ಕುಮಟಾದ ಸುಲಭ ಸೌಹಾರ್ದ ಸಹಕಾರಿ ಸಂಘದಲ್ಲಿ ಕಳ್ಳತನ ನಡೆದಿದೆ.
ಕುಮಟಾದ ಉಪ್ಪಾರಕೇರಿಯಲ್ಲಿ ಸುಲಭ ಸೌಹಾರ್ದ ಸಹಕಾರಿ ಸಂಘ ಕಾರ್ಯನಿರ್ವಹಿಸುತ್ತಿದೆ. ಈ ಶಾಖೆಗೆ ಅಘನಾಶಿನಿ ಬಳಿಯ ದಿವಾಕರ ನಾಗೇಶ ನಾಯ್ಕ ಅವರು ಅಧ್ಯಕ್ಷರಾಗಿದ್ದಾರೆ. ಜನವರಿ ೨೪ರಂದು ಸೊಸೈಟಿಯಲ್ಲಿ ಎಲ್ಲಾ ವ್ಯವಹಾರ ಸರಿಯಾಗಿಯೇ ನಡೆದಿದ್ದು, ಜನವರಿ ೨೬ರ ಅವಧಿಯಲ್ಲಿ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಸೊಸೈಟಿಯ ಬಗ್ಗೆ ಎಲ್ಲಾ ವಿಷಯ ಅರಿತ ಕಳ್ಳರು ಕನ್ನ ಹಾಕಿರುವ ಸಾಧ್ಯತೆಗಳಿವೆ.
ಸೊಸೈಟಿಯ ಬಾಗಿಲು ಮುರಿದ ಕಳ್ಳರು ಒಳಗೆ ಎಲ್ಲಾ ಕಡೆ ಜಾಲಾಡಿದ್ದಾರೆ. ಆಗ ಅವರಿಗೆ ಕೆಡಿಸಿಸಿ ಬ್ಯಾಂಕಿನ ಮೂರು ಚೆಕ್ಕು ಕಾಣಿಸಿದೆ. ಅದನ್ನು ಜೇಬಿಗಿಳಿಸಿದ ನಂತರ ಎಚ್ ಡಿ ಎಫ್ ಸಿ ಬ್ಯಾಂಕಿನ ಎರಡು ಚೆಕ್ಕು ಸಿಕ್ಕಿದೆ. ಅದನ್ನು ಕದ್ದು ಹೊರಗೆ ಹೋಗುವಾಗ ಸಿಸಿ ಕ್ಯಾಮರಾ ಅಳವಡಿಸಿರುವುದು ಗೊತ್ತಾಗಿದ್ದು, ಸಾಕ್ಷಿ ನಾಶಕ್ಕಾಗಿ ಅವರು ಕ್ಯಾಮರಾಗೆ ಅಳವಡಿಸಿದ್ದ ಡಿವಿಆರ್’ನ್ನು ದೋಚಿದ್ದಾರೆ. ಸೊಸೈಟಿಯಿಂದ ಹೊರಬಿದ್ದ ಕಳ್ಳರಿಗೆ ಅಲ್ಲಿ ನಿಲ್ಲಿಸಿದ್ದ ಸ್ಕೂಟಿಯೊಂದು ಕಾಣಿಸಿದ್ದು, ಅದನ್ನು ಕದ್ದಿದ್ದಾರೆ.
ಕೆಡಿಸಿಸಿ ಹಾಗೂ ಎಚ್ ಡಿ ಎಫ್ ಸಿ ಬ್ಯಾಂಕಿನ ಚೆಕ್ ಜೊತೆ ೪೦ ಸಾವಿರ ರೂ ಮೌಲ್ಯದ ಸ್ಕೂಟಿಯನ್ನು ಕದ್ದವರಿಗಾಗಿ ಸೊಸೈಟಿಯವರು ತಲೆಕೆಡಿಸಿಕೊಂಡಿದ್ದಾರೆ. ೫ ಸಾವಿರ ರೂ ಮೌಲ್ಯದ ಸಿಸಿ ಕ್ಯಾಮರಾದ ಡಿವಿಆರ್ ಪತ್ತೆ ಆದಲ್ಲಿ ಕಳ್ಳರ ಸುಳಿವು ಸಿಗುವ ಸಾಧ್ಯತೆಯಿರುವುದರಿಂದ ಕಳ್ಳತನದ ಬಗ್ಗೆ ದಿವಾಕರ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದಾರೆ. ಕುಮಟಾ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಳ್ಳರ ಹುಡುಕಾಟ ಶುರು ಮಾಡಿದ್ದಾರೆ.