ಆರೋಗ್ಯ ರಕ್ಷಣೆಯ ಬಗ್ಗೆ ನಿರಂತರ ಅರಿವು ಮೂಡಿಸುತ್ತಿರುವ ಶಿರಸಿಯ ಅಸ್ಮಿತೆ ಪೌಂಡೇಶನ್ ಉಂಚಳ್ಳಿಯಲ್ಲಿ ಕಾನ್ಸರ್ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ಜನ ಜಾಗೃತಿ ಕಾರ್ಯಕ್ರಮ ನಡೆಸಿದೆ. ಬೆಂಗಳೂರಿನ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ವೈದ್ಯಾಧಿಕಾರಿಗಳು ಭಾಗವಹಿಸಿ ಕಾನ್ಸರ್ ಆಗು-ಹೋಗು ವಿಚಾರವಾಗಿ ಅರಿವು ಮೂಡಿಸಿದ್ದಾರೆ.
ಶಿರಸಿಯ ಅಸ್ಮಿತೆ ಫೌಂಡೇಶನ್ ಆರೋಗ್ಯ ರಕ್ಷಣೆ ವಿಚಾರವಾಗಿ ಕಳೆದ ಒಂದು ವರ್ಷದಿಂದ ಶ್ರಮಿಸುತ್ತಿದೆ. ಅದರಲ್ಲಿಯೂ ಮುಖ್ಯವಾಗಿ ಮಾಹಾಮಾರಿ ಕಾನ್ಸರ್ ವಿರುದ್ಧ ಈ ಸಂಸ್ಥೆ ಹೋರಾಡುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಕಾನ್ಸರ್ ಕುರಿತು ಅರಿವು ಮೂಡಿಸುವುದಕ್ಕಾಗಿ ನಾನಾ ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅದರ ಭಾಗವಾಗಿ ಸದ್ಯ ಆರೋಗ್ಯ ಇಲಾಖೆ ಸಹಯೋಗದಲ್ಲಿ ಉಂಚಳ್ಳಿ ಗ್ರಾಮ ಪಂಚಾಯತದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಶಿಬಿರ ನಡೆಸಿದೆ.
`ಜನರಲ್ಲಿ ಕಾನ್ಸರ್ ಕುರಿತು ಅನೇಕ ತಪ್ಪು ತಿಳುವಳಿಕೆಗಳಿವೆ. ರೋಗದ ಬಗ್ಗೆ ಭಯಪಡುವ ಬದಲು ಸೂಕ್ತ ತಪಾಸಣೆ ನಡೆಸಿದರೆ ಆರೋಗ್ಯವಂತ ಜೀವನ ನಡೆಸಲು ಸಾಧ್ಯ’ ಎಂದು ಈ ಶಿಬಿರದಲ್ಲಿ ಭಾಗವಹಿಸಿದ ಅಸ್ಮಿತೆ ಫೌಂಡೇಶನ್ ಕಾರ್ಯನಿರ್ವಾಹಕ ನಿರ್ದೇಶಕ ಡಾ ರಿಯಾಜ್ ಸಾಗರ್ ಅವರು ಹೇಳಿದ್ದಾರೆ. `ಅಗತ್ಯ ತಪಾಸಣೆ, ನಿರಂತರ ಚಿಕಿತ್ಸೆ ಹಾಗೂ ಔಷಧೋಪಚಾರಗಳಿಂದ ರೋಗದ ವಿರುದ್ಧ ಹೋರಾಟ ಸಾಧ್ಯ’ ಎಂದವರು ಧೈರ್ಯ ತುಂಬಿದ್ದಾರೆ.
ಈ ದಿನ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ನುರಿತ ವೈದ್ಯರು ಬಾಯಿ ಆರೋಗ್ಯ, ಸ್ತನ ಕ್ಯಾನ್ಸರ್ ತಪಾಸಣೆ ಹಾಗೂ ಗರ್ಭಕಂಠ ಕ್ಯಾನ್ಸರ್ ಕುರಿತು ರೋಗಿಗಳಿಗೆ ಮಾಹಿತಿ ನೀಡಿದರು. ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಹರ್ಷ ರಾಥೋಡ್, ಕಾರ್ಯದರ್ಶಿ ಅಶೋಕ್ ನಾಯ್ಕ, ವೈದ್ಯರಾದ ಡಾ ಮಮತಾ ಹೆಗಡೆ, ಡಾ ಸೌಭಾಗ್ಯ, ಡಾ ಅರವಿಂದ ಇನ್ನಿತರರು ರೋಗಿಗಳ ಆರೈಕೆ ಮಾಡಿದರು.