ಯಲ್ಲಾಪುರದ ರಂಜಿತಾ ಕೊಲೆ ಹಾಗೂ ರಫೀಕ್ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ರಂಜಿತಾ ಜೊತೆ ಅನ್ಯೋನ್ಯವಾಗಿದ್ದ ರಫೀಕ್ ಅವರ ಕುಟುಂಬದವರ ಜೊತೆಯೂ ಉತ್ತಮ ಒಡನಾಟಹೊಂದಿದ್ದು, ಇದಕ್ಕೆ ಸಾಕ್ಷಿಯಾಗಿ ರಫೀಕ್ ಹಾಗೂ ರಂಜಿತಾ ಸಹೋದರ ಒಟ್ಟಿಗೆ ಪಾರ್ಟಿ ಮಾಡಿದ ಫೋಟೋ mobiletime.inಗೆ ಸಿಕ್ಕಿದೆ.
ರಫೀಕ್ ಹಾಗೂ ರಂಜಿತಾ ಬಾಲ್ಯದಿಂದಲೂ ಪರಿಚಯಸ್ಥರಾಗಿದ್ದರು. ಹೀಗಾಗಿ ರಂಜಿತಾ ಅವರ ಕುಟುಂಬದವರು ರಫೀಕ್ ಅವರನ್ನು ನಂಬಿದ್ದರು. ಸಂಘದ ಸಾಲ ವಸೂಲಿ ವಿಷಯವಾಗಿ ರಫೀಕ್ ಆಗಾಗ ರಂಜಿತಾ ಅವರ ಮನೆಗೆ ಬರುತ್ತಿದ್ದರು. ರಂಜೀತಾ ಅವರು ವಿವಾಹ ವಿಚ್ಚೇದಿತರಾಗಿರುವ ವಿಷಯ ಅರಿತು ರಫೀಕ್ ಆ ಕುಟುಂಬಕ್ಕೆ ಇನ್ನಷ್ಟು ಹತ್ತಿರವಾದರು. ಸಾಲ ವಸೂಲಾತಿ ವಿಷಯವಾಗಿ ಬಂದಾಗಲೇ ರಂಜಿತಾರ ಮೊಬೈಲ್ ಸಂಖ್ಯೆ ಪಡೆದಿದ್ದ ರಫೀಕ್ ಪದೇ ಪದೇ ಫೋನ್ ಮಾಡಲು ಶುರು ಮಾಡಿದ್ದರು. ರಂಜಿತಾ ಅವರ ಸಹೋದರ ವೀರಭದ್ರ ಬನ್ಸೊಡೆ ಅವರ ಸ್ನೇಹವನ್ನು ರಫೀಕ್ ಸಂಪಾದಿಸಿದ್ದರು. ಅದೇ ಸ್ನೇಹದ ಆಧಾರದಲ್ಲಿ ರಫೀಕ್ ಹಾಗೂ ವೀರಭದ್ರ ಅನೇಕ ಸಲ ಒಟ್ಟಿಗೆ ಊಟ ಮಾಡಿದ್ದರು. ಅದಾದ ನಂತರ ಸ್ನೇಹಿತನ ಸಹೋದರಿ ಮೇಲೆ ರಫೀಕ್ ಕಣ್ಣು ಹಾಕಿದ್ದು, ವೀರಭದ್ರ ಅವರ ನಂಬಿಕೆಯನ್ನು ರಫೀಕ್ ಹುಸಿಯಾಗಿಸಿದ್ದಾರೆ.
ರಫೀಕ್ ಅನೇಕ ಸಲ ರಂಜಿತಾ ಅವರ ಮನೆಗೆ ಭೇಟಿ ನೀಡಿ ಅಲ್ಲಿಯೂ ಊಟ ಮಾಡುತ್ತಿದ್ದರು. ಕಾಳಮ್ಮ ನಗರದ ಆಶ್ರಯ ಕಾಲೋನಿ ಸುತ್ತಲು ರಫೀಕ್ ಓಡಾಟ ಸಹಜವಾಗಿದ್ದು, ಯಾರೂ ಆ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಕಳೆದ ದೀಪಾವಳಿ ಹಬ್ಬದ ಅವಧಿಯಲ್ಲಿ ರಫೀಕ್, ರಚಿತಾ ಅವರ ಬೆನ್ನು ಬಿದ್ದು ಪೀಡಿಸಲು ಶುರು ಮಾಡಿದ್ದರು. ರಂಜಿತಾ ಅವರ ಸಹೋದರಿ ಅಕ್ಷತಾ ಅವರು ಸಹ ಇದನ್ನು ಖಂಡಿಸಿ ರಫೀಕ್’ಗೆ ಬೈದು ಬುದ್ದಿ ಹೇಳಿದ್ದರು. ಅದಾದ ನಂತರವೂ ಬೇರೆ ಬೇರೆ ಮೊಬೈಲ್ ಸಂಖ್ಯೆಯಿAದ ರಫೀಕ್ ಫೋನ್ ಮಾಡುತ್ತಿದ್ದು, ರಂಜಿತಾ ಅವರ ಸಹೋದರ ವೀರಭದ್ರ ಅವರು ಸಹ ರಫೀಕ್’ಗೆ ಬೈದಿದ್ದರು.
ಇದೇ ವಿಷಯವಾಗಿ ರಫೀಕ್ ಸಿಟ್ಟಾಗಿದ್ದು, ರಂಜಿತಾ ಅವರಲ್ಲಿ `ಮದುವೆ ಆಗೋಣ’ ಎಂಬ ಪ್ರಸ್ತಾಪ ಮಾಡಿದ್ದರು. ಅದನ್ನು ವಿರೋಧಿಸಿದ ಕಾರಣ ಶನಿವಾರ ಕಾಳಮ್ಮ ನಗರದ ಅಂಗಡಿಯ ಬಳಿ ಎರಡು ತಾಸು ಕಾದು ಕುಳಿತ ರಫೀಕ್, ರಂಜಿತಾ ಅವರ ಕುತ್ತಿಗೆಗೆ ಚಾಕು ಚುಚ್ಚಿದ್ದಾರೆ. ಅದಾದ ನಂತರ ರಫೀಕ್ ಸಹ ಕಾಡಿಗೆ ತೆರಳಿದ್ದು, ನಶೆಯ ಗುಂಗಿನಲ್ಲಿರುವಾಗಲೇ ನೇಣಿಗೆ ಶರಣಾಗಿದ್ದಾರೆ.