ನೌಕಾನೆಲೆಯ ಸ್ಥಾಪನೆಯಿಂದಾಗಿ ಭೂಮಿ ಕಳೆದುಕೊಂಡ ಸಾವಿರಾರು ನಿರಾಶ್ರಿತರ ಸಮಸ್ಯೆ ಇಂದಿಗೂ ಸಂಪೂರ್ಣವಾಗಿ ಬಗೆಹರಿದಿಲ್ಲ. ದಶಕಗಳ ಹಿಂದೆ ತಮ್ಮ ಸರ್ವಸ್ವವನ್ನೂ ದೇಶದ ರಕ್ಷಣೆಗಾಗಿ ತ್ಯಾಗ ಮಾಡಿದ ಕುಟುಂಬದವರು ಸರಿಯಾದ ಪುನರ್ವಸತಿ ಮತ್ತು ಉದ್ಯೋಗದ ಭರವಸೆಗಳಿಗಾಗಿ ಕಾಯುತ್ತಿದ್ದಾರೆ. ಹೀಗಿರುವಾಗ ರಾಷ್ಟ್ರಪತಿಗಳೇ ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಿದ್ದು, ಅವರ ಭೇಟಿ ನಿರಾಶ್ರಿತರ ಪಾಲಿಗೆ ಆಸೆ ಹುಟ್ಟಿಸಿದೆ.
ಭಾರತದ ಸಶಸ್ತ್ರ ಪಡೆಗಳ ಸರ್ವೋಚ್ಚ ದಂಡನಾಯಕಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಾರವಾರದಲ್ಲಿರುವ `ಐಎನ್ಎಸ್ ಕದಂಬ’ ನೌಕಾನೆಲೆಗೆ ನೀಡಿದ ಭೇಟಿಯು ಭಾರತದ ರಕ್ಷಣಾ ಇತಿಹಾಸದಲ್ಲಿ ಒಂದು ಸುವರ್ಣ ಅಧ್ಯಾಯ. ಅರಬ್ಬಿ ಸಮುದ್ರದ ಆಳದಲ್ಲಿ ಭಾರತೀಯ ನೌಕಾಪಡೆಯ ಕಲ್ವರಿ ದರ್ಜೆಯ `ಐಎನ್ಎಸ್ ವಾಗ್ಶೀರ್’ ಜಲಂತರಗಾಮಿಯಲ್ಲಿ ಅವರು ನಡೆಸಿದ ಐತಿಹಾಸಿಕ ಯಾನವು ಕೇವಲ ಒಂದು ಸಾಹಸವಲ್ಲ. ಬದಲಿಗೆ ಅದು ಭಾರತದ `ನೌಕಾ ಶಕ್ತಿ’ಯ ಜಾಗತಿಕ ಪ್ರದರ್ಶನವೂ ಹೌದು. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ನಂತರ ಸುಮಾರು ಎರಡು ದಶಕಗಳ ಬಳಿಕ ಪ್ರಥಮ ಪ್ರಜೆಯೊಬ್ಬರು ಜಲಂತರಗಾಮಿಯಾಗಿ ಆಳಕ್ಕೆ ಇಳಿದಿರುವುದು ನೌಕಾಪಡೆಯ ಆತ್ಮವಿಶ್ವಾಸವನ್ನು ದ್ವಿಗುಣಗೊಳಿಸಿದೆ.
ಪ್ರಸ್ತುತ ಭೇಟಿಯು ಮುಖ್ಯ ಉದ್ದೆಶ, ಕಾರವಾರದ ನೌಕಾನೆಲೆಯನ್ನು ಏಷ್ಯಾದಲ್ಲೇ ಅತಿದೊಡ್ಡ ಮತ್ತು ವಿಶ್ವದರ್ಜೆಯ ರಕ್ಷಣಾ ಕೇಂದ್ರವಾಗಿ ರೂಪಿಸುವುದಾಗಿದೆ. ಅದು ಭಾರತದ ದೃಢ ಸಂಕಲ್ಪಕ್ಕೆ ಸಾಕ್ಷಿಯಾಗಲಿದೆ. ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಜ್ಯದ ಪರವಾಗಿ ರಾಷ್ಟ್ರಪತಿಗಳನ್ನು ಬರಮಾಡಿಕೊಂಡಿದ್ದು, ಈ ಭೇಟಿಗೆ ಸಾಂವಿಧಾನಿಕ ಘನತೆಯನ್ನು ತುಂಬಿತು. ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಅವರು ನೌಕಾನೆಲೆಯ ಅಭಿವೃದ್ಧಿಗೆ ರಾಜ್ಯದ ಸಂಪೂರ್ಣ ಸಹಕಾರದ ಭರವಸೆ ನೀಡಿದ್ದು, ಕೇಂದ್ರ ಮತ್ತು ರಾಜ್ಯಗಳ ನಡುವಿನ ರಕ್ಷಣಾ ಸಮನ್ವಯಕ್ಕೆ ಕನ್ನಡಿ ಹಿಡಿದಿದೆ. ಆದರೆ, ಈ ರಾಷ್ಟ್ರೀಯ ಹೆಮ್ಮೆಯ ನಡುವೆ ಕಾರವಾರದ ಸ್ಥಳೀಯರ ದಶಕಗಳ ನೋವು ಮತ್ತು ನಿರೀಕ್ಷೆಗಳೂ ರಾಷ್ಟ್ರಪತಿಗಳ ಭೇಟಿಯ ಸಂದರ್ಭದಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ.
ನೌಕಾನೆಲೆಯ ವಿಸ್ತರಣೆಯ ಭಾಗವಾಗಿ ನಾಗರಿಕ ವಿಮಾನ ನಿಲ್ದಾಣದ ಬೇಡಿಕೆಯೂ ಪ್ರಮುಖವಾಗಿದೆ. ಕಾರವಾರದಲ್ಲಿ ಸುಸಜ್ಜಿತ ವಿಮಾನ ನಿಲ್ದಾಣ ನಿರ್ಮಾಣವಾದರೆ, ಅದು ಕೇವಲ ರಕ್ಷಣಾ ವಲಯಕ್ಕಷ್ಟೇ ಅಲ್ಲದೆ, ಈ ಭಾಗದ ಪ್ರವಾಸೋದ್ಯಮ ಮತ್ತು ಆರ್ಥಿಕ ಪ್ರಗತಿಗೂ ದೊಡ್ಡ ಶಕ್ತಿ ನೀಡಲಿದೆ. ರಾಷ್ಟ್ರಪತಿಗಳ ಈ ಭೇಟಿಯು ದೆಹಲಿಯ ಮಟ್ಟದಲ್ಲಿ ಕಾರವಾರದ ಈ ಮೂಲಭೂತ ಸಮಸ್ಯೆಗಳಿಗೆ ಮತ್ತು ವಿಮಾನ ನಿಲ್ದಾಣದಂತಹ ಕನಸಿನ ಯೋಜನೆಗಳಿಗೆ ಹೊಸ ಚೈತನ್ಯ ನೀಡುವ ನಿರೀಕ್ಷೆ ಇದೆ.
ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ `ಸೀ ಬರ್ಡ್’ ಯೋಜನೆ ಪೂರಕವಾಗಬೇಕೆಂದರೆ, ಅದು ಸ್ಥಳೀಯ ಜನಜೀವನದೊಂದಿಗೆ ಬೆರೆಯಬೇಕು. ರಕ್ಷಣಾ ಇಲಾಖೆಯು ಸ್ಥಳೀಯ ಯುವಕರಿಗೆ ತಾಂತ್ರಿಕ ತರಬೇತಿ ಮತ್ತು ಉದ್ಯೋಗದಲ್ಲಿ ಆದ್ಯತೆ ನೀಡುವ ಮೂಲಕ ನೌಕಾನೆಲೆಯ ಶಕ್ತಿಯನ್ನು ಜನಸಾಮಾನ್ಯರಿಗೂ ತಲುಪಿಸಬೇಕಿದೆ. ಈ ಐತಿಹಾಸಿಕ ಯಾನವು ಕೇವಲ ಸಾಗರದ ಆಳದ ಅರಿವಷ್ಟೇ ಅಲ್ಲದೆ, ಭೂಮಿಯ ಮೇಲಿನ ಸ್ಥಳೀಯರ ಸಂಕಷ್ಟಗಳಿಗೂ ಮದ್ದು ನೀಡಲಿ ಎಂಬುದು ಎಲ್ಲರ ಆಶಯವಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಈ ಭೇಟಿಯು ಭಾರತದ ಕಡಲ ಗಡಿಯನ್ನು ಭದ್ರಪಡಿಸುವ ಸಂಕಲ್ಪದೊAದಿಗೆ, ಕಾರವಾರದಂತಹ ಆಯಕಟ್ಟಿನ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ಮುನ್ನುಡಿಯಾಗಲಿ. ದೇಶದ ಪ್ರಥಮ ಪ್ರಜೆ ಸಮುದ್ರದ ಆಳಕ್ಕೆ ಇಳಿದ ಈ ಘಟನೆ, ಭಾರತದ ರಕ್ಷಣಾ ಪಡೆಗಳ ಮತ್ತು ಜನರ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ.
ಕಾರವಾರದ ‘ಸೀ ಬರ್ಡ್’ ಯೋಜನೆಯಡಿ ಅಭಿವೃದ್ಧಿ ಹೊಂದುತ್ತಿರುವ ಈ ನೌಕಾನೆಲೆಯು ಜಾಗತಿಕ ಮಟ್ಟದಲ್ಲಿ ಭಾರತದ ರಕ್ಷಣಾ ನೀತಿಯ ಕೇಂದ್ರಬಿAದುವಾಗಿದೆ. ರಾಷ್ಟ್ರಪತಿಗಳ ಭೇಟಿಯು ಈ ನೆಲೆಯನ್ನು ವಿಶ್ವದರ್ಜೆಯ ಅತ್ಯಾಧುನಿಕ ತಂತ್ರಜ್ಞಾನದ ಹಬ್ ಆಗಿ ಪರಿವರ್ತಿಸುವ ಸಂದೇಶವನ್ನು ಜಗತ್ತಿಗೆ ನೀಡಿದೆ. ಶತ್ರು ದೇಶಗಳ ಕಣ್ಣು ಬಿದ್ದಿರುವ ಹಿಂದೂ ಮಹಾಸಾಗರ ವಲಯದಲ್ಲಿ ಭಾರತದ ಪಾರುಪತ್ಯವನ್ನು ಸ್ಥಾಪಿಸಲು ಇದು ಪ್ರಮುಖವಾಗಿದೆ. `ಆತ್ಮನಿರ್ಭರ ಭಾರತ’ದಡಿ ನಿರ್ಮಾಣವಾದ ಜಲಂತರಗಾಮಿಗಳು ಭಾರತೀಯ ನೌಕಾಪಡೆಯು ಸಾಗರದೊಳಗೆ ಯಾವುದೇ ಸವಾಲನ್ನು ಎದುರಿಸಲು ಸಿದ್ಧವಿದೆ ಎಂಬ ಭರವಸೆ ಮೂಡಿಸಿವೆ. ಇದು ಜಾಗತಿಕ ವೇದಿಕೆಯಲ್ಲಿ ಭಾರತದ ಮಿಲಿಟರಿ ರಾಯಭಾರತ್ವವನ್ನು ಎತ್ತಿ ಹಿಡಿಯುತ್ತದೆ.
ರಾಷ್ಟ್ರಪತಿಗಳ ಭೇಟಿಯ ಬೆನ್ನಲ್ಲೇ ಕಾರವಾರದ ಅಭಿವೃದ್ಧಿಯ ಚರ್ಚೆಗಳು ವೇಗ ಪಡೆದಿವೆ. ನೌಕಾನೆಲೆಯ ವ್ಯಾಪ್ತಿಯಲ್ಲಿ ಉದ್ದೇಶಿತ ನಾಗರಿಕ ವಿಮಾನ ನಿಲ್ದಾಣದ ಕಾರ್ಯಾರಂಭವಾದರೆ ಉತ್ತರ ಕನ್ನಡ ಜಿಲ್ಲೆಯ ಚಿತ್ರಣವೇ ಬದಲಾಗಲಿದೆ. ಇದು ಪ್ರವಾಸೋದ್ಯಮದ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಬಲ್ಲದು. ಆದರೆ, ಈ ಪ್ರಗತಿಯ ಹಾದಿಯಲ್ಲಿ ಭೂಮಿ ನೀಡಿದ ನಿರಾಶ್ರಿತ ಕುಟುಂಬಗಳ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಮರೆಯಬಾರದು ಎಂಬುದು ಸ್ಥಳೀಯರ ಆಗ್ರಹ. ರಾಜ್ಯ ಸರ್ಕಾರವು ಕೇಂದ್ರದೊAದಿಗೆ ಸಮನ್ವಯ ಸಾಧಿಸಿ, ನಿರಾಶ್ರಿತರಿಗೆ ಕಾಯಂ ಪುನರ್ವಸತಿ ಪತ್ರಗಳು ಮತ್ತು ಸ್ಥಳೀಯ ಯುವಕರಿಗೆ ನೌಕಾನೆಲೆಯಲ್ಲಿ ಹೆಚ್ಚಿನ ಉದ್ಯೋಗ ಮೀಸಲಾತಿ ನೀಡುವ ಮೂಲಕ ‘ರಕ್ಷಣೆ ಮತ್ತು ಪ್ರಗತಿ’ ಎರಡನ್ನೂ ಸಮಾನವಾಗಿ ಕೊಂಡೊಯ್ಯಬೇಕಿದೆ.
ಲೇಖಕರು: ಶ್ರೀನಾಥ್ ಜೋಶಿ, ಸಿದ್ದರ.
ಹಿರಿಯ ಪತ್ರಕರ್ತರು( 9060188081 )