಲೀಸರು ಆ ಕಳ್ಳರಿಂದ 50 ಸಾವಿರ ಮೌಲ್ಯದ 4.54 ಕ್ವಿಂಟಲ್ ಅಡಿಕೆಯನ್ನು ವಶಕ್ಕೆಪಡೆದಿದ್ದರು. ಈ ನಡುವೆ ಹಾಸಣಗಿಯ ಶಿರನಾಳ ಬಳಿಯಿರುವ ಬೆಂಡಿಗೇರಿಯ ದ್ಯಾಮವ್ವ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿತು. ದೇವಾಲಯದ ಬಾಗಿಲು ಒಡೆದ ಕಳ್ಳರು ಕಾಣಿಕೆ ಹುಂಡಿಯಲ್ಲಿದ್ದ 14 ಸಾವಿರ ರೂ ಹಣ ಎಗರಿಸಿದ್ದರು. ಅಕ್ಟೊಬರ್ 31ರಿಂದ ನವೆಂಬರ್ 1ರ ಅವಧಿಯಲ್ಲಿ ಈ ಕಳ್ಳತನ ನಡೆದಿದ್ದು, ಅದೇ ಊರಿನ ವಿನೋದ ಸುರೇಶ ತಳ್ಳೇಕರ್ ಅವರು ಹರುಷ ಈರಪ್ಪ ಬೋವಿವಡ್ಡರ್ (24) ಹಾಗೂ ಭಾಸ್ಕರ ಕೃಷ್ಣ ಭೋವಿವಡ್ಡರ್ ಅವರ ಮೇಲೆ ಅನುಮಾನವ್ಯಕ್ತಪಡಿಸಿದ್ದರು.
ಸದ್ಯ ಅಡಿಕೆ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಅವರಿಬ್ಬರನ್ನು ಬಂಧಿಸಿದ ವಿಷಯ ಅರಿತ ವಿನೋದ ಸುರೇಶ ತಳ್ಳೇಕರ್ ಅವರು ದೇವಾಲಯ ಕಳ್ಳತನದ ಬಗ್ಗೆಯೂ ಪೊಲೀಸ್ ದೂರು ನೀಡಿದರು. ಹರುಷ ಈರಪ್ಪ ಬೋವಿವಡ್ಡರ್ (24) ಹಾಗೂ ಭಾಸ್ಕರ ಕೃಷ್ಣ ಭೋವಿವಡ್ಡರ್ ಮೇಲೆ ಅನುಮಾನವಿದ್ದು, ಅವರನ್ನು ಈ ವಿಷಯವಾಗಿಯೂ ವಿಚಾರಣೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದರು. ಈ ಹಿನ್ನಲೆ ಪೊಲೀಸರು ಮತ್ತೊಂದು ಪ್ರಕರಣ ದಾಕಲಿಸಿ ವಿಚಾರಣೆ ನಡೆಸುತ್ತಿದ್ದಾರೆ.