ಬಡ ಜನರಿಂದ ಹಣಪಡೆದು ಸರ್ಕಾರ ಮನೆ ಕೊಡದ ಕಾರಣ ಫಲಾನುಭವಿಗಳು ಯಲ್ಲಾಪುರ ಪಟ್ಟಣ ಪಂಚಾಯತ ಮುಂದೆ ಆಕ್ರೋಶವ್ಯಕ್ತಪಡಿಸಿದ್ದು, ಪ್ರತಿಭಟನೆ ಸಂಘಟಿಸಿದ್ದ ಬಿಜೆಪಿಗರು ನೊಂದವರಿಗೆ ಬಿರಿಯಾನಿ ಕೊಟ್ಟು ಸಮಾಧಾನ ಮಾಡಿದ್ದಾರೆ. ಜೊತೆಗೆ `ಯಲ್ಲಾಪುರ ಜಾತ್ರೆಯ ಒಳಗೆ ಫಲಾನುಭವಿಗಳಿಗೆ ಮನೆ ಕೊಡಿಸುತ್ತೇವೆ’ ಎಂದು ತಹಶೀಲ್ದಾರ್ ಚಂದ್ರಶೇಖರ ಹೊಸ್ಮನಿ ಅವರಿಂದ ಭರವಸೆ ಕೊಡಿಸಿದ್ದಾರೆ.
Advertisement. Scroll to continue reading.
`ಯಲ್ಲಾಪುರದಲ್ಲಿ ಜಿ + 2 ಮನೆ ನಿರ್ಮಿಸಲಾಗಿದ್ದು, ಆ ಪ್ರದೇಶಕ್ಕೆಸ್ವಾತಂತ್ರ ಹೋರಾಟಗಾರರ ಹೆಸರನ್ನು ಇಡುವ ನಿರೀಕ್ಷೆಯಿತ್ತು. ಆದರೆ ಹೆಬ್ಬಾರ್ ನಗರ ಎಂದು ಹೆಸರಿಡಲಾಗಿದ್ದು, ಹೆಬ್ಬಾರ ನಗರದಲ್ಲಿನ ಮೊದಲನೇ ಯೋಜನೆಯೇ ವಿಫಲವಾಗಿದ್ದು ಶಾಸಕರ ವೈಫಲ್ಯ. ಕಟ್ಟಡ ನಿರ್ಮಾಣ ನಡೆದು ನಾಲ್ಕು ವರ್ಷವಾದರೂ ಮನೆ ಹಸ್ತಾಂತರ ನಡೆದಿಲ್ಲ’ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಅಸಮಧಾನವ್ಯಕ್ತಪಡಿಸಿದರು. `ಪಟ್ಟಣ ಪಂಚಾಯತ ಹಾಗೂ ಶಾಸಕರ ವೈಪಲ್ಯದಿಂದ ಮನೆ ಹಸ್ತಾಂತರ ನಡೆದಿಲ್ಲ’ ಎಂದು ಪ್ರಸಾದ ಹೆಗಡೆ ದೂರಿದರು. `ಬಡವರಿಗೆ ನೀಡುವ ಮನೆಯಲ್ಲಿ 5 ಅಡಿಯ ಒಬ್ಬ ವ್ಯಕ್ತಿ ಸಹ ಮಲಗಲು ಜಾಗವಿಲ್ಲ. ಮನೆ ಮುಂಬಾಗದಲ್ಲಿಯೇ ಶೌಚಾಲಯವಿರಿಸಿದ್ದು ಸಹ ಸರಿಯಲ್ಲ. ಅವ್ಯವಸ್ಥೆಯಿಂದ ಕೂಡಿದ ಮನೆಯನ್ನು ಹಂಚಿಕೆ ಮಾಡಬಾರದು. ತಕ್ಷಣ ಎಲ್ಲಾ ಫಲಾನುಭವಿಗಳಿಗೆ ಶೇ 18ರ ಬಡ್ಡಿ ಜೊತೆಪಡೆದ ಹಣ ಮರಳಿಸಬೇಕು. ಸುಸಜ್ಜಿತ ಮನೆಯನ್ನು ನೀಡಬೇಕು’ ಎಂದು ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಆಗ್ರಹಿಸಿದರು.
`ಜಿ+2 ವಸತಿಗೃಹದ ವಿಷಯದಲ್ಲಿ ನಡೆದ ಭ್ರಷ್ಟಾಚಾರ, ಹಗರಣದಿಂದ ಯಲ್ಲಾಪುರದ ಜನ ತಲೆ ತಗ್ಗಿಸುವ ಹಾಗಾಗಿದೆ. ಈ ಅಕ್ರಮಕ್ಕೆ ಕಾರಣರಾದವರ ವಿರುದ್ಧ ಕ್ರಮ ಆಗಬೇಕು. ಇಲ್ಲವಾದರೆ ಬಿಜೆಪಿ ಪ್ರತಿಭಟನೆ ಮುಂದುವರಿಸಲಿದೆ’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. `ನಮ್ಮಿಂದ ಹಣಪಡೆದು ಮನೆ ಕೊಟ್ಟಿಲ್ಲ. ಪ್ರಶ್ನಿಸಿದರೆ 15 ದಿನದಲ್ಲಿ ಕೊಡುತ್ತೇವೆ ಎನ್ನುತ್ತಾರೆ. ಆದರೆ, ಈವರೆಗೂ ಯಾವ ಭರವಸೆಯೂ ಈಡೇರಿಲ್ಲ’ ಎಂದು ಫಲಾನುಭವಿಗಳಿಬ್ಬರು ಆಕ್ರೋಶವ್ಯಕ್ತಪಡಿಸಿದರು. `ಗುತ್ತಿಗೆದಾರರಿಗೆ ಸೂಕ್ತ ಕಾಮಗಾರಿ ನಡೆಸುವಂತೆ ಸೂಚಿಸಲಾಗಿದ್ದು, ಯಲ್ಲಾಪುರ ಜಾತ್ರೆಯೊಳಗೆ ಮನೆ ಹಸ್ತಾಂತರ ನಡೆಯಲಿದೆ’ ಎಂದು ತಹಶೀಲ್ದಾರ್ ಚಂದ್ರಶೇಖರ ಹೊಸ್ಮನಿ ಭರವಸೆ ಕೊಟ್ಟರು. ಆದರೆ, `ಈ ಭರವಸೆ ನಂಬುವAಥಹುದಲ್ಲ’ ಎಂದು ಹರಿಪ್ರಕಾಶ ಕೋಣೆಮನೆ ಮೈಕಿನಲ್ಲಿ ಹೇಳಿದರು.
ಜಿ ಪಂ ಮಾಜಿ ಸದಸ್ಯ ಉಮೇಶ ಭಾಗ್ವತ, ರಾಘವೇಂದ್ರ ಭಟ್ಟ ಹಾಸಣಗಿ, ಪ್ರಮುಖರಾದ ರಾಮು ನಾಯ್ಕ, ಗೋಪಾಲಕೃಷ್ಣ ಗಾಂವ್ಕರ, ನಾರಾಯಣ ನಾಯಕ, ಗಜಾನನ ನಾಯ್ಕ ತಳ್ಳಿಕೇರಿ, ಅಮೃತ ಬದ್ದಿ, ಸುನೀತಾ ವೆರ್ಣೆಕರ್, ಸುಬ್ಬಣ್ಣ ಬೋಳ್ಮನೆ, ರಾಮಚಂದ್ರ ಚಿಕ್ಯಾನಮನೆ, ದೀಪಕ ಭಟ್ಟ ಶೀಗೆಕೇರಿ, ರವಿ ದೇವಡಿಗ ಇತರರು ಈ ಪ್ರತಿಭಟನೆಯಲ್ಲಿದ್ದರು. ಪ್ರತಿಭಟನೆ ಮುಗಿದ ನಂತರ ಪಟ್ಟಣ ಪಂಚಾಯತ ಆವರಣಕ್ಕೆ ಬಿಜೆಪಿಗರು ವೆಜ್ ಬಿರಿಯಾನಿ ತರಿಸಿದ್ದು, ಪ್ರತಿಭಟನಾಕಾರರು ಅಲ್ಲಿಯೇ ನಿಂತು ಅದನ್ನು ಸೇವಿಸಿದರು.