ಶಿರಸಿ ಸಭಾ ಭವನವೊಂದರಲ್ಲಿ ಬಾಲ್ಯ ವಿವಾಹ ನಡೆದಿದೆ. ತಾಯಿಯೇ ಮಗಳನ್ನು ಫುಸಲಾಯಿಸಿ ಮದುವೆ ಮಾಡಿದ್ದಾರೆ.
ಸರ್ಕಾರದ ನಿಯಮಾವಳಿಗಳ ಪ್ರಕಾರ 18 ವರ್ಷ ಪೂರೈಸದ ಕನ್ಯೆಯರ ವಿವಾಹ ಮಾಡುವ ಹಾಗಿಲ್ಲ. ಮದುವೆ ಆಗಬಯಸುವ ಪುರುಷರಿಗೆ ಸಹ 21 ಆಗಿರುವುದು ಕಡ್ಡಾಯ. ಈ ಬಗ್ಗೆ ಅರಿತಿದ್ದರೂ ಆ ಕಾನೂನು ಉಲ್ಲಂಘಿಸಿ ಕೆಲವರು ಬಾಲಕಿಯೊಬ್ಬರಿಗೆ ಮದುವೆ ಮಾಡಿ ಮುಗಿಸಿದ್ದಾರೆ.
ಅಕ್ಟೊಬರ್ 7ರಂದು ಶಿರಸಿಯ ದುಂಡಸಿ ನಗರದ ಮಡಿವಾಳ ಮಾಚಿದೇವ ಸಭಾಭವನದಲ್ಲಿ ಈ ಮದುವೆ ನಡೆದಿದೆ. ಶಿರಸಿ ಕೊಣ್ಣೂರಿನ ಚಂದ್ರಬಾಯಿ ನಾರಾಯಣ ಭಗವೆ, ಸಂತೋಷ ನಾರಾಯಣ ಬಗವೆ ಹಾಗೂ ಹರಿಹರದ ಸಾವಿತ್ರಿ ನಾರಾಯಣ ಗುಡಕರ್ ಸೇರಿ ಅಪ್ರಾಪ್ತೆಯ ಮದುವೆ ಮಾಡಿಸಿದ್ದಾರೆ. ಸಾವಿತ್ರಿ ಗುಡಕರ್ ಅವರು ತಮ್ಮ ಚಿಕ್ಕ ವಯಸ್ಸಿನ ಮಗಳ ಮದುವೆ ಮಾಡಿ ತಮ್ಮ ಹೊರೆ ಕಡಿಮೆ ಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಆದರೆ, ಈ ಬಾಲ್ಯ ವಿವಾಹದ ಬಗ್ಗೆ ಜಿಲ್ಲಾ ಮಕ್ಕಳ ಘಟಕಕ್ಕೆ ಮಾಹಿತಿ ಸಿಕ್ಕಿದೆ. ಆ ಮಾಹಿತಿ ಆಧರಿಸಿ ಶಿರಸಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಂದಕುಮಾರ ಎಂ ಆರ್ ವಿಚಾರಣೆ ನಡೆಸಿದ್ದಾರೆ. ಆ ವಿಚಾರಣೆಯಲ್ಲಿ ಬಾಲ್ಯ ವಿವಾಹ ದೃಢವಾಗಿದ್ದು, ಬಾಲಕಿಗೆ ಮದುವೆ ವಯಸ್ಸು ಭರ್ತಿಯಾಗುವ ಮುನ್ನವೇ ಮದುವೆ ಮಾಡಿದನ್ನು ಅವರು ಖಚಿತಪಡಿಸಿದ್ದಾರೆ.
ಅದಾದ ನಂತರ ಅಪ್ರಾಪ್ತೆಯನ್ನು ಫುಸಲಾಯಿಸಿ ಮದುವೆ ಮಾಡಿದ ಬಗ್ಗೆ ನಂದಕುಮಾರ ಎಂ ಆರ್ ಅವರು ಬಾಲಕಿ ತಾಯಿ ಸಾವಿತ್ರಿ ನಾರಾಯಣ ಗುಡಕರ್ ವಿರುದ್ಧ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಜೊತೆಗೆ ಮದುವೆಯಲ್ಲಿ ಮುಖ್ಯ ಜವಾಬ್ದಾರಿ ನಿಭಾಯಿಸಿದ ಚಂದ್ರಬಾಯಿ ನಾರಾಯಣ ಭಗವೆ, ಸಂತೋಷ ನಾರಾಯಣ ಬಗವೆ ಅವರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.
`ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ’