ಶಿರಸಿಯ ಸಾಮಾಜಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ನ್ಯಾಯವಾದಿ ಶ್ರೀನಿವಾಸ ನಾಯ್ಕ ಅವರು ಹದಗೆಟ್ಟ ರಸ್ತೆಗಳ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯವಾದಿ ಚೇತನ ಬೋವಿ ಅವರ ಜೊತೆ ಸೇರಿ ಸರ್ಕಾರದ ವಿರುದ್ಧವೇ ಅವರು ಕೇಸು ಹಾಕಿದ್ದಾರೆ!
Advertisement. Scroll to continue reading.
ಶ್ರೀನಿವಾಸ ನಾಯ್ಕ ಅವರು ಶಿರಸಿಯ ವಿದ್ಯಾನಗರದಲ್ಲಿ `ಸೀತಾ ಲಾ ಕನ್ಸಟೆನ್ಸಿ’ ನಡೆಸುತ್ತಾರೆ. ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಅವರು ವಿವಿಧ ಪ್ರಕರಣಗಳನ್ನು ನಡೆಸಿದ್ದಾರೆ. ಈ ಹಿಂದೆ ನಗರಸಭೆಯ ಅಶುಚಿತ್ವದ ಬಗ್ಗೆ ಅವರು ಕಿಡಿಕಾರಿದ್ದು, ಡೆಂಗ್ಯು ಜ್ವರ ಹೆಚ್ಚಳಕ್ಕೆ ನಗರಸಭೆಯ ನಿರ್ಲಕ್ಷ್ಯ ಕಾರಣವಾದ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದರು. ಜನರ ಜೀವಿಸುವ ಹಕ್ಕಿಗೆ ತೊಂದರೆ ಆಗದಂತೆ ತಡೆಯುವುದಕ್ಕಾಗಿ ಅವರು ಕಾನೂನಾತ್ಮಕ ಹೋರಾಟ ನಡೆಸಿದ್ದರು. ಅದರ ಬೆನ್ನಲ್ಲೆ ಇದೀಗ ಶಿರಸಿಯ ರಸ್ತೆಗಳಲ್ಲಿನ ಗುಂಡಿ ಹಾಗೂ ಧೂಳಿನಿಂದ ಆಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಕಾನೂನಾತ್ಮಕ ರೀತಿಯಲ್ಲಿ ಧ್ವನಿ ಎತ್ತಿದ್ದಾರೆ.
ಶ್ರೀನಿವಾಸ ನಾಯ್ಕ ಅವರು ನಿತ್ಯ ಓಡಾಡುವ ರಸ್ತೆಯಲ್ಲಿ ಭಾರೀ ಪ್ರಮಾಣದ ಗುಂಡಿಗಳಿದ್ದು, ಅಲ್ಲಿನ ಧೂಳು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿತ್ತು. ಸಾಕಷ್ಟು ಜನ ನಗರಸಭೆಗೆ ಮನವಿ ಮಾಡಿದರೂ ಅದರಿಂದ ಯಾವ ಪ್ರಯೋಜನವೂ ಆಗಿರಲಿಲ್ಲ. ಪ್ರತಿಭಟನೆ-ಎಚ್ಚರಿಕೆ ನೀಡಿದರೂ ನಗರಸಭೆ ಅಧಿಕಾರಿಗಳು ತಲೆಕೆಡಿಸಿಕೊಂಡಿರಲಿಲ್ಲ. ವಿದ್ಯಾನಗರ ಮಾತ್ರವಲ್ಲದೇ ಶಿರಸಿ ತುಂಬೆಲ್ಲ ಇದೇ ಸಮಸ್ಯೆ ಆಗಿರುವುದನ್ನು ಶ್ರೀನಿವಾಸ ನಾಯ್ಕ ಅವರು ಮನಗೊಂಡರು. ತಮ್ಮ ಸಹಾಯಕ ವಕೀಲರಾದ ಚೇತನ ಬೋವಿ ಅವರ ಜೊತೆ ಚರ್ಚಿಸಿ ವಿವಿಧ ಕಾಗದಪತ್ರಗಳನ್ನು ಸಿದ್ಧಪಡಿಸಿದರು. ಜನರಿಗೆ ಆದ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಅಭ್ಯಯಿಸಿ ಕಾನೂನಿನ ಮೊರೆ ಹೋದರು.
ಸದ್ಯ ಜನರ ಜೀವಿಸುವ ಹಕ್ಕಿಗೆ ತೊಂದರೆಯಾಗುತ್ತಿರುವ ಶಿರಸಿಯಲ್ಲಿನ ರಸ್ತೆ ಗುಂಡಿ ಹಾಗೂ ಧೂಳಿನ ಸಮಸ್ಯೆಯ ಬಗ್ಗೆ ನೀಡಿದ ದೂರನ್ನು ನ್ಯಾಯಾಲಯ ಪರಿಗಣಿಸಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಉತ್ತರ ಕನ್ನಡ ಜಿಲ್ಲಾಧಿಕಾರಿ, ಶಿರಸಿ ಉಪವಿಭಾಗಾಧಿಕಾರಿ ಹಾಗೂ ಶಿರಸಿ ನಗರಸಭೆ ಪೌರಾಯುಕ್ತರ ವಿರುದ್ಧ ನೀಡಿದ ದೂರನ್ನು ನ್ಯಾಯಾಲಯವೂ ಗಂಭೀರವಾಗಿ ಪರಿಗಣಿಸಿದೆ. ನವೆಂಬರ್ 24ರಂದು ಪ್ರಕರಣದ ವಿಚಾರಣೆ ನಿಗದಿಪಡಿಸಿದ್ದು, ಆ ದಿನ ರಸ್ತೆ ಗುಂಡಿ ಹಾಗೂ ಧೂಳಿನ ಸಮಸ್ಯೆ ಅನುಭವಿಸಿದ ಪ್ರತಿಯೊಬ್ಬರು ನ್ಯಾಯಾಧೀಶರ ಮುಂದೆ ತಮ್ಮ ಅಳಲು ಹೇಳಿಕೊಳ್ಳಲು ಸಮಯ ನೀಡಲಾಗಿದೆ.
`ರಸ್ತೆಯಲ್ಲಿನ ಗುಂಡಿ ಹಾಗೂ ಧೂಳಿನಿಂದ ಸಣ್ಣ ಸಣ್ಣ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಮನೆಗೆ ಬರುವ ಮಕ್ಕಳು ಸಂಜೆ ವೇಳೆ ಕೆಮ್ಮಿನಿಂದ ನರಳುತ್ತಿದ್ದು, ಜನರ ಮೂಲಭೂತ ಹಕ್ಕಿಗೆ ಸಮಸ್ಯೆಯಾಗಿದೆ. ನಾವು ಕಟ್ಟುವ ತೆರಿಗೆ ಹಣವನ್ನು ಸರಿಯಾಗಿ ಬಳಸಿ ರಸ್ತೆ ನಿರ್ಮಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಅದನ್ನು ನಿರ್ವಹಿಸದ ಕಾರಣ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಯಿತು’ ಎಂದು ನ್ಯಾಯವಾದಿ ಶ್ರೀನಿವಾಸ ನಾಯ್ಕ ಅವರು ಮೊಬೈಲ್ ಮಿಡಿಯಾ ನೆಟ್ವರ್ಕಗೆ ಪ್ರತಿಕ್ರಿಯಿಸಿದರು. `ಹಿಂದೊಮ್ಮೆ ಗಟಾರ ಸಮಸ್ಯೆಯ ಬಗ್ಗೆ ಪ್ರಧಾನಿ ಕಚೇರಿಗೆ ಪತ್ರ ಬರೆದಾಗ ಅಧಿಕಾರಿಗಳಿಗೆ ಬಿಸಿ ಮುಟ್ಟಿತು. ಆ ಅವಧಿಯಲ್ಲಿ ನಗರಸಭೆಯವರು ಸಮಸ್ಯೆಯನ್ನು ಬಗೆಹರಿಸಿದ್ದರು’ ಎಂಬುದನ್ನು ಅವರು ಸ್ಮರಿಸಿದರು. `ಯಾವುದೇ ಹೋರಾಟವಾದರೂ ಕಾನೂನಾತ್ಮಕ ರೀತಿ ನಡೆದರೆ ಅದಕ್ಕೆ ಜಯ ನಿಶ್ವಿತ’ ಎಂದು ಅನಿಸಿಕೆಹಂಚಿಕೊAಡರು.
ಇನ್ನೂ, ಶಿರಸಿ ರಸ್ತೆಯಲ್ಲಿ ಗುಂಡಿ ಹಾಗೂ ಧೂಳಿನ ಸಮಸ್ಯೆಯಿಂದ ತೊಂದರೆ ಅನುಭವಿಸಿದ ಪ್ರತಿಯೊಬ್ಬರು ನ್ಯಾಯಾಧೀಶರ ಮುಂದೆ ತಮ್ಮ ಅಭಿಪ್ರಾಯ ಮಂಡಿಸಲು ಈ ಪ್ರಕರಣದಲ್ಲಿ ಅವಕಾಶವಿದೆ. ಅದಕ್ಕೆ ಎಲ್ಲಾ ಬಗೆಯ ಸಿದ್ಧತೆ-ಕಾಗದ ಪತ್ರಗಳ ತಯಾರಿಯನ್ನು ಶ್ರೀನಿವಾಸ ನಾಯ್ಕ ಹಾಗೂ ಚೇತನ ಬೋವಿ ಅವರು ತಮ್ಮದೇ ಖರ್ಚಿನಲ್ಲಿ ಮಾಡಿಕೊಡುತ್ತಾರೆ. ರಸ್ತೆ ಹಾಳಾಗಿದ್ದರಿಂದ ನಿಮಗಾದ ತೊಂದರೆಗಳ ಬಗ್ಗೆ ನ್ಯಾಯಾಧೀಶರ ಬಳಿ ಮಾತನಾಡಿ. ಈ ಹೋರಾಟಕ್ಕೆ ಕೈ ಜೋಡಿಸಲು ಇಲ್ಲಿ ಫೋನ್ ಮಾಡಿ: 9480210956