ಹಳಿಯಾಳದಲ್ಲಿ ಅನುಮತಿ ಇಲ್ಲದೇ ಟಿಪ್ಪು ಸುಲ್ತಾನ್ ಬ್ಯಾನರ್ ಅಳವಡಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಟಿಪ್ಪು ಸುಲ್ತಾನ್ `ದಿ ಕಿಂಗ್ ಆಪ್ ಟೈಗರ್’ ಎಂದು ನಮೂದಿಸಿದ ಭಾವಚಿತ್ರಕ್ಕೆ ಆಕ್ಷೇಪವ್ಯಕ್ತವಾಗಿದ್ದು, `ಅನುಮತಿಪಡೆದು ಭಾವಚಿತ್ರ ಅಂಟಿಸಿ’ ಎಂದು ಪುರಸಭೆಯವರು ಸೂಚಿಸಿದ್ದಾರೆ. ಈ ಸೂಚನೆಗೆ ಸಹ ಅಲ್ಲಿನ ಯುವಕರು ಆಕ್ಷೇಪವ್ಯಕ್ತಪಡಿಸಿದ್ದು, ಸಿಬ್ಬಂದಿಯನ್ನು ಬೆದರಿಸಿದ್ದಾರೆ.
ಈ ಪ್ರದೇಶದಲ್ಲಿ ಟಿಪ್ಪು ಸುಲ್ತಾನ್ ಬ್ಯಾನರ್ ಅಳವಡಿಸಲು ಪರವಾನಿಗೆ ಪಡೆದಿಲ್ಲ. ಹೀಗಾಗಿ ಅದನ್ನು ತೆರವುಗೊಳಿಸಬೇಕು ಎಂದು ಕೆಲವರು ಪುರಸಭೆಗೆ ಆಗ್ರಹಿಸಿದ್ದಾರೆ. ಈ ಹಿನ್ನಲೆ ಪುರಸಭೆಯವರು ಮೇದಾರಗಲ್ಲಿ, ಕುಂಬಾರಗಲ್ಲಿ ಮತ್ತು ಗಣಪತಿ ಗಲ್ಲಿಯ ಕೂಡುವ ತಾಲೀಮ್ ಕೂಟ್ನಲ್ಲಿ ಅಳವಡಿಸಲಾಗಿದ್ದ ಟಿಪ್ಪು ಸುಲ್ತಾನ್ ಭಾವಚಿತ್ರವಿರುವ ದೊಡ್ಡ ಗಾತ್ರದ ಕಟೌಟ್ ತೆರವುಗೊಳಿಸುವಂತೆ ಸಂಘಟಕರಿಗೆ ಸೂಚಿಸಿದ್ದಾರೆ. ಇದೇ ವಿಷಯ ಇದೀಗ ದೊಡ್ಡದಾಗಿದ್ದು, ಕಲಹಕ್ಕೆ ಕಾರಣವಾಗಿದೆ.
ಈ ಹಿನ್ನೆಲೆ ಪುರಸಭೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬ್ಯಾನರ್ ತೆರವುಗೊಳಿಸುವಂತೆ ತಿಳಿಸಿದಾಗ ಯುವಕರು ಅದನ್ನು ಅಲ್ಲಿದ್ದ ಮನೆ ಎದುರು ಅಳವಡಿಸಲು ಮುಂದಾದರು. `ಅದಕ್ಕೆ ಸಹ ಪರವಾನಿಗೆ ಅಗತ್ಯ’ ಎಂದು ಪುರಸಭೆ ಸಿಬ್ಬಂದಿ ಹೇಳಿದರು. ಇದರಿಂದ ಕೆರಳಿದ ಯುವಕರು `ಟಿಪ್ಪು ಸುಲ್ತಾನ್ ಒಬ್ಬ ಹೋರಾಟಗಾರ, ಅವರ ಬ್ಯಾನರ್ ಅಳವಡಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದವರ ವಿವರ ನೀಡಿ’ ಎಂದು ಆಗ್ರಹಿಸಿದರು. ಮೇಲಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸುವಂತೆ ಪಟ್ಟುಹಿಡಿದರು.
ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾನೂನು ಪಾಠ ಮಾಡಿದರು. ಪುರಸಭೆ ಅಧಿಕಾರಿಗಳು ಆಗಮಿಸಿ ವಿಷಯದ ಗಂಭೀರತೆಯ ಬಗ್ಗೆ ವಿವರಿಸಿದರು. ಆದರೆ, ಬ್ಯಾನರ್ ಅಳವಡಿಸುವವರು ಇದಕ್ಕೆ ಬಗ್ಗಲಿಲ್ಲ. ಬ್ಯಾನರ್ ಅಳವಡಿಸಿದ್ದ ಯುವಕರು ಹಾಗೂ ಹಿಂದು ಸಂಘಟನೆ ಕಾರ್ಯಕರ್ತರ ನಡುವೆ ಈ ವೇಳೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಯುವಕರು ಗುಂಪು 1ನಾರೆ ತಕ್ದೀರ್ ಅಲ್ಲಾಹು ಅಕ್ಬರ್’ ಎಂಬ ಘೋಷಣೆ ಕೂಗಿದ್ದು, ಇದಕ್ಕೆ ಪ್ರತಿಯಾಗಿ ಹಿಂದು ಪರ ಸಂಘಟನೆಗಳವರು ಹಿಂದುಪರ ಘೋಷಣೆ ಮೊಳಗಿಸಿದರು. ಕೂಡಲೇ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಜನರನ್ನು ಚದುರಿಸಿದರು.