ತಮ್ಮ ಚಾಣಾಕ್ಷತನದಿಂದ ಅನೇಕ ಅಪರಾಧ ಪ್ರಕರಣಗಳನ್ನು ಭೇದಿಸಿ ಪೊಲೀಸ್ ಇಲಾಖೆಗೆ ನೆರವಾಗಿದ್ದ ಪಿಸೈ ಸುನೀಲ್ ಬಂಡಿವಡ್ಡರ್ ಅವರನ್ನು ಅದೇ ಪೊಲೀಸ್ ಇಲಾಖೆ ಸೇವೆಯಿಂದ ಅಮಾನತು ಮಾಡಿದೆ. ಕಾರವಾರ ಕದ್ರಾದ ರಿಶೇಲ್ ಡಿಕೋಸ್ತಾ ಆತ್ಮಹತ್ಯೆ ಹಾಗೂ ಚಿರಾಗ್ ಕೋಠಾರಕರ್ ಪರಾರಿ ಪರಿಣಾಮ ಪಿಸೈ ಸುನೀಲ ಬಂಡಿವಡ್ಡರ್ ಅವರು ಶಿಕ್ಷೆಗೆ ಗುರಿಯಾಗಿದ್ದಾರೆ. ಈ ಪ್ರಕರಣದಲ್ಲಿ ಆರೋಪಿ ಸಿಗದಿದ್ದರೂ ಆರೋಪಿಗೆ ಆಶ್ರಯ ನೀಡಿದ್ದ ಇಬ್ಬರನ್ನು ಸುನೀಲ ಬಂಡಿವಡ್ಡರ್ ಅವರು ಪತ್ತೆ ಹಚ್ಚಿದ್ದು, ಆ ಇಬ್ಬರಿಗೂ ಜಾಮೀನು ಸಿಕ್ಕ ಬೆನ್ನಲ್ಲೇ ಪ್ರಕರಣದ ತನಿಖೆಗೆ ಶ್ರಮಿಸಿದ್ದ ಸುನೀಲ ಬಂಡಿವಡ್ಡರ್ ಅವರು ಅಮಾನತಾಗಿದ್ದಾರೆ.
ಜಿಲ್ಲಾ ಪಂಚಾಯತ ಮಾಜಿ ಸದಸ್ಯೆ ಚೈತ್ರಾ ಕೋಠಾರಕರ್ ಅವರ ಪುತ್ರ ಚಿರಾಗ ಕೋಠಾರಕರ್ ಅವರು ಕದ್ರಾ ಗ್ರಾಮ ಪಂಚಾಯತ ಸದಸ್ಯೆ ರೀನಾ ಡಿಸೋಜಾ ಅವರ ಪುತ್ರಿ ರೀಶಲ್ ಡಿಕೋಸ್ತಾ ಅವರನ್ನು ಪ್ರೀತಿಸುತ್ತಿದ್ದರು. ಚಿರಾಗ ಕೋಠಾರಕರ್ ಅವರ ಕಾಟಕ್ಕೆ ರೀಶಲ್ ಡಿಕೋಸ್ತಾ ಆತ್ಮಹತ್ಯೆಗೆ ಶರಣಾದ ಆರೋಪವ್ಯಕ್ತವಾಗಿತ್ತು. ಅದಾದ ನಂತರ ಚಿರಾಗ ಕೋಠಾರಕರ್ ಅವರು ರೀಶಲ್ ಡಿಕೋಸ್ತಾ ಅವರನ್ನು ಅತ್ಯಾಚಾರ ಮಾಡಿದ ಬಗ್ಗೆಯೂ ಕುಟುಂಬದವರು ದೂರಿದ್ದರು. ಈ ನಡುವೆ ರಿಶೇಲ್ ಹಾಗೂ ಚಿರಾಗ ನಡುವೆ ನಡೆದ ವಾಟ್ಸಪ್ ಸಂಭಾಷಣೆ ಹೊರಬಿದ್ದಿತ್ತು. ರಿಶೇಲ್ ದೇಹದ ಮೇಲೆ ಅನುಮಾನಾಸ್ಪದ ಕುರುಹುಗಳು ಪತ್ತೆ ಆಗಿದ್ದವು. ಸಂತ್ರಸ್ತೆ ಹಾಗೂ ಆರೋಪಿ ಎರಡು ಕುಟುಂಬದವರು ರಾಜಕೀಯ ಪ್ರಭಾವಹೊಂದಿದ್ದರಿoದ ಈ ಪ್ರಕರಣ ಗಂಭೀರ ಸ್ವರೂಪಪಡೆದಿತ್ತು. ಸಂತ್ರಸ್ತೆ ಹಾಗೂ ಆರೋಪಿ ಎರಡು ಕಡೆಯವರು ತಮ್ಮ ಪ್ರಭಾವ ಬೀರಿ ತಮ್ಮ ಅನುಕೂಲಕ್ಕೆ ತಕ್ಕ ಹಾಗೇ ಪ್ರಕರಣ ಬದಲಿಸುವ ಕಸರತ್ತು ನಡೆಸಿದ್ದರು. ಈ ಪ್ರಯತ್ನ ಪೊಲೀಸರನ್ನು ಸಹ ಸಾಕಷ್ಟು ಪ್ರಮಾಣದಲ್ಲಿ ಒತ್ತಡಕ್ಕೆ ಸಿಲುಕಿಸಿತ್ತು. ರಾಜಕೀಯ ಪ್ರಭಾವಿಗಳ ಒತ್ತಡ ಹಾಗೂ ಸರ್ಕಾರಕ್ಕೆ ಬೇಕಾದ ಉತ್ತರದ ಪರಿಣಾಮ ಕದ್ರಾ ಪಿಸೈ ಸುನೀಲ ಬಂಡಿವಡ್ಡರ್ ಅವರನ್ನು ಅಮಾನತು ಮಾಡಲಾಯಿತು.
ಚಿತ್ತಾಕುಲದಲ್ಲಿ ಅಪರಿಚಿತ ಶವ ಸಿಕ್ಕಾಗ ಅದನ್ನು ಕೊಲೆ ಎಂದು ಅರಿತು ಕೊಲೆಗಾರರನ್ನು ಬಂಧಿಸುವಲ್ಲಿ ಸುನೀಲ ಬಂಡಿವಡ್ಡರ್ ಪ್ರಮುಖ ಪಾತ್ರ ನಿಭಾಯಿಸಿದ್ದರು. ಹಣಕೋಣದಲ್ಲಿ ಉದ್ಯಮಿ ಮೇಲೆ ಮಾರಕಾಸ್ತ ದಾಳಿ ನಡೆದಾಗಲೂ ಆ ಪ್ರಕರಣದಲ್ಲಿ ಸುನೀಲ ಬಂಡಿವಡ್ಡರ್ ಸಾಕಷ್ಟು ಪ್ರಮಾಣದಲ್ಲಿ ಶ್ರಮಿಸಿದ್ದರು. ಕುಮಟಾದ ದೇವಿಮನೆ ಘಟ್ಟದಲ್ಲಿ ನಡೆದ ಕೊಲೆ ಪ್ರಕರಣಗಳನ್ನು ಅತ್ಯಂತ ಚಾಣಾಕ್ಷತನದಿಂದ ಬೇದಿಸಿದ್ದರು. ಕಳ್ಳತನ ಪ್ರಕರಣಗಳನ್ನು ಜಾಲಾಡಿ ದಾಖಲೆ ಪ್ರಮಾಣದಲ್ಲಿ ಚಿನ್ನಾಭರಣಗಳನ್ನು ವಶಕ್ಕೆಪಡೆದಿದ್ದರು. ಈ ಎಲ್ಲಾ ಕೆಲಸಗಳ ಜೊತೆ ಅಕ್ರಮ ಸರಾಯಿ ಸಾಗಾಟ ಪ್ರಕರಣಗಳಿಗೆ ತಡೆ ಒಡ್ಡಿದ್ದರು. ಕಾನೂನುಬಾಹಿರ ಜೂಜಾಟ ನಡೆದ ಸುಳಿವು ಸಿಕ್ಕ ತಕ್ಷಣ ದಾಳಿ ನಡೆಸಿ ಅದನ್ನು ತಡೆಯುತ್ತಿದ್ದರು. ಕದ್ರಾ ಪೊಲೀಸ್ ಠಾಣೆಗೆ ಬಂದ ನಂತರ ಅಲ್ಲಿನ ವಾತಾವರಣದ ಮೇಲೆ ಹಿಡಿಯವಿಟ್ಟುಕೊಂಡಿದ್ದು, ಸಣ್ಣಪುಟ್ಟ ಅಪರಾಧಿಗಳಿಗೂ ನಡುಕ ಹುಟ್ಟಿಸಿದ್ದರು. 35 ವರ್ಷಗಳಿಂದ ಬಾಕಿಯಿದ್ದ ಪ್ರಕರಣವನ್ನು ಬೇದಿಸಿ ಮೇಲಧಿಕಾರಿಗಳು ಹುಬ್ಬೇರಿಸುವಂತೆ ಮಾಡಿದ್ದರು. ಈ ಎಲ್ಲಾ ಕೆಲಸದ ಜೊತೆ ಪಾಳುಬಿದ್ದ ಕೊಂಪೆಯ ಹಾಗಿದ್ದ ಕದ್ರಾ ಪೊಲೀಸ್ ಠಾಣೆಯ ನವೀಕರಣ ಕೆಲಸ ಮಾಡಿದ್ದರು.
ಸದ್ಯ ರೀಚಲ್ ಡಿಕೋಸ್ತಾ ಆತ್ಮಹತ್ಯೆ ಹಾಗೂ ಚಿರಾಗ ಕೋಠಾರಕರ್ ಪರಾರಿ ಪ್ರಕರಣದಲ್ಲಿಯೂ ಸುನೀಲ ಬಂಡಿವಡ್ಡರ್ ಅವರು ಸುಮ್ಮನಿರಲಿಲ್ಲ. ಅಮಾನತು ಆಗುವ ಮುನ್ನವೇ ಅವರು ಚಿರಾಗ ಕೋಠಾರಕರ್ ಅವರಿಗೆ ಆಶ್ರಯ ನೀಡಿದ್ದ ಇಬ್ಬರನ್ನು ಬಂಧಿಸಿದ್ದರು. ಆರೋಪಿ ಸಿಗದಿದ್ದರೂ ಸಹ ಆ ಆರೋಪಿಗೆ ಆಶ್ರಯ ನೀಡಿದ ಸುವರ್ಣ ಗಾಂವ್ಕರ್ ಹಾಗೂ ಸುನೀಲ ನಾಯರ್ ಎಂಬಾತರನ್ನು ವಶಕ್ಕೆಪಡೆದಿದ್ದರು. ಆ ಆರೋಪಿಗೆ ಆಶ್ರಯ ನೀಡಿದ ಇಬ್ಬರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದ್ದು, ಅದರ ಬೆನ್ನಲ್ಲೆ ಅದೇ ಪ್ರಕರಣದಲ್ಲಿ ಸುನೀಲ ಬಂಡಿವಡ್ಡರ್ ಅವರನ್ನು ಅಮಾನತು ಮಾಡಲಾಗಿದೆ.