ಜನ ವಿರೋಧದ ನಡುವೆಯೂ ಅಂಕೋಲಾದ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣದ ಸಿದ್ಧತೆ ನಡೆದಿದೆ. ಈ ಹಿನ್ನಲೆ ಜನಾಕ್ರೋಶ ಹೆಚ್ಚಾಗಿದ್ದು, ನವೆಂಬರ್ 25ಕ್ಕೆ ಅಂಕೋಲಾ ಬಂದ್’ಗೆ ಕರೆ ನೀಡಲಾಗಿದೆ.
ವಾಣಿಜ್ಯ ಬಂದರಿಗೆ ವಿರೋಧವ್ಯಕ್ತಪಡಿಸಿ ಅಂಕೋಲಾದಲ್ಲಿ ಕಳೆದ 9 ದಿನಗಳಿಂದ ಧರಣಿ ನಡೆಯುತ್ತಿದೆ. ಈ ಹಿಂದೆ ಸಹ ಸಾಕಷ್ಟು ಪ್ರತಿಭಟನೆ, ಹೋರಾಟಗಳು ನಡೆದಿವೆ. ಅದಾಗಿಯೂ ಜನರ ಸಮಸ್ಯೆ ಜನಪ್ರತಿನಿಧಿಗಳಿಗೆ ಅರ್ಥವಾಗಿಲ್ಲ. ಈ ಹಿನ್ನಲೆ ಬಂದರು ವಿರೋಧಿಸಿ `ಅಂಕೋಲಾ ಬಂದ್’ ಮಾಡಿ ಬಿಸಿ ಮುಟ್ಟಿಸಲು ನಿರ್ಧರಿಸಿದ್ದಾರೆ.
ಕೇಣಿಯಲ್ಲಿ ಪ್ರಸ್ತಾವಿತ ವಾಣಿಜ್ಯ ಬಂದರು ನಿರ್ಮಾಣವನ್ನು ವಿರೋಧಿಸಿ ಒಂದು ವರ್ಷದಿಂದ ಅಲ್ಲಿನವರು ಹೋರಾಟ ನಡೆಸುತ್ತಿದ್ದಾರೆ. ಮುಖ್ಯವಾಗಿ ಮೀನುಗಾರ ಸಮುದಾಯದವರು `ತಮಗೆ ಬದುಕಲು ಬಿಡಿ’ ಎಂದು ಒತ್ತಾಯಿಸುತ್ತಿದ್ದಾರೆ. ಈ ಹಿಂದೆ ಮೀನು ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರೂ ಅದರಿಂದ ಪ್ರಯೋಜನವಾಗದ ಹಿನ್ನಲೆ ಅಂಕೋಲಾ ಪೇಟೆಯನ್ನು ಬಂದ್ ಮಾಡುವ ನಿರ್ಣಯಕ್ಕೆ ಬಂದಿದ್ದಾರೆ.
ನವೆAಬರ್ 12ರಿಂದ ಅಂಕೋಲಾದಲ್ಲಿ ಕೇಣಿ ಬಂದರು ವಿರೋಧಿಸಿ ಅನಿರ್ದಿಷ್ಟ ಅವಧಿ ಧರಣಿ ಸತ್ಯಾಗ್ರಹ ಶುರುವಾಗಿದೆ. ನವೆಂಬರ್ 25ರಂದು ವಿವಿಧ ಸಂಘಟನೆಯವರು ಪೇಟೆಯನ್ನು ಬಂದ್ ಮಾಡುವಂತೆ ಅಂಗಡಿ ಮಾಲಕರಿಗೆ ಮನವಿ ಮಾಡಿದ್ದಾರೆ. `ಅಂಕೋಲಾ ಉಳಿಸಿ’ ಆಂದೋಲನದ ಅಂಗವಾಗಿ ಅನೇಕ ಅಂಗಡಿಕಾರರು ಈ ಬಂದ್ ಕರೆಗೆ ಸ್ಪಂದಿಸಿದ್ದಾರೆ. ಬಂದ್ ಯಶಸ್ವಿಯಾದ ನಂತರ ಈ ಹೋರಾಟ ಇನ್ನಷ್ಟು ತಿರುವುಪಡೆಯುವ ಸಾಧ್ಯತೆಗಳು ಹೆಚ್ಚಿದೆ.