ಉತ್ತರ ಕನ್ನಡ ಜಿಲ್ಲೆಯ ಪುಣ್ಯ ಹಾಗೂ ಪ್ರಸಿದ್ಧ ಕ್ಷೇತ್ರವಾಗಿರುವ ಗೋಕರ್ಣದಲ್ಲಿ ಮೂಲಭೂತ ಸೌಕರ್ಯಗಳೇ ಸರಿಯಾಗಿಲ್ಲ. ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಗೋಕರ್ಣದ ಸಮಗ್ರ ಅಭಿವೃದ್ಧಿಗೆ ಈವರೆಗೂ ಮನಸ್ಸು ಮಾಡಿದವರಿಲ್ಲ.
ADVERTISEMENT
ಅನೇಕ ಧಾರ್ಮಿಕ ಕೇಂದ್ರಗಳ ಜೊತೆ ಸುಂದರ ಕಡಲ ತೀರವನ್ನು ಹೊಂದಿರುವ ಗೋಕರ್ಣದ ಅಭಿವೃದ್ಧಿಗೆ ಅನೇಕರು ಆಗ್ರಹಿಸಿದ್ದಾರೆ. ಆದರೆ, ಆ ಆಗ್ರಹ ಸರ್ಕಾರವನ್ನು ತಲುಪುತ್ತಿಲ್ಲ. ಜನಪ್ರತಿನಿಧಿಗಳಿಗೆ ಈ ಬಗ್ಗೆ ಅರಿವಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. `ಗೋಕರ್ಣದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಈವರೆಗೂ ಪರಿಹಾರ ದೊರೆತಿಲ್ಲ. ಇಲ್ಲಿ ಅಗತ್ಯವಿರುವ ಕಡೆ ಶೌಚಾಲಯಗಳಿಲ್ಲ. ನವೆಂಬರ್ – ಡಿಸೆಂಬರ್ ಅವಧಿಯಲ್ಲಿ ನಿರೀಕ್ಷೆಗೂ ಮೀರಿ ಪ್ರವಾಸಿಗರು ಬರುತ್ತಿದ್ದು, ಅವರ ಆಗು-ಹೋಗುಗಳಿಗೆ ಸ್ಪಂದನೆ ಸಿಗುತ್ತಿಲ್ಲ. ಆ ಅವಧಿಯಲ್ಲಿ ಕಾಸು ಕೊಟ್ಟರೂ ಸಹ ಪ್ರವಾಸಿಗರಿಗೆ ವಸತಿ ವ್ಯವಸ್ಥೆ ಆಗುತ್ತಿಲ್ಲ.
`ಬೇರೆ ಬೇರೆ ಜಿಲ್ಲೆಯ ಪುಣ್ಯ ಹಾಗೂ ಪ್ರವಾಸಿ ತಾಣಗಳಿಗೆ ಹೋಲಿಸಿದರೆ ದಕ್ಷಿಣ ಕಾಶಿ ಎನಿಸಿಕೊಂಡಿರುವ ಗೋಕರ್ಣ ಹಿಂದುಳಿದಿದೆ. ಉಡುಪಿ, ಧರ್ಮಸ್ಥಳ ಸೇರಿ ಇನ್ನಿತರ ಕಡೆಗಳ ಹಾಗೇ ಇಲ್ಲಿಯೂ ಬಡವರಿಗೆ ಅನುಕೂಲವಾಗುವ ರೀತಿ ಕಡಿಮೆ ದರದಲ್ಲಿ ವಸತಿ ಸೌಕರ್ಯ ಕಲ್ಪಿಸಬೇಕು. ಕುಡಿಯುವ ನೀರು, ಉತ್ತಮ ರಸ್ತೆ ಸಂಪರ್ಕ, ಅಗತ್ಯ ಶೌಚಾಲಯಗಳ ನಿರ್ಮಾಣದ ಜೊತೆ ಈ ನೆಲದ ಯಕ್ಷಗಾನ, ಭರತನಾಟ್ಯ ಹಾಗೂ ಇನ್ನಿತರ ಕಲಾ ಪ್ರಕಾರ ಉಳಿಸುವಿಕೆಗಾಗಿ ಉತ್ತಮ ಸಭಾ ಭವನವನ್ನು ನಿರ್ಮಿಸಬೇಕು’ ಎಂದು ಕರವೇ ಜನಧ್ವನಿಯ ಜಿಲ್ಲಾಧ್ಯಕ್ಷ ಉಮಾಕಾಂತ್ ಹೊಸಕಟ್ಟಾ ಅವರು ಆಗ್ರಹಿಸಿದ್ದಾರೆ.
ADVERTISEMENT
ಉಮಾಕಾಂತ್ ಹೊಸಕಟ್ಟಾ
ಇದರೊಂದಿಗೆ `ಪ್ರಾಮಾಣಿಕ ಸೇವೆ ನೀಡುವ ಟಾಕ್ಸಿ ಹಾಗೂ ರಿಕ್ಷಾ ಚಾಲಕರಿಗೆ ಅನುಕೂಲ ಆಗುವ ಹಾಗೇ ಯೋಜನೆ ರೂಪಿಸಬೇಕು. ಪ್ರವಾಸೋದ್ಯಮ ಹೆಸರಿನಲ್ಲಿ ಹಣ ವಸೂಲಿ ಮಾಡುವ ಬದಲು ಅಭಿವೃದ್ಧಿಗೆ ಹಣ ವಿನಿಯೋಗವಾಗಬೇಕು. ಗಣ್ಯರು ಬಂದಾಗ ಅವರಿಗೆ ಭದ್ರತೆ ಕೊಡುವ ಬದಲು ಪೊಲೀಸರು ಜನ ಸಾಮಾನ್ಯರ ರಕ್ಷಣೆಗೆ ಒತ್ತು ಕೊಡಬೇಕು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಆಸಕ್ತಿವಹಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ. `ಗೋಕರ್ಣದ ಅಭಿವೃದ್ಧಿ ಬಗ್ಗೆ ಗಮನಹರಿಸದೇ ಉದ್ದರೆ ಹೋರಾಟ ಅನಿವಾರ್ಯ’ ಎಂದವರು ಎಚ್ಚರಿಸಿದ್ದಾರೆ.