ನದಿಯಲ್ಲಿರುವುದನ್ನು ಬಿಟ್ಟು ನಾಡಿಗೆ ಬಂದಿದ್ದ ಮೊಸಳೆ ಮೂಗಿಗೆ ದಾರ ಕಟ್ಟಿದ ಜನ ಅದನ್ನು ಎಳೆದು ನೀರಿಗೆ ಬಿಟ್ಟಿದ್ದಾರೆ.
ದಾಂಡೇಲಿ ನಗರದ ಹಳಿಯಾಳ ರಸ್ತೆಯ ಗೇಟ್ ನಂ 3ರ ಬಳಿ ಗುರುವಾರ ಮೊಸಳೆ ಕಾಣಿಸಿದೆ. ಕಾಳಿ ನದಿಯಲ್ಲಿರಬೇಕಾದ ಮೊಸಳೆ ನದಿ ದಡ ದಾಟಿ ಊರಿನ ಬಳಿ ಬಂದಿದೆ. ಅಲೈಡ್ ಏರಿಯಾದ ಚರಂಡಿ ಮೂಲಕ ಮೊಸಳೆ ಎಲ್ಲಾ ಕಡೆ ಸುತ್ತಾಡಿದೆ.
ಅನತಿ ದೂರದಲ್ಲಿಯೇ ಕಾಳಿ ನದಿ ಹರಿಯುತ್ತಿದ್ದು, ಅಲ್ಲಿ ಹೇರಳ ಪ್ರಮಾಣದ ಮೊಸಳೆಗಳಿವೆ. ಆಗಾಗ ಆ ಮೊಸಳೆಗಳು ಊರಿನ ಕಡೆ ಬರುವುದು ಸಾಮಾನ್ಯವಾಗಿದೆ. ಕೆಲವೊಮ್ಮೆ ಮೊಸಳೆ ತಾನಾಗಿಯೇ ನದಿ ಸೇರುತ್ತದೆ. ಅನೇಕ ಬಾರಿ ಅರಣ್ಯ ಸಿಬ್ಬಂದಿ ಅದನ್ನು ಹಿಡಿದು ನದಿಗೆ ಬಿಡುತ್ತಾರೆ.
ಈ ದಿನ ಜನ ವಸತಿ ಪ್ರದೇಶದ ಬಳಿ ಮೊಸಳೆ ಕಾಣಿಸಿಕೊಂಡಿದ್ದರಿoದ ಜನ ಆತಂಕಕ್ಕೆ ಒಳಗಾಗಿದ್ದು, ಅರಣ್ಯಾಧಿಕಾರಿಗಳಿಗೆ ಫೋನ್ ಮಾಡಿದ್ದಾರೆ. ಆದರೆ, ಎಷ್ಟು ಹೊತ್ತಾದರೂ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಂದಿಲ್ಲ. ಮೊಸಳೆಯನ್ನು ಹಿಡಿಯುವ ಕೆಲಸವನ್ನು ಶುರು ಮಾಡಿಲ್ಲ. ಹೀಗಾಗಿ ಜನರೇ ಉಪಾಯವಾಗಿ ಮೊಸಳೆಗೆ ಬಲೆ ಬೀಸಿದ್ದಾರೆ.
ಮೊಸಳೆ ತಲೆಯ ಮೇಲೆ ಗೋಣಿ ಚೀಲ ಹಾಕಿದ ಜನ ನಂತರ ನಿಧಾನವಾಗಿ ಅದಕ್ಕೆ ಹಗ್ಗ ಕಟ್ಟಿದ್ದಾರೆ. ಒಬ್ಬರು ಮೊಸಳೆಯ ಬಾಲ ಹಿಡಿದುಕೊಂಡಿದ್ದು, ಮತ್ತೆ ಐದು ಜನ ಸೇರಿ ಆ ಹಗ್ಗ ಎಳೆದಿದ್ದಾರೆ. ನದಿಯವರೆಗೂ ಮೊಸಳೆಯನ್ನು ಎಳೆದೊಯ್ದು ಬಿಟ್ಟಿದ್ದಾರೆ. ಕಾಳಿ ನದಿ ಕಾಣಿಸಿದ ತಕ್ಷಣ ಮೊಸಳೆ ನೀರಿಗೆ ಬಿದ್ದಿದ್ದು, ಅದಾದ ನಂತರ ಅಲ್ಲಿನ ಜನರೇ ಹಗ್ಗ ಬಿಡಿಸಿದ್ದಾರೆ.