ನದಿ ಜೋಡಣೆ ಯೋಜನೆ ಪರ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ಮಾತನಾಡಿದಾಗ ಮೌನವಾಗಿದ್ದ ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರು ಶುಕ್ರವಾರ ಅದೇ ವಿಷಯವಾಗಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಕಿಡಿಕಾರಿದ್ದಾರೆ. `ನದಿ ಜೋಡಣೆ ವಿಚಾರವಾಗಿ ಜಿಲ್ಲೆಗೆ ಕಾಲಿಟ್ಟರೆ ಹುಷಾರ್!’ ಎಂದು ಭೀಮಣ್ಣ ನಾಯ್ಕ ಬಸವರಾಜ ಬೊಮ್ಮಾಯಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಕೆಲ ದಿನದ ಹಿಂದೆ ಕಾರವಾರಕ್ಕೆ ಭೇಟಿ ನೀಡಿದ್ದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು `ಯಾರು ಎಷ್ಟೇ ವಿರೋಧ ಮಾಡಿದರೂ ನದಿ ಜೋಡಣೆ ಯೋಜನೆ ಹಿಂಪಡೆಯುವುದಿಲ್ಲ’ ಎಂದು ಹೇಳಿಕೆ ನೀಡಿದ್ದರು. ಆ ವೇಳೆ ಶಿರಸಿ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ಡಿ ಕೆ ಶಿವಕುಮಾರ ಅವರ ಪಕ್ಕದಲ್ಲಿಯೇ ಇದ್ದರು. ಡಿ ಕೆ ಶಿವಕುಮಾರ ಅವರು ಆ ದಿನ ಸಾಕಷ್ಟು ಉಡಾಫೆಯಾಗಿ ಮಾತನಾಡಿದ್ದರು. ಆದರೆ, ಆ ವೇಳೆ ಭೀಮಣ್ಣ ನಾಯ್ಕ ಅವರು ಡಿ ಕೆ ಶಿವಕುಮಾರ ಅವರ ಮಾತಿಗೆ ಕಿಂಚಿತ್ತು ವಿರೋಧವ್ಯಕ್ತಪಡಿಸಿರಲಿಲ್ಲ.
ಇದನ್ನು ಓದಿ: ನದಿ ಜೋಡಣೆ ಗ್ಯಾರಂಟಿ: ಉಪಮುಖ್ಯಮಂತ್ರಿಯಿoದ ಉಡಾಫೆ ಉತ್ತರ!
ಆದರೆ, ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಭೀಮಣ್ಣ ನಾಯ್ಕ ಅವರು ನದಿ ಜೋಡಣೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಆಯೋಜಿಸಿರುವ ಜನ ಸಮಾವೇಶಕ್ಕೆ ಬೆಂಬಲ ನೀಡುವುದಾಗಿ ಅವರು ಘೋಷಿಸಿದ್ದಾರೆ. `ನದಿ ಜೋಡಣೆ ವಿಷಯದ ವಾಸ್ತವ ಭೀಕರವಾಗಿದೆ. ಗದಗ ಹಾವೇರಿ ಜನರ ದಾರಿ ತಪ್ಪಿಸಲು ಈ ಯೋಜನೆ ಮುನ್ನಲೆಗೆ ತರಲಾಗುತ್ತಿದ್ದು, ಪರಿಸರಕ್ಕೆ ಮಾರಕವಾದ ಯೋಜನೆ’ ಎಂದು ಭೀಮಣ್ಣ ನಾಯ್ಕ ಅವರು ಹೇಳಿದ್ದಾರೆ.
`ಪಶ್ಚಿಮ ಘಟ್ಟದ ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿ ಬೇಡ್ತಿ ನದಿ ಹರಿಯುತ್ತಿದೆ. ಈ ಯೋಜನೆಗಾಗಿ ಸಾವಿರಾರು ಎಕರೆ ಅರಣ್ಯ ನಾಶವಾಗಲಿದ್ದು, ಈಗಾಗಲೇ ಗುಡ್ಡ ಕುಸಿತವಾಗುತ್ತಿರುವ ಪ್ರದೇಶದಲ್ಲಿ ಇಂಥ ಯೋಜನೆ ಅಪಾಯಕಾರಿ. ಪರಿಸರಕ್ಕೆ ಹಾನಿಯಾಗದಂತೆ ಯೋಜನೆ ರೂಪಿಸುತ್ತೇವೆ ಎಂಬುದು ಅಸಾಧ್ಯ’ ಎಂದು ಭೀಮಣ್ಣ ನಾಯ್ಕ ಅವರು ಹೇಳಿದ್ದಾರೆ. `ನದಿ ನೀರು ಸಮುದ್ರಕ್ಕೆ ಸೇರುವುದು ವ್ಯರ್ಥವಲ್ಲ. ಸಿಹಿ ನೀರು ಸಮುದ್ರಕ್ಕೆ ಸೇರಿದಾಗ ಮಾತ್ರ ಅಲ್ಲಿನ ಮೀನುಗಾರಿಕೆ ಮತ್ತು ಜಲಚರಗಳು ಬದುಕಲು ಸಾಧ್ಯ’ ಎಂದು ವೈಜ್ಞಾನಿಕ ಮಾತುಗಳನ್ನು ಆಡಿದ್ದಾರೆ.
ಆದರೆ, `ನದಿ ನೀರು ವ್ಯರ್ಥವಾಗಲು ಬಿಡುವುದಿಲ್ಲ’ ಎಂದು ಡಿ ಕೆ ಶಿವಕುಮಾರ ಅವರು ಹೇಳಿದಾಗ ಭೀಮಣ್ಣ ನಾಯ್ಕ ಅವರು ಮಾತನಾಡಿರಲಿಲ್ಲ. `ಪರಿಸರ ನಾಶ ಆಗದ ಹಾಗೇ ಯೋಜನೆ ರೂಪಿಸುತ್ತೇವೆ’ ಎಂದು ಡಿ ಕೆ ಶಿವಕುಮಾರ ಅವರು ಹೇಳಿದಾಗ ಸಹ ಭೀಮಣ್ಣ ನಾಯ್ಕ ಅವರು ಪಕ್ಕದಲ್ಲಿಯೇ ಇದ್ದರೂ ಅದಕ್ಕೆ ಚಕಾರ ಎತ್ತಿರಲಿಲ್ಲ. ಹೀಗಾಗಿ ಸದ್ಯ ಭೀಮಣ್ಣ ನಾಯ್ಕ ಅವರ ನಿಲುವಿನ ಬಗ್ಗೆ ಪ್ರಶ್ನೆ ಎದ್ದಿದ್ದು, ಆ ಬಗ್ಗೆ ಚರ್ಚೆ ಶುರುವಾಗಿದೆ.