ಜನ ವಿರೋಧ ಹಾಗೂ ಆತಂಕದ ನಡುವೆಯೂ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವುದಕ್ಕಾಗಿ ಅರಣ್ಯ ಅಧಿಕಾರಿಗಳು ಆಸಕ್ತರಾಗಿದ್ದು, ಅರಣ್ಯವಾಸಿಗಳಿಗೆ ಮತ್ತೆ ಮತ್ತೆ ನೋಟಿಸ್ ನೀಡುತ್ತಿದ್ದಾರೆ. ಹತ್ತು ಹಲವು ಎಕರೆ ಅತಿಕ್ರಮಣ ಮಾಡಿದ ರಾಜಕಾರಣಿಗಳನ್ನು ಬಿಟ್ಟು ಅಸಹಾಯಕ ವೃದ್ಧ ಕುಟುಂಬವನ್ನು ಗುರಿಯಾಗಿರಿಸಿಕೊಂಡು ಅರಣ್ಯಾಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ.
ಅರಣ್ಯ ಅಧಿಕಾರಿಗಳು ನೀಡಿದ ನೋಟಿಸ್ ಸ್ವೀಕರಿಸಿದ ಸಿದ್ದಾಪುರದ ರಾಮಚಂದ್ರ ನಾಯ್ಕ ಅವರು `ನಮ್ಮ ಭೂಮಿ ಮಾತ್ರವಲ್ಲ. ನಮ್ಮ ಜೀವವನ್ನು ತೆಗೆದುಕೊಂಡು ಹೋಗಿ’ ಎಂದು ಹತಾಶೆಯ ಮಾತುಗಳನ್ನಾಡಿದ್ದಾರೆ. ಕ್ಯಾದಗಿ ವಲಯ ಅರಣ್ಯಾಧಿಕಾರಿ ಕಚೇರಿಯಿಂದ ಮಾವಿನಕೊಡ ಗ್ರಾಮದ ರಾಮಚಂದ್ರ ತಿಮ್ಮ ನಾಯ್ಕ ಬಿಳ್ಳುಮನೆ ಅವರಿಗೆ ನೋಟಿಸ್ ಬಂದಿದೆ. `ಜೀವ ಹೋಗುವ ಪರಿಸ್ಥಿತಿಯಲ್ಲಿರುವಾಗ ಜೀವನ ಪರ್ಯಂತ ಸಾಗುವಳಿ ಮಾಡಿದ ಭೂಮಿಯನ್ನು ಬಿಡುಕೊಡಬೇಕು’ ಎಂಬ ಆತಂಕದಲ್ಲಿ ರಾಮಚಂದ್ರ ನಾಯ್ಕ ಅವರು ಕಣ್ಣೀರು ಸುರಿಸಿದ್ದಾರೆ.
`ಅನಾಧಿಕಾಲದಿಂದಲೂ 3 ಎಕರೆ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬಂದಿದ್ದು, ಅದನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆದಿದೆ. ಒಂದು ವಾರದಲ್ಲಿ ಜಾಗ ಖಾಲಿ ಮಾಡುವಂತೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಕಷ್ಟಪಟ್ಟು ಬೆಳೆಸಿರುವ ಅಡಿಕೆ, ತೆಂಗು ಮರಗಳನ್ನು ನಾಶ ಮಾಡುವುದನ್ನು ಕಣ್ಣಿನಿಂದ ನೋಡಲು ಸಾಧ್ಯವಿಲ್ಲ. ಹೀಗಾಗಿ ಆ ಗಿಡ ನಾಶ ಮಾಡುವ ಮುನ್ನ ನಮ್ಮನ್ನು ಕೊಂದುಬಿಡಿ’ ಎಂದು ರಾಮಚಂದ್ರ ನಾಯ್ಕ ಅವರು ಅಳಲು ತೋಡಿಕೊಂಡಿದ್ದಾರೆ.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರ ಜೊತೆ ಮಾಬ್ಲೇಶ್ವರ ನಾಯ್ಕ, ಜಗದೀಶ್ ನಾಯ್ಕ, ರವಿ ನಾಯ್ಕ ಅರಳಿಮಕ್ಕಿ, ಚೌಡಾ ಗೌಡ ಕಿತ್ತಳ್ಳಿ ಅವರು ರಾಮಚಂದ್ರ ನಾಯ್ಕ ಅವರನ್ನು ಸಮಾಧಾನ ಮಾಡಿದ್ದಾರೆ.