ಶಿರಸಿಯಲ್ಲಿ ನಡೆದ ಅಪಘಾತದಲ್ಲಿ ಯಲ್ಲಾಪುರದ ಯುವಕನೊಬ್ಬ ಸಾವನಪ್ಪಿದ್ದು, ಮತ್ತೊಬ್ಬರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.
ಶಿರಸಿ-ಕುಮಟಾ ರಸ್ತೆಯಲ್ಲಿ ಮಂಗಳವಾರ ರಾತ್ರಿ ಈ ಅವಘಡ ನಡೆದಿದೆ. ಶಿರಸಿ ತಾಲೂಕಿನ ಹಾರುಗಾರ ಸೇತುವೆ ಬಳಿ ಬೈಕ್ ಪಲ್ಟಿಯಾಗಿದೆ. ಪರಿಣಾಮ ಬೈಕಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬರು ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಜೊತೆಗಿದ್ದ ಮತ್ತೊಬ್ಬ ಪ್ರಯಾಣಿಕರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಯಲ್ಲಾಪುರದ ಕಣ್ಣಿಗೇರಿ ಬಳಿಯ ಅಂತಿಗೇರಿಯಲ್ಲಿ ಸಂಕೇತ ನೀಲಕಂಠ ದೇಸಾಯಿ (25) ಅವರು ವಾಸವಾಗಿದ್ದರು. ಕಟ್ಟಡ ಕಾರ್ಮಿಕರಾಗಿದ್ದ ಅವರು ಗೌಂಡಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಜನವರಿ 13ರ ಸಂಜೆ ಶಿರಸಿಗೆ ಹೋಗಿದ್ದರು. ಅಲ್ಲಿಂದ ಕುಮಟಾ ಮಾರ್ಗವಾಗಿ ಅವರು ಬೈಕ್ ಓಡಿಸುತ್ತಿದ್ದರು. ಆ ಬೈಕಿನಲ್ಲಿ ಯಲ್ಲಾಪುರದ ಬಿಜನಕೊಪ್ಪದ ನಾಗರಾಜ ಹರಿಶ್ಚಂದ್ರ ಪಾಟೀಲ ಅವರು ಹಿಂದೆ ಕೂತಿದ್ದರು.
ಹಾರುಗಾರ ಸೇತುವೆ ಬಳಿ ಬೈಕಿನ ವೇಗ ಹೆಚ್ಚಾಯಿತು. ಆ ಬಯಕು ಸಂಕೇತ ದೇಸಾಯಿ ಅವರ ನಿಯಂತ್ರಣ ತಪ್ಪಿತು. ಪರಿಣಾಮ ಬೈಕ್ ರಸ್ತೆ ಮೇಲೆ ಬಿದ್ದಿದ್ದು, ಆ ರಭಸಕ್ಕೆ ಸಂಕೇತ ದೇಸಾಯಿ ಅವರ ತಲೆ ಒಡೆಯಿತು. ಹಿಂಬದಿ ಸವಾರರಾಗಿದ್ದ ನಾಗರಾಜ ಪಾಟೀಲ ಅವರ ತಲೆ, ಸೊಂಟ, ಕಾಲುಗಳಿಗೂ ಪೆಟ್ಟಾಯಿತು. ಈ ಅಪಘಾತದಲ್ಲಿ ಸಂಕೇತ ದೇಸಾಯಿ ಅವರು ಅಲ್ಲಿಯೇ ಸಾವನಪ್ಪಿದರು. ಗಂಭೀರ ಪ್ರಮಾಣದಲ್ಲಿ ಗಾಯಗೊಂಡ ನಾಗರಾಜ ಪಾಟೀಲ್ ಅವರು ಶಿರಸಿ ಸರ್ಕಾರಿ ಆಸ್ಪತ್ರೆಗೆ ದಾಖಲಾದರು.
`ನಿಧಾನವಾಗಿ ಬೈಕ್ ಓಡಿಸಿ.. ಸುರಕ್ಷಿತ ಪ್ರಯಾಣಕ್ಕೆ ಹೆಲ್ಮೇಟ್ ಧರಿಸಿ’