ಶಿರಸಿ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ಗುರು ಅಡಿ ನಗರಸಭೆಯ ಸಭೆಯಲ್ಲಿ ಗರಂ ಆಗಿದ್ದಾರೆ. `ವಿದೇಶಿ ಪ್ರವಾಸ ಮಾಡಿ ಬಂದ ನಗರಸಭೆ ಅಧಿಕಾರಿ-ಸಿಬ್ಬಂದಿ ಇಲ್ಲಿನ ಆಡಳಿತವನ್ನು ಇನ್ನಷ್ಟು ಹದಗೆಡಿಸಿದ್ದಾರೆ’ ಎಂಬ ನಿಟ್ಟಿನಲ್ಲಿ ಗುರು ಅಡಿ ಮಾತನಾಡಿದ್ದಾರೆ. ಹಿರಿಯ ಪತ್ರಕರ್ತ ಪರಮಾನಂದ ಹೆಗಡೆ ಅವರು ಆಡಳಿತ ವೈಖರಿ ವಿರುದ್ಧ ಅಸಮಧಾನವ್ಯಕ್ತಪಡಿಸಿದ್ದಾರೆ.
ಶನಿವಾರ ಶಿರಸಿ ನಗರಸಭೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಜನ ಆಡಳಿತದ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ. `ಸಮಸ್ಯೆ ಹೇಳಿದರೂ ಅದನ್ನು ಬಗೆಹರಿಸುವವರಿಲ್ಲ’ ಎಂದು ಅನೇಕರು ಹೇಳಿದ್ದಾರೆ. `ನಗರಸಭೆಯವರು ಪತ್ರಕರ್ತರಿಂದ ಸಲಹೆಪಡೆಯುತ್ತಾರೆ. ಆದರೆ, ಆ ಸಲಹೆಯ ಪೈಕಿ ಒಂದನ್ನೂ ಅನುಷ್ಠಾನಕ್ಕೆ ತರುವುದಿಲ್ಲ’ ಎಂದು ಗುರು ಅಡಿ ಕಿಡಿಕಾರಿದರು. `ಕೋಟಿ ರೂ ಖರ್ಚು ಮಾಡಿ ವಿದೇಶಕ್ಕೆ ಹೋಗಿ ಅಲ್ಲಿನ ಆಡಳಿತ ನೋಡಿದವರು ಇಲ್ಲಿ ಮಾಡಿದ್ದೇನು?’ ಎಂದು ಪ್ರಶ್ನಿಸಿದರು. `ಶಿರಸಿ ನಗರ ಪ್ರವೇಶಿಸುತ್ತಲೇ ರಸ್ತೆ ಪಕ್ಕ ಕಸದ ರಾಶಿ ಕಾಣುತ್ತಿದೆ. ಕಸ ಚೆಲ್ಲಿದವರಿಗೆ ದಂಡ ವಿಧಿಸಿ’ ಎಂದು ತಾಕೀತು ಮಾಡಿದರು.
`ಕಸದಿಂದ ರಸ ತೆಗೆದು ನಗರಸಭೆ ಆದಾಯ ವೃದ್ಧಿ ಮಾಡುವ ಯೋಜನೆ ಇಲ್ಲ. ನೀರಿನ ನಲ್ಲಿ ಮಾಪನದ ಬಗ್ಗೆ ನಗರಸಭೆಯವರಿಗೆ ಗೊತ್ತಿಲ್ಲ. ನಲ್ಲಿ ನೀರಿನಲ್ಲಿ ಕೊಳಚೆ ನೀರು ಬಂದರೆ ಏನು? ಎನ್ನುವದರ ಬಗ್ಗೆ ಉತ್ತರವಿಲ್ಲ. ಬೀದಿ ದೀಪಗಳು ಸರಿಯಾಗಿಲ್ಲ’ ಎಂಬ ವಿಷಯ ಬಿಚ್ಚಿಟ್ಟರು. `ವಿವಿಧ ಹೊಟೇಲುಗಳಲ್ಲಿ ಟೇಸ್ಟಿಂಗ್ ಪೌಡರ್ ಬಳಕೆ ನಡೆಯುತ್ತಿದೆ. ಜನರ ಆರೋಗ್ಯಕ್ಕೆ ದುಷ್ಪರಿಣಾಮವಾಗುವ ಕೆಮಿಕಲ್ ಬಳಸುತ್ತಿದ್ದಾರೆ. ಮಳೆಗಾಲದಲ್ಲಿ ಮಳೆ ನೀರನ್ನು ಹಿಡಿದು ಅಡುಗೆ ಮಾಡುವವರಿದ್ದಾರೆ. ದುಡ್ಡು ಕೊಟ್ಟು ಬರುವ ಜನರಿಗೆ ಎಂಜಲು ಊಟ ಬಡಿಸುತ್ತಾರೆ. ಆದರೆ, ನಗರಸಭೆ ಮಾತ್ರ ಅಂಥವರ ವಿರುದ್ಧ ಕ್ರಮ ಜರುಗಿಸುತ್ತಿಲ್ಲ’ ಎಂದು ಕೂಗಾಡಿದರು.
ಸ್ವಾಮಿ ಎಂಬ ಕುಂಬೇರಪ್ಪನ ಅಪರಾತಪರದ ಬಗ್ಗೆ ಮಾತನಾಡಿದ ಪತ್ರಕರ್ತ ಪರಮಾನಂದ ಹೆಗಡೆ ನಗರಸಭೆ ಭ್ರಷ್ಟಾಚಾರದ ಬಗ್ಗೆಯೂ ಪ್ರಸ್ತಾಪಿಸಿದರು. `ದೇವಿಕೇರೆ ಬಳಿ ಅಂಗಡಿ ತೆರವು ವಿಚಾರವಾಗಿ ಒಬ್ಬರಿಗೆ ಒಂದು ನ್ಯಾಯ ಇನ್ನೊಬ್ಬರಿಗೆ ಇನ್ನೊಂದು ನ್ಯಾಯಯಾದ ಬಗ್ಗ ನನಗೆ ಫೋನ್ ಬರುತ್ತಿದೆ. ಗಣೇಶ ನಗರ ರಸ್ತೆ ಕಾಮಗಾರಿಯ ಗುತ್ತಿಗೆದಾರ ನಾಪತ್ತೆ ಎಂಬ ಸುದ್ದಿಯಿದೆ. ಅಲ್ಲಿರುವ ಪೈಪ್ಲೈನ್ ಅವೈಜ್ಞಾನಿಕವಾಗಿದ್ದು, ಅದನ್ನು ಗಮನಿಸುವವರಿಲ್ಲ’ ಎಂದು ಪರಮಾನಂದ ಹೆಗಡೆ ಆಕ್ರೋಶವ್ಯಕ್ತಪಡಿಸಿದರು. `ದೇವಿಕೇರಿ, ಕೋಟೆಕೆರೆಯಲ್ಲಿ ಸಂಘ-ಸAಸ್ಥೆಗಳು ನೀಡಿದ ಉಪಕರಣವೂ ಹಾಳಾಗುತ್ತಿದೆ. ನಗರಸಭೆ ಜವಾಬ್ದಾರಿ ಏಕೆ ತೆಗೆದುಕೊಂಡಿಲ್ಲ? ಎಂದು ಪರಮಾನಂದ ಹೆಗಡೆ ಪ್ರಶ್ನೆ ಮಾಡಿದರು. `ಬೀಡಾಡಿ ದನ ರಕ್ಷಣೆಗೆ ಕೊಂಡೆವಾಡಿ ಕಟ್ಟಿ ಹಣ ಮಾತ್ರ ಖರ್ಚು ಮಾಡಲಾಗಿದೆ. ನಾಯಿ ಆಪರೇಶನ್ ಏನಾಯಿತು? ಎನ್ನುವುದರ ಬಗ್ಗೆ ಮಾಹಿತಿ ಇಲ್ಲ. ಆಸ್ಪತ್ರೆ ಎದುರೇ ಧೂಳು ಹೆಚ್ಚಾದರೂ ಯಾರೂ ತಲೆಕೆಡಿಸಿಕೊಂಡಿಲ್ಲ. ಇಲ್ಲಿನ ಅವ್ಯವಸ್ಥೆ ನೋಡಿ ಅತಿಕ್ರಮಣಗಳ ತವರು ಹಾಗೂ ಹೊಂಡೆಗುoಡಿ ಎಂದು ಶಿರಸಿಗೆ ಬಿರುದು ಕೊಟ್ಟಿದ್ದಾರೆ’ ಎಂದು ತಮ್ಮ ಅಸಮಧಾನಹೊರ ಹಾಕಿದರು.
ಮನೆಗಳಿಗೆ ನೀರು ನುಗ್ಗುವುದು, ಆರೋಗ್ಯದ ಸಮಸ್ಯೆ, ಪಾರ್ಕಿಂಗ್ ತೊಂದರೆ ಬಗ್ಗೆ ಅನೇಕರು ಅಸಮಧಾನವ್ಯಕ್ತಪಡಿಸಿದರು. ಕಚೇರಿ ಅವಧಿಯಲ್ಲಿ ಅಧಿಕಾರಿಗಳು ಸಿಗುವುದಿಲ್ಲ ಎಂದು ಸಹ ಜನ ಆಕ್ರೋಶವ್ಯಕ್ತಪಡಿಸಿದರು.