ಭೂ ಕುಸಿತ ವಲಯವಾದ ಶರಾವತಿ ನದಿ ಕಣಿವೆ ಪ್ರದೇಶದಲ್ಲಿ ಸರ್ಕಾರ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆ ಮುಂದಾಗಿದ್ದು, ಈ ಯೋಜನೆಯ ಅನಾಹುತಗಳ ಬಗ್ಗೆ ಕುದ್ರಿಗಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮಹ್ಮದ ಫೈಸಲ್ ಬಾವಾಫಕ್ಕಿ ಅವರು ಗಮನಸೆಳೆದಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೂ ಪತ್ರ ಬರೆದಿರುವ ಅವರು ಯೋಜನೆಯನ್ನು ಕೈ ಬಿಡುವಂತೆ ಆಗ್ರಹಿಸಿದ್ದಾರೆ.
ಕುದ್ರಿಗಿ ಗ್ರಾಮ ಪಂಚಾಯಿತವೂ ಯೋಜನೆಯನ್ನು ವಿರೋಧಿಸಿದ ಬಗ್ಗೆ ಅವರು ನಿರ್ಣಯ ಮಂಡಿಸಿ, ಅದರ ಪ್ರತಿಯನ್ನು ಸರ್ಕಾರಕ್ಕೆ ಕಳುಹಿಸಿದ್ದಾರೆ. `ಶರಾವತಿ ನದಿ ಕಣಿವೆ ಪ್ರದೇಶದಲ್ಲಿ ಭೂ ಕುಸಿತದ ಅಪಾಯವಿದೆ. ಸಿಂಗಳಿಕ ಅಭಯಾರಣ್ಯ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಯೋಜನೆಗೆ ಅವಕಾಶ ಕೊಡುವುದು ಸರಿಯಲ್ಲ. ಪರಿಸರದ ಜೊತೆ ಆ ಭಾಗದ ರೈತರ ಜೀವನೋಪಾಯಕ್ಕೆ ಸಹ ಈ ಯೋಜನೆ ಅಪಾಯಕಾರಿ’ ಎಂದವರು ವೈಜ್ಞಾನಿಕ ಕಾರಣಗಳ ಜೊತೆ ವಿವರಿಸಿದ್ದಾರೆ.
`ಶರಾವತಿ ಕಣಿವೆಯು ಈಗಾಗಲೇ ಸರಣಿ ಜಲಾಶಯ ಮತ್ತು ಜಲ ವಿದ್ಯುತ ಯೋಜನೆಗಳಿಂದ ಅಪಾಯಕ್ಕೆ ಸಿಲುಕಿದೆ. ಬೇಸಿಗೆ ಅವಧಿಯಲ್ಲಿ ನದಿ ನೀರಿನ ಹರಿವು ಕಡಿಮೆ ಆಗುತ್ತದೆ. ಸಮುದ್ರದ ಉಪ್ಪು ನೀರು 18ಕಿಮೀ ಹಿಮ್ಮುಖವಾಗಿ ಶರಾವತಿ ನದಿಗೆ ಸೇರುತ್ತಿದೆ. ಮಳೆಗಾಲದಲ್ಲಿ ಪ್ರವಾಹ ಉಂಟಾಗುತ್ತಿದ್ದು, ಜನ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ. ಇಂಥ ಸ್ಥಿತಿಯಲ್ಲಿ ಗೇರುಸೊಪ್ಪೆ ಮತ್ತು ತಲಕಳಲೆ ಜಲಾಶಯಗಳ ನಡುವಿನ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಸ್ಪೋಟಕ ಬಳಸುವುದು ಅಪಾಯಕಾರಿ’ ಎಂದವರು ಮನವರಕೆ ಮಾಡುವ ಪ್ರಯತ್ನ ಮಾಡಿದ್ದಾರೆ. ಈ ವೈಜ್ಞಾನಿಕ ಯೋಜನೆಯ ಅನುಷ್ಠಾನದಿಂದ ಪರಿಸರ, ಜೀವಿವೈವಿಧ್ಯತೆ ಮತ್ತು ಜನಜೀವನದ ಮೇಲೆ ಆಘಾತಕಾರಿ ಪರಿಣಾಮ ಉಂಟಾಗಲಿದೆ’ ಎಂಬ ಆತಂಕವ್ಯಕ್ತಪಡಿಸಿದ್ದಾರೆ.
`ಯೋಜನೆಯ ಅನುಷ್ಠಾನಕ್ಕೆ ಗುರುತಿಸಲಾದ ತಾಣವೂ ಪಶ್ಚಿಮಘಟ್ಚಗಳ ದಟ್ಟವಾದ ನಿತ್ಯ ಹರಿದ್ವರ್ಣದ ಮಳೆಕಾಡುಗಳ ನಡುವೆ ಇದೆ. ಆ ಘಟ್ಟ ಪ್ರದೇಶವು ಅಧಿಕ ಮಳೆ ಮತ್ತು ಕಡಿದಾದ ಕಣಿವೆಗಳಿಂದ ಉಂಟಾಗುವ ಭಾರಿ ಭೂಕುಸಿತಗಳಿಂದಾಗಿ ಅಪಾಯಕಾರಿ ಭೂಕುಸಿತ ವಲಯವೆಂದು ಗುರುತಿಸಲ್ಪಟ್ಟಿದೆ. ಇಲ್ಲಿ ಯೋಜನೆ ಮಾಡುವುದರಿಂದ ಅನೇಕ ಅನಾಹುತಗಳು ನಡೆಯುವ ಸಾಧ್ಯತೆಗಳಿವೆ. ಈ ಬಗ್ಗೆ ಟಿ ವಿ ರಾಮಚಂದ್ರ ಮತ್ತು ಸುಭಾಷ ಚಂದ್ರನ್ ಸೇರಿ ಅನೇಕ ವಿಜ್ಞಾನಿಗಳು ಜನರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಉದ್ದೇಶಿತ ಶರಾವತಿ ಪಂಪ್ಡ್ ಸ್ಟೋರೇಜ ವಿದ್ಯುತ್ ಯೋಜನೆ ಕೈ ಬಿಡಬೇಕು’ ಎಂದು ಆಗ್ರಹಿಸಿದ್ದಾರೆ.