ಹೊನ್ನಾವರದ ಮಕ್ಕಳ ಉದ್ಯಾನವನದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಬಗ್ಗೆ ಅರಿಯಲು ಪೊಲೀಸರು ಆಸಕ್ತಿವಹಿಸಿದ್ದಾರೆ. ಮಂಗಳವಾರ ಪೊಲೀಸರು ಭೇಟಿ ನೀಡಿದ್ದು, ಅಲ್ಲಿನ ವಾತಾವರಣ ಪರಿಶೀಲಿಸಿದ್ದಾರೆ.
ಹೆದ್ದಾರಿ ಅಂಚಿನಲ್ಲಿರುವ ಮಕ್ಕಳ ಉದ್ಯಾನವನದಲ್ಲಿ ಪುಂಡ-ಪೋಕರಿಗಳ ಹಾವಳಿ ಹೆಚ್ಚಾಗಿದ್ದು, ಎಲ್ಲೆಂದರಲ್ಲಿ ಸರಾಯಿ ಬಾಟಲಿಗಳು ಬಿದ್ದಿದ್ದವು. ಅರ್ದ ಸೇದಿದ ಸಿಗರೇಟುಗಳು ಅಲ್ಲಿ ಸಾಕಷ್ಟು ಪ್ರಮಾಣದಲ್ಲಿದ್ದವು. ಶೌಚಾಲಯ ಸರಿಯಾಗಿರಲಿಲ್ಲ. ಮಕ್ಕಳ ಆಟಿಕೆಗಳು ಮುರಿದಿದ್ದವು. ೨೦೨೩ರಲ್ಲಿ ಸ್ಥಾಪಿಸಲಾದ ಈ ಉದ್ಯಾನವನ ಎರಡೇ ವರ್ಷದಲ್ಲಿ ಹಾಳಾಗಿದ್ದವು. ಒಟ್ಟಿನಲ್ಲಿ ಮಕ್ಕಳಿಗಾಗಿ ನಿರ್ಮಿಸಿದ ಉದ್ಯಾನವನಕ್ಕೆ ಮಕ್ಕಳು ಪ್ರವೇಶಿಸುವ ಹಾಗಿರಲಿಲ್ಲ.
ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡಿಗ್ರಸ್ ಅವರು ಈ ಬಗ್ಗೆ ದೂರು ಸಲ್ಲಿಸಿದ್ದರು. ಅಲ್ಲಿನ ಅಕ್ರಮ ಚಟುವಟಿಕೆ ತಡೆಯುವಂತೆ ಆಗ್ರಹಿಸಿದ್ದರು. ಆ ದೂರಿನ ಹಿನ್ನಲೆ ಪಿಎಸ್ಐ ಮಂಜುನಾಥ ಅವರು ಮಂಗಳವಾರ ಉದ್ಯಾನವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. `ಪೊಲೀಸ್ ಬೀಟ್ ವ್ಯವಸ್ಥೆ ಮೂಲಕ ಉದ್ಯಾನವನದಲ್ಲಿನ ಅಕ್ರಮ ಚಟುವಟಿಕೆ ತಡೆಯಬೇಕು’ ಎಂದು ಸುಧಾಕರ ನಾಯ್ಕ ಹಾಗೂ ಹನುಮಂತ ಗೌಡ ಅವರು ಆಗ್ರಹಿಸಿದ್ದಾರೆ. ಪೊಲೀಸರು ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.