ಹಸಿ ಅಡಿಕೆ ಮಾರಾಟದ ವಿಷಯದಲ್ಲಿ ಅಡಿಕೆ ಜೊತೆ ಅದರ ಜಂಗನ್ನೂ ತೂಕಕ್ಕೆ ಹಾಕಲಾಗುತ್ತಿದ್ದು, ಅನುಪಯುಕ್ತ ಜಂಗಿನ ತೂಕಕ್ಕೂ ಸಹ ವ್ಯಾಪಾರಸ್ಥರು ಸಹಕಾರಿ ಸಂಸ್ಥೆಗೆ ಕಮಿಶನ್ ನೀಡುತ್ತಿದ್ದಾರೆ. ಹೀಗಾಗಿ ಜಂಗಿನ ತೂಕವನ್ನು ಬಿಡಬೇಕು ಎಂದು ವ್ಯಾಪಾರಸ್ಥರು ಆಗ್ರಹಿಸಿ ಶಿರಸಿ ಟಿಎಸ್ಎಸ್ ಅಂಗಳದಲ್ಲಿ ಹಸಿ ಅಡಿಕೆ ಟೆಂಡರ್ ಬರೆಯುವುದನ್ನೇ ನಿಲ್ಲಿಸಿದ್ದಾರೆ!
Advertisement. Scroll to continue reading.
`ಪ್ರತಿ ಕ್ವಿಂಟಲ್ ಅಡಿಕೆಗೆ 10 ಕೆಜಿ ಜಿಂಗ್ ತೂಕ ಬಿಡಬೇಕು. ವ್ಯಾಪಾರಸ್ಥರು ಚೆಕ್ ನೀಡಿದರೂ ಸಹ ಅದನ್ನು ಟಿಎಸ್ಎಸ್ ಸಂಸ್ಥೆಯವರು ಪರಿಗಣಿಸಬೇಕು. ತೂಕದ ವಿಷಯದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು’ ಎಂದು ವ್ಯಾಪಾರಸ್ಥರು ಆಗ್ರಹಿಸಿದ್ದಾರೆ. `ಈ ಬಗ್ಗೆ ಮನವಿ ಕೊಡಲು ಹೋದಾಗ ವ್ಯಾಪಾರಸ್ಥರ ಮೇಲೆ ಹಲ್ಲೆ ನಡೆಯುವ ಪ್ರಯತ್ನ ನಡೆದಿದೆ’ ಎಂದು ದೂರಿದ್ದಾರೆ. ಆದರೆ, ಹಲ್ಲೆ ಆರೋಪಕ್ಕೆ ಸಂಬoಧಿಸಿ ವ್ಯಾಪಾರಿಗಳಿಂದ ಕಾನೂನು ಹೋರಾಟ ನಡೆದಿಲ್ಲ.
ಅಡಿಕೆ ವ್ಯಾಪಾರಸ್ಥರು ಹಾಗೂ ಟಿಎಸ್ಎಸ್ ನಡುವಿನ ಜಟಾಪಟಿಯಿಂದಾಗಿ ಬುಧವಾರ ಟಿಎಸ್ಎಸ್ ಅಂಗಳ ಗೊಂದಲದ ಗೂಡಾಗಿತ್ತು. ಹಸಿ ಅಡಿಕೆ ಟೆಂಡರ್ ವಿಷಯವಾಗಿ ಮಾತಿಗೆ ಮಾತು ಬೆಳೆದಿದ್ದು, ಆಕ್ರೋಶದ ನುಡಿಗಳು ಕೇಳಿಸಿದವು. `ಜಂಗಿನ ತೂಕಕ್ಕೂ ಕಮಿಷನ್ ನೀಡಬೇಕಾದ ಸ್ಥಿತಿಯಿರುವುದರಿಂದ ವ್ಯಾಪಾರಸ್ಥರು ಅನಗತ್ಯವಾಗಿ 12-13 ಸಾವಿರ ರೂ ಹೆಚ್ಚುವರಿಯಾಗಿ ಸಂಘಕ್ಕೆ ಪಾವತಿಸಬೇಕಾಗಿದೆ’ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಂಡರು.
`ಮಧ್ಯಾಹ್ನ 1.30ರ ವೇಳೆಗೆ ಟೆಂಡರ್ ಘೋಷಣೆ ಆಗುತ್ತದೆ. ಆ ಅವಧಿಯಲ್ಲಿ 4-5 ಲಕ್ಷ ರೂ ನಗದು ತಂದು ಕೊಡಲು ವ್ಯಾಪಾರಸ್ಥರಿಂದ ಸಾಧ್ಯವಾಗುವುದಿಲ್ಲ. ಹೀಗಾಗಿ ಚೆಕ್ ನೀಡಲು ಮುಂದಾದರೆ ಅದನ್ನು ಸಂಸ್ಥೆಯವರು ಪಡೆಯುತ್ತಿಲ್ಲ’ ಎಂದು ವ್ಯಾಪಾರಸ್ಥರು ದೂರಿದರು. `ಹಸಿ ಅಡಿಕೆ ತೂಕವನ್ನು ಬೇರೆ ಕಡೆ ನಡೆಸಲಾಗುತ್ತಿದೆ. ಅದರಲ್ಲಿ ಪಾರದರ್ಶಕತೆ ಇಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು. `ಈಚೆಗೆ ವ್ಯಾಪಾರಸ್ಥರು 1 ಲಕ್ಷ ರೂ ಠೇವಣಿ ಕೊಡಬೇಕು ಎಂದು ಸೂಚಿಸಲಾಗಿದೆ. ಯಾವ ಉದ್ದೇಶಕ್ಕೆ ಠೇವಣಿ ಎಂದು ಕೇಳಿದರೂ ಉತ್ತರವಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು.
`ಟೆಂಡರ್ ವಿಷಯದಲ್ಲಿ ಎಷ್ಟೇ ಸಮಸ್ಯೆ ಇದ್ದರೂ ಅದನ್ನು ಸಹಿಸಿಕೊಂಡಿದ್ದೇವು. ಆದರೆ, ಮನವಿ ಕೊಟ್ಟರೂ ಸ್ಪಂದಿಸದ ಕಾರಣ ಅಡಿಕೆ ಟೆಂಡರ್ ಬರೆಯುವ ಪ್ರಕ್ರಿಯೆಯಿಂದ ಹೊರ ಬಂದಿದ್ದೇವೆ’ ಎಂದು ವ್ಯಾಪಾರಸ್ಥರು ವಿವರಿಸಿದರು. `ವ್ಯವಸ್ಥೆ ಸರಿಯಾಗುವವರೆಗೂ ಟೆಂಡರ್ ಬರೆಯುವುದಿಲ್ಲ’ ಎಂದು ಪಟ್ಟುಹಿಡಿದರು. ಈ ಎಲ್ಲದರ ನಡುವೆ `ಕೆಲ ವರ್ಷಗಳಿಂದ ಹಸಿ ಅಡಿಕೆ ಟೆಂಡರ್ ಯಶಸ್ವಿಯಾಗಿ ನಡೆಯುತ್ತಿದ್ದು, ಕೆಲವರು ಅನಗತ್ಯ ಗೊಂದಲ ಮಾಡುತ್ತಿದ್ದಾರೆ. ಹಸಿ ಅಡಿಕೆ ಟೆಂಡರ್ ರೈತ ಸ್ನೇಹಿಯಾಗಿದೆ. ಟಿಎಸ್ಎಸ್ ಸಹ ರೈತರ ಹಿತ ಕಾಯಲು ಬದ್ಧವಾಗಿದ್ದು, ಜನ ಯಾವುದೇ ಒತ್ತಡ ಹಾಗೂ ಅಪಪ್ರಚಾರಕ್ಕೆ ಒಳಗಾಗಬಾರದು’ ಎಂದು ಟಿಎಸ್ಎಸ್ ಪ್ರಕಟಣೆ ಹೊರಡಿಸಿದೆ. ಈ ನಡುವೆ ಬುಧವಾರ ಹಸಿ ಅಡಿಕೆ ಕ್ವಿಂಟಾಲಿಗೆ 5579ರೂಪಾಯಿವರೆಗೆ ಮಾರಾಟವಾಗಿದೆ.