ಶಾಲೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ವಿಮಲಾ ನಾಯ್ಕ ಅವರ ಶವ ಬಾವಿಯಲ್ಲಿ ಸಿಕ್ಕಿದೆ. ಸೋಮವಾರ ಸಂಜೆಯೇ ಅವರು ಬಾವಿಗೆ ಬಿದ್ದಿದ್ದು, ಮಂಗಳವಾರ ಬಾವಿಯಲ್ಲಿ ಶವ ತೇಲುವುದನ್ನು ಜನ ನೋಡಿದ್ದಾರೆ.
Advertisement. Scroll to continue reading.
ಭಟ್ಕಳ ಬೈಲೂರಿನ ಶೇರುಗಾರಕೇರಿಯಲ್ಲಿ ವಿಮಲಾ ಮಂಜುನಾಥ ನಾಯ್ಕ (55) ಅವರು ವಾಸವಾಗಿದ್ದರು. ಸಮೀಪದ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಅವರು ಜೊತೆಗೆ ಕೃಷಿ ಕಾಯಕದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಡಿಸೆಂಬರ್ 1ರ ಸಂಜೆ ಅವರು ದನಗಳ ಮೇವಿಗೆ ಹುಲ್ಲು ಕೊಯ್ಯುವುದಕ್ಕಾಗಿ ಗದ್ದೆಯ ಕಡೆ ಹೋಗಿದ್ದರು. ಕೊಯ್ದ ಹುಲ್ಲನ್ನು ಬುಟ್ಟಿಯಲ್ಲಿ ತುಂಬಿದ ಅವರು ಅದನ್ನು ತಲೆ ಮೇಲೆ ಹೊತ್ತು ನಡೆದು ಬರುತ್ತಿದ್ದರು.
ಕೆಳಗಿನ ಶೇರುಗಾರಕೇರಿಯ ಗಣಪತಿ ಅನಂತ ನಾಯ್ಕ ಅವರ ಗದ್ದೆಯಲ್ಲಿ ನೆಲಮಟ್ಟದ ಬಾವಿಯಿರುವ ಬಗ್ಗೆ ವಿಮಲಾ ನಾಯ್ಕ ಅವರು ಅರಿತಿದ್ದರು. ಅದಾಗಿಯೂ, ತಲೆ ಮೇಲೆ ಹುಲ್ಲು ಹೊತ್ತು ಆ ಮಾರ್ಗವಾಗಿ ಬರುವಾಗ ಅವರ ಕಾಲು ಜಾರಿತು. ಬಾವಿಗೆ ಬಿದ್ದ ನಂತರ ಅವರ ಉಸಿರು ಕಟ್ಟಿತು. ಅಲ್ಲಿಯೇ ಅವರು ಸಾವನಪ್ಪಿದರು.
ರಾತ್ರಿ ವೇಳೆ ವಿಮಲಾ ನಾಯ್ಕ ಅವರ ಹುಡುಕಾಟ ನಡೆದರೂ ಅವರು ಸಿಗಲಿಲ್ಲ. ಮಂಗಳವಾರ ಬೆಳಗ್ಗೆ ಬಾವಿಯಲ್ಲಿ ಅವರ ಶವ ತೇಲುತ್ತಿರುವುದನ್ನು ಸುಬ್ರಹ್ಮಣ್ಯ ನಾಯ್ಕ ಅವರು ನೋಡಿದರು. ತಾಯಿ ಸಾವಿನ ಬಗ್ಗೆ ಅವರು ಪೊಲೀಸರಿಗೆ ವರದಿ ನೀಡಿದ್ದು, ಮುರುಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿದರು.
`ಅಪಾಯಕಾರಿ ಸ್ಥಳಗಳ ಕಡೆ ಹೋಗಬೇಡಿ’