ಯಲ್ಲಾಪುರದ ಉಮ್ಮಚ್ಗಿಯಲ್ಲಿನ ಕರ್ನಾಟಕ ಕರ್ನಾಟಕ ಗ್ರಾಮೀಣ ವಿಕಾಸ್ ಬ್ಯಾಂಕಿಗೆ ಬೆಂಕಿ ಹಚ್ಚಿದವರನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ದರೋಡೆಕೋರರು ಬ್ಯಾಂಕಿನಲ್ಲಿದ್ದ ಹಣ-ಒಡವೆ ದೋಚಲು ಬಂದಿದ್ದು, ಅದು ಸಾಧ್ಯವಾಗದೇ ಇದ್ದಾಗ ಸಿಟ್ಟಿನಲ್ಲಿ ಬೆಂಕಿ ಹಚ್ಚಿ ಪರಾರಿಯಾಗಿದ್ದು ತನಿಖೆಯಿಂದ ಗೊತ್ತಾಗಿದೆ.
ನವೆಂಬರ್ 12ರಂದು ಉಮ್ಮಚ್ಗಿಯ ಕರ್ನಾಟಕ ಕರ್ನಾಟಕ ಗ್ರಾಮೀಣ ವಿಕಾಸ್ ಬ್ಯಾಂಕಿನಲ್ಲಿ ಹೊಗೆ ಬರುತ್ತಿತ್ತು. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ದಿನ ನಸುಕಿನಲ್ಲಿ ದರೋಡೆಕೋರರು ಬ್ಯಾಂಕ್ ಆವರಣ ಪ್ರವೇಶಿಸಿದ್ದು, ಕಿಟಕಿ ಮುರಿದು ಬ್ಯಾಂಕ್ ಒಳಗೆ ನುಗ್ಗಿದ್ದರು. ಸೇಫ್ ಲಾಕರ್ ಒಡೆಯುವ ಪ್ರಯತ್ನ ನಡೆಸಿದಾಗ ಬ್ಯಾಂಕಿನ ಸೈರನ್ ಸದ್ದು ಮಾಡಿದ್ದರಿಂದ ಬ್ಯಾಂಕಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು.
ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಸ್ಥಳಕ್ಕೆ ಆಗಮಿಸಿ ಸಾಕ್ಷಿ ಸಂಗ್ರಹಿಸಿದ್ದರು. ಯಲ್ಲಾಪುರ ಪಿಐ ರಮೇಶ ಹಾನಾಪುರ ಅವರು ತಂಡ ಕಟ್ಟಿಕೊಂಡು ದುಷ್ಟರ ಶೋಧ ಶುರು ಮಾಡಿದ್ದರು. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದಾಗ ಮಂಗಳೂರಿನ ಮಹ್ಮದರಫಿಕ್ ಮೇಲೆ ಅನುಮಾನ ಮೂಡಿತು. ತನಿಖೆ ಮುಂದುವರೆಸಿದಾಗ ಮಹ್ಮದರಫಿಕ್ ತನ್ನ ಸಹಚರರ ಜೊತೆ ಸೇರಿ ಬ್ಯಾಂಕ್ ಒಳಗೆ ನುಗ್ಗಿದ್ದು ಖಚಿತವಾಯಿತು.
ಪೊಲೀಸರ ಮೇಲೆ ಹಲ್ಲೆ: ಆತ್ಮಹತ್ಯೆ ಪ್ರಯತ್ನ!
ಈ ಹಿನ್ನಲೆ ಯಲ್ಲಾಪುರ ಪಿಎಸ್ಐ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ ಹಾಗೂ ಪೊಲೀಸ್ ಸಿಬ್ಬಂದಿ ಶಫಿ ಶೇಖ್ ಸೇರಿ ಮಹ್ಮದರಫಿಕ್ ಅವರ ಬೆನ್ನು ಬಿದ್ದರು. ನವೆಂಬರ್ 17ರಂದು ಮಹ್ಮದರಫಿಕ್ ಬೆಳಗಾವಿಯಲ್ಲಿರುವುದು ಗೊತ್ತಾಯಿತು. ಖಾಸಾಭಾಗದ ವಾಲಿ ಚೌಕ್ ಬಳಿಯ ವೋಡ್ಕಾ ಬಾರ್ ಮುಂದೆ ಮಹ್ಮದರಫಿಕ್ ಅಲೆದಾಡುತ್ತಿದ್ದರು. ಪೊಲೀಸರು ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸುವ ಪ್ರಯತ್ನ ನಡೆಸಿದರು. ಪೊಲೀಸರನ್ನು ಕಂಡ ಮಹ್ಮದರಫಿಕ್ ಅವರ ಮೇಲೆ ಚಾಕುವಿನ ದಾಳಿ ನಡೆಸಿದರು. ಸಿದ್ದಪ್ಪ ಗುಡಿ ಹಾಗೂ ರಾಜಶೇಖರ ವಂದಲಿ ದಾಳಿಯಿಂದ ತಪ್ಪಿಸಿಕೊಂಡರು. ಅದಾಗಿಯೂ ಸಿದ್ದಪ್ಪ ಗುಡಿ ಅವರ ಕಾಲಿಗೆ ಪೆಟ್ಟಾಯಿತು. ಶಫಿ ಶೇಖ್ ಅವರು ನೋವುಂಡರು.
ಪೊಲೀಸರ ಬಳಿ ಸಿಕ್ಕಿ ಬೀಳಲು ಮಹ್ಮದರಫಿಕ್ ಸಿದ್ಧವಿರಲಿಲ್ಲ. ಹೀಗಾಗಿ ಅದೇ ಚಾಕುವಿನಿಂದ ಮಹ್ಮದರಫಿಕ್ ತಮ್ಮ ಹೊಟ್ಟೆಗೆ ನಾಲ್ಕು ಬಾರಿ ಚುಚ್ಚಿಕೊಂಡರು. ಆತ್ಮಹತ್ಯೆ ಪ್ರಯತ್ನಿಸಿದ ಬ್ಯಾಂಕ್ ದರೋಡೆಕೋರನನ್ನು ಪೊಲೀಸರೇ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಆರೋಪಿ ತಪ್ಪಿಸಿಕೊಳ್ಳದ ಹಾಗೇ ಪೊಲೀಸರು ಭದ್ರತೆ ನೀಡಿದ್ದು, ರಾಜಶೇಖರ ವಂದಲಿ ಅವರು ಬೆಳಗಾವಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ನಡೆದ ವಿದ್ಯಮಾನಗಳ ಬಗ್ಗೆ ವಿವರಿಸಿ ದಡಾಯಿತರ ವಿರುದ್ಧ ಮತ್ತೊಂದು ದೂರು ದಾಖಲಿಸಿದರು.
ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಮಹ್ಮದರಫಿಕ್ ಪ್ರಮುಖ ಆರೋಪಿ. ಇನ್ನೂ ಮೂವರು ಈ ಪ್ರಕರಣದಲ್ಲಿ ಭಾಗಿಯಾದ ಅನುಮಾನವಿದ್ದು, ಪೊಲೀಸರು ಅವರನ್ನು ಬಂಧಿಸುವ ಸಾಧ್ಯತೆ ಹೆಚ್ಚಿದೆ.