ಗೋಕರ್ಣಕ್ಕೆ ಬರುವ ಅನೇಕ ಪ್ರವಾಸಿಗರು ಪದೇ ಪದೇ ಸಮುದ್ರಕ್ಕೆ ಹಾರುತ್ತಿದ್ದು, ಜೀವನ್ಮರಣದ ನಡುವೆ ಹೋರಾಡುತ್ತಿದ್ದವರನ್ನು ರಕ್ಷಿಸುವುದೇ ಅಲ್ಲಿನ ಜೀವ ರಕ್ಷಕ ಸಿಬ್ಬಂದಿಗೆ ಸವಾಲಾಗಿದೆ. ಗುರುವಾರ ಸಹ ಸಮುದ್ರ ಪಾಲಾಗುತ್ತಿದ್ದ ವ್ಯಕ್ತಿಯೊಬ್ಬರನ್ನು ಅಲ್ಲಿನ ಸಿಬ್ಬಂದಿ ರಕ್ಷಿಸಿದ್ದಾರೆ.
ಗೋಕರ್ಣ ಮುಖ್ಯ ಕಡಲತೀರಕ್ಕೆ ಬಂದಿದ್ದ ದಾವಣಗೆರೆಯ ಪರಶುರಾಮ ರಾಜಪ್ಪ (21) ಅವರು ಎಲ್ಲಾ ನಿಯಮಗಳನ್ನು ಮೀರಿ ಸಮುದ್ರಕ್ಕೆ ಹಾರಿದ್ದಾರೆ. ಆಳ ಸಮುದ್ರದವರೆಗೂ ಹೋದ ಅವರು ಅಲ್ಲಿ ನೀರು ಕುಡಿದಿದ್ದು, ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಅವರನ್ನು ನೋಡಿದ ರಕ್ಷಣಾ ಸಿಬ್ಬಂದಿ ತುರ್ತು ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಿದ್ದಾರೆ.
ಆರು ಜನ ಪ್ರವಾಸಿಗರ ಜೊತೆ ಪರಶುರಾಮ ರಾಜಪ್ಪ ಅವರು ಗೋಕರ್ಣಕ್ಕೆ ಆಗಿಮಿಸಿದ್ದರು. ತಮಗೆ ಈಜು ಬಾರದಿದ್ದರೂ ಸಮುದ್ರಕ್ಕೆ ಇಳಿದಿದ್ದರು. ಅವರು ಅಪಾಯಕ್ಕೆ ಸಿಲುಕಿರುವುದನ್ನು ಲೋಕೇಶ ಹರಿಕಂತ್ರ, ಶಿವಪ್ರಸಾದ್ ಅಂಬಿಗ, ರೋಷನ್ ಖಾರ್ವಿ, ಮೋಹನ ಅಂಬಿಗ ಗಮನಿಸಿದರು.
ರವಿ ನಾಯ್ಕ ಹಾಗೂ ಶೇಖರ್ ಹರಿಕಂತ್ರ ಅವರ ಜೊತೆ ಅಶೋಕ್ ಹೊಸಕಟ್ಟ, ಕಮಲಾಕರ್ ಹೊಸ್ಕಟ್ಟ, ದರ್ಶನ್ ಲಕ್ಕುಮನೆ, ದೀಪಕ್ ಗೌಡ ಹಾಗೂ ಲಿಂಗರಾಜ ಗೌಡ ನೆರವಿನಿಂದ ಪರಶುರಾಮ ಅವರು ಜೀವ ಉಳಿಸಿಕೊಂಡರು.