ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದ ನಾರಾಯಣ ಗೌಡ ಅವರು ಆರು ದಿನದ ನಂತರ ಸಾವನಪ್ಪಿದ್ದಾರೆ. ಕಾರವಾರದ ಕಿಮ್ಸ ಆಸ್ಪತ್ರೆಯಲ್ಲಿ ಹೊನ್ನಾವರದ ನಾರಾಯಣ ಗೌಡ ಅವರು ಕೊನೆಯುಸಿರೆಳೆದಿದ್ದಾರೆ.
Advertisement. Scroll to continue reading.
ಹೊನ್ನಾವರ ಕರ್ಕಿ ಮಠದಕೇರಿಯಲ್ಲಿ ನಾರಾಯಣ ತಿಮ್ಮ ಗೌಡ ಅವರು ವಾಸವಾಗಿದ್ದರು. ನವೆಂಬರ್ 30ರ ರಾತ್ರಿ ಅವರು ಹೊನ್ನಾವರದ ಬಾಂದೇಹಳ್ಳ ರಸ್ತೆಕಡೆಯಿಂದ ಮಠದಕೇರಿ ಕಡೆ ನಡೆದು ಹೋಗುತ್ತಿದ್ದರು. ಕುಮಟಾ-ಹೊನ್ನಾವರ ಕಡೆ ಬೈಕ್ ಓಡಿಸಿಕೊಂಡು ಬಂದ ಅಪರಿಚಿತ ವ್ಯಕ್ತಿಯೊಬ್ಬರು ಕರ್ಕಿನಾಕಾದಲ್ಲಿ ನಾರಾಯಣ ಗೌಡ ಅವರಿಗೆ ತಮ್ಮ ವಾಹನ ಗುದ್ದಿದರು. ಪರಿಣಾಮ ನಾರಾಯಣ ಗೌಡ ಅವರ ತಲೆ, ಮೂಗು, ಕೆನ್ನೆ, ಕಾಲಿಗೆ ಗಾಯವಾಯಿತು.
ಡಿಕ್ಕಿ ಹೊಡೆದ ಬೈಕ್ ಅಲ್ಲಿಂದ ಪರಾರಿಯಾಯಿತು. ಬೈಕ್ ಚಾಲಕ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸುವ ಕೆಲಸವನ್ನು ಮಾಡಲಿಲ್ಲ. ಅಪಘಾತದ ಬಗ್ಗೆ ಪೊಲೀಸರಿಗೆ ಸಹ ಹೇಳಲಿಲ್ಲ. ಹೀಗಾಗಿ ನಾರಾಯಣ ಗೌಡ ಅವರು ಅಲ್ಲಿಯೇ ಬಿದ್ದಿದ್ದು, ನಂತರ ಅವರನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ಕಾರವಾರದ ಕಿಮ್ಸಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಆದರೆ, ಅದರಿಂದ ಪ್ರಯೋಜನವಾಗಲಿಲ್ಲ.
ಡಿಸೆಂಬರ್ 6ರಂದು ನಾರಾಯಣ ಗೌಡ ಅವರು ಕೊನೆಯುಸಿರೆಳೆದರು. ಕರ್ಕಿ ಮಠದಕೇರಿಯ ಎಲೆಕ್ಟಿಶಿಯನ್ ಮಂಜುನಾಥ ಮಾಸ್ತಿ ಗೌಡ ಅವರು ಈ ಬಗ್ಗೆ ಪೊಲೀಸರಿಗೆ ವಿವರಿಸಿದರು. ಪ್ರಕರಣ ದಾಖಲಿಸಿದ ಪೊಲೀಸರು ಬೈಕ್ ಮಾಲಕರ ಶೋಧ ನಡೆಸಿದರು. ನಾರಾಯಣ ಗೌಡ ಅವರಿಗೆ ಗುದ್ದಿದ ಬೈಕಿನ ನೊಂದಣಿ ಸಂಖ್ಯೆ ಗೊತ್ತಾಗಿದ್ದು, ಪೊಲೀಸರು ಕೆಎ 31 ಇಎ 5625 ವಾಹನದ ಮಾಲಕರ ಹುಡುಕಾಟ ಶುರು ಮಾಡಿದ್ದಾರೆ.