ಶಿರಸಿಯಲ್ಲಿ ಬೀದಿ ನಾಯಿಗಳ ಕಾಟ ಜೋರಾಗಿದ್ದು, ಬಿರಿಯಾನಿ ಹೊಟೇಲಿಗೆ ಹೋಗಬೇಕಿದ್ದ ಎರಡು ಕುರಿಗಳ ಮೇಲೆ ಅವು ದಾಳಿ ನಡೆಸಿದೆ. ಬೀದಿ ನಾಯಿ ಕಾಟಕ್ಕೆ ಎರಡು ಕುರಿ ಸಾವನಪ್ಪಿದ್ದು, ಇಷ್ಟು ದಿನಗಳ ಕಾಲ ಅವನ್ನು ಸಾಕಿದ್ದ ಹೈನುಗಾರನಿಗೂ ನಷ್ಟವಾಗಿದೆ.
Advertisement. Scroll to continue reading.
ಶಿರಸಿಯ ಎಲ್ಲಡೆ ಬೀದಿ ನಾಯಿಗಳ ಹಾವಳಿ ಕಾಣಿಸುತ್ತಿದೆ. ಅದರಲ್ಲಿಯೂ ಕಸ್ತೂರಿಬಾ ನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ನಾಯಿ ಕಾಟಕ್ಕೆ ಕಡಿವಾಣ ಬಿದ್ದಿಲ್ಲ. ಸಾಕಷ್ಟು ಜನರಿಗೆ ಕಚ್ಚಿ ಗಾಯಗೊಳಿಸಿದ ಬೀದಿ ನಾಯಿ ಇದೀಗ ಸಾಕು ಪ್ರಾಣಿಗಳ ಮೇಲೆಯೂ ಆಕ್ರಮಣ ನಡೆಸುತ್ತಿದೆ. ಗುಂಪಿನಲ್ಲಿ ಬಂದ ಬೀದಿ ನಾಯಿಗಳು ಕುರಿಗಳ ಮೇಲೆ ದಾಳಿ ನಡೆಸಿದ ಪರಿಣಾಮ ಕಸ್ತೂರಿಬಾ ನಗರದಲ್ಲಿನ ಎರಡು ಕುರಿ ಮರಿಗಳು ಅಲ್ಲಿಯೇ ಸಾವನಪ್ಪಿದೆ.
ಬೀಡಾಡಿ ಜಾನುವಾರುಗಳ ಜೊತೆ ಬೀದಿ ನಾಯಿಗಳ ನಿಯಂತ್ರಣಕ್ಕೆ ನಗರಸಭೆ ಸಾಕಷ್ಟು ಪ್ರಯತ್ನ ನಡೆಸಿದೆ. ಇದಕ್ಕಾಗಿ ಹಣವನ್ನು ಸಹ ವೆಚ್ಚ ಮಾಡುತ್ತಿದೆ. ಆದರೆ, ಇದರಿಂದ ಯಾವ ಪ್ರಯೋಜನವೂ ಆಗುತ್ತಿಲ್ಲ. ಬೀದಿ ನಾಯಿಗಳ ಸಂತಾನ ಹರಣ ನೆಪದಲ್ಲಿ ಲಕ್ಷಾಂತರ ರೂ ಕಾಸು ವೆಚ್ಚವಾಗುತ್ತಿರುವುದು ಬಿಟ್ಟರೆ ನಾಯಿಗಳ ನಿಯಂತ್ರಣಕ್ಕೆ ಕೊನೆ ಇಲ್ಲ.
ಬೀಡಾಡಿ ಜಾನುವಾರುಗಳ ನಿಯಂತ್ರಣಕ್ಕಾಗಿ ಶಾಸಕ-ಸಂಸದರ ಮುಂದಾಳತ್ವದಲ್ಲಿ ಸಭೆ ನಡೆದಿದೆ. ಬೀದಿ ಬೀದಿಯಲ್ಲಿರುವ ಜಾನುವಾರುಗಳ ಅಪಾಯದ ಬಗ್ಗೆ ಸಭೆಯಲ್ಲಿ ಸಾಕಷ್ಟು ಚರ್ಚೆಯೂ ನಡೆದಿದೆ. ಬೀಡಾಡಿ ಜಾನುವಾರು ನಿಯಂತ್ರಣಕ್ಕೆ ಕಠಿಣ ಕ್ರಮ ಜರುಗಿಸುವುದಾಗಿಯೂ ನಗರಸಭೆ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಆ ಕೆಲಸ ಮಾತ್ರ ಸರಿಯಾಗಿ ನಡೆದಿಲ್ಲ. ಈಗಾಲೇ ಅನೇಕರು ಬೀದಿ ನಾಯಿಗಳ ಆಕ್ರಮಣದಿಂದ ಸಂಕಷ್ಟ ಅನುಭವಿಸಿದ್ದು, ನಿಯಮಾನುಸಾರ ಅವರಿಗೆ ಪರಿಹಾರವೂ ಸಿಕ್ಕಿಲ್ಲ.