ಮಹಿಳೆಯರಿಗೆ ಒಂದೇ ಸೂರಿನ ಅಡಿ ಅನೇಕ ಬಗೆಯ ನೆರವು ನೀಡುವುದಕ್ಕಾಗಿ ಶಿರಸಿಯಲ್ಲಿ `ಸಖಿ ಕೇಂದ್ರ’ ತೆರೆಯಲು ಸರ್ಕಾರ ಸಮ್ಮತಿ ಸೂಚಿಸಿದೆ. ಈ ಸಖಿ ಕೇಂದ್ರದಲ್ಲಿ ಕೆಲಸ ಮಾಡುವುದಕ್ಕಾಗಿ ಅರ್ಹರ ಹುಡುಕಾಟವನ್ನು ನಡೆದಿದೆ.
ಶಿರಸಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸಖಿ ಕೇಂದ್ರ ಶುರುವಾಗಲಿದೆ. ಕಾನೂನು ನೆರವು, ವೈದ್ಯಕೀಯ ನೆರವು, ವಿವಿಧ ವಿಷಯಗಳ ಕುರಿತು ಅರಿವು ಸೇರಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಾಗಿ ಈ ಸಖಿ ಕೇಂದ್ರವನ್ನು ತೆರೆಯಲಾಗುತ್ತಿದೆ. ಸದ್ಯ ಕಾರವಾರದಲ್ಲಿ ಸಖಿ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಶಿರಸಿಯಲ್ಲಿ ಇನ್ನೊಂದು ಕೇಂದ್ರ ತೆರೆಯುವ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿದೆ. ಈ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಲು ಕೇಂದ್ರ ಆಡಳಿತಾಧಿಕಾರಿ, ಆಪ್ತ ಸಮಾಲೋಚಕರು, ಸಮಾಜ ಸೇವಾ ಕಾರ್ಯಕರ್ತರು ಹಾಗೂ ಸ್ವಚ್ಚತಾಕಾರರು ಹಾಗೂ ಭದ್ರತಾ ಸಿಬ್ಬಂದಿ ಅಗತ್ಯವಿದೆ. ಆಡಳಿತಾಧಿಕಾರಿಗಳಿಗೆ ಮಾಸಿಕ 40 ಸಾವಿರ ರೂ, ಆಪ್ತ ಸಮಾಲೋಚಕರಿಗೆ 30 ಸಾವಿರ ರೂ, ಸಮಾಜ ಸೇವಾ ಕಾರ್ಯಕರ್ತರಿಗೆ 25 ಸಾವಿರ ರೂ ವೇತನ ನಿಗದಿ ಮಾಡಲಾಗಿದೆ. ಸ್ವಚ್ಚತಾಕಾರರು ಹಾಗೂ ಭದ್ರತಾ ಸಿಬ್ಬಂದಿಗೆ ಮಾಸಿಕ 15 ಸಾವಿರ ರೂ ವೇತನ ಸಿಗಲಿದೆ.
ಈ ಎಲ್ಲಾ ಹುದ್ದೆಗಳನ್ನು ನೇರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ಒಂದು ವರ್ಷದ ತಾತ್ಕಾಲಿಕ ಅವಧಿಗೆ ಈ ನೇಮಕಾತಿ ನಡೆಯಲಿದ್ದು, ನೌಕರರ ಕಾರ್ಯನಿರ್ವಹಣೆ ಸರಿಯಾಗಿದ್ದರೆ ಮಾತ್ರ ಮುಂದಿನ ಅವಧಿಗೆ ಸೇವೆ ಮುಂದುವರೆಸಲಾಗುತ್ತದೆ. 18ರಿಂದ 45 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದಾಗಿದ್ದು, ಆಡಳಿತಾಧಿಕಾರಿ ಹುದ್ದೆಗೆ ಕಾನೂನು, ಮಾನವಶಾಸ್ತ, ಅಥವಾ ಮನೋವೈದ್ಯ ಶಾಸ್ತ ಅಧ್ಯಯನ ಮಾಡಿರುವವು ಅರ್ಜಿ ಸಲ್ಲಿಸಲು ಅರ್ಹರು. ಕನಿಷ್ಟ 5 ವರ್ಷ ಸೇವಾ ಅನುಭವವನ್ನು ಪರಿಗಣಿಸಲಾಗುತ್ತದೆ. ಆಪ್ತ ಸಮಾಲೋಚಕರ ಹುದ್ದೆಗೆ ಸಹ ಎಂ ಎಸ್ ಡಬ್ಲು ಹಾಗೂ ಇದೇ ವಿಷಯದಲ್ಲಿ 3 ವರ್ಷದ ಅನುಭವ ಇದ್ದವರ ಹುಡುಕಾಟ ನಡೆದಿದೆ. ಸಮಾಜ ಸೇವಾ ಕಾರ್ಯಕರ್ತರು ಪದವಿಧರರಾಗಬೇಕಿದ್ದು, 2 ವರ್ಷದ ಅನುಭವವ ಕಡ್ಡಾಯ. ಸ್ವಚ್ಚತಾಕಾರರು ಹಾಗೂ ಭದ್ರತಾ ಸಿಬ್ಬಂದಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸಾಗಿರಬೇಕು ಎಂಬ ನಿಯಮವಿದೆ.
ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆ ಬರುವ ಹಾಗೂ ವ್ಯವಹಾರ ಪರಿಜ್ಞಾನ ಹೊಂದಿರುವವರಿಗೆ ಉದ್ಯೋಗದಲ್ಲಿ ಆದ್ಯತೆ ಕೊಡಲಾಗುತ್ತದೆ. ಅರ್ಜಿ ಸಲ್ಲಿಸುವ ಮಹಿಳಾ ಅಭ್ಯರ್ಥಿ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು, ಅರ್ಜಿ ಜೊತೆ ಅಗತ್ಯ ದಾಖಲೆ ಸಲ್ಲಿಸುವುದು ಕಡ್ಡಾಯ. 24*7 ಮಾದರಿಯಲ್ಲಿ ಸಖಿ ಕೇಂದ್ರ ಕಾರ್ಯ ನಿರ್ವಹಿಸಲಿದ್ದು, ಪಾಳಿ ಪ್ರಕಾರ ಕೆಲಸ ಮಾಡಲು ಸಿಬ್ಬಂದಿ ಸಿದ್ಧವಿರಬೇಕು. ಪದವಿಯಲ್ಲಿ ಶೇ 30, ಕಂಪ್ಯುಟರ್ ಪರೀಕ್ಷೆಯಲ್ಲಿ ಶೇ 20 ಹಾಗೂ ಸಂದರ್ಶನದ ಮೂಲಕ ಶೇ 50ರಷ್ಟು ಅಂಕದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಜನವರಿ 27ರಿಂದ ಫೆಬ್ರವರಿ 26ರವರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅರ್ಜಿ ನಮೂನೆ ಸಿಗಲಿದೆ. ಉತ್ತರ ಕನ್ನಡ ಜಿಲ್ಲಾಧಿಕಾರಿ, ಪೊಲೀಸ್ ಅಧೀಕ್ಷಕರು, ಜಿಲ್ಲಾ ಪಂಚಾಯತ ಮುಖ್ಯಾಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ನೇತ್ರತ್ವದಲ್ಲಿ ಸಮಿತಿ ರಚನೆಯಾಗಿದ್ದು, ಅದೇ ಸಮಿತಿ ಅಭ್ಯರ್ಥಿಗಳ ಆಯ್ಕೆ ಮಾಡಲಿದೆ. ಕೆಲಸದ ಅನುಭವ ಹಾಗೂ ಸೇವಾ ಮನೋಭಾವಹೊಂದಿರುವವರಿಗೆ ಮೊದಲ ಆದ್ಯತೆ ಆಧಾರದಲ್ಲಿ ಕೆಲಸ ಕೊಡಲಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕೇ? ಹಾಗಾದರೆ, ಇಲ್ಲಿ ಫೋನ್ ಮಾಡಿ: 08382-200727 ಅಥವಾ 8618006406