`ಅಘನಾಶಿನಿ ಉಳಿಸಿ’ ಎಂಬ ಹೋರಾಟ ದಿನದಿಂದ ದಿನಕ್ಕೆ ಸ್ವರೂಪ ಬದಲಿಸುತ್ತಿದ್ದು, ಅವೈಜ್ಞಾನಿಕ ಯೋಜನೆ ವಿರುದ್ಧ ಸಿದ್ದಾಪುರದ ಜನರು ರೊಚ್ಚಿಗೆದ್ದಿದ್ದಾರೆ. ಅಘನಾಶಿನಿ ನದಿಗೆ ಆಣೆಕಟ್ಟು ಕಟ್ಟಲು ಉದ್ದೇಶಿಸಿದ ಗೆಜಕಟ್ಟಾ ಭಾಗಕ್ಕೆ ಭೇಟಿ ನೀಡಿದ ಬಾಳೆಕೊಪ್ಪದ ಜನ ಅಲ್ಲಿನ ನದಿಗೆ ಇಳಿದು ಧರಣಿ ನಡೆಸಿದ್ದಾರೆ.
`ಚಳಿಗಾಲದ ನಂತರ ನೀರು ಹರಿಯುವ ಪ್ರಮಾಣ ಕಡಿಮೆ ಆಗಲಿದೆ. ದಟ್ಟವಾದ ಕಾಡನ್ನು ಯೋಜನೆಗಾಗಿ ನಾಶ ಮಾಡಲಾಗುತ್ತದೆ. ಈ ಯೋಜನೆಯಿಂದ ವನ್ಯಜೀವಿ ಸಂಕಲಕ್ಕೆ ಸಹ ಸಮಸ್ಯೆ ಆಗಲಿದೆ’ ಎಂದು ಅಲ್ಲಿದ್ದವರು ವಿವರಿಸಿದರು. `ಅವೈಜ್ಞಾನಿಕ ಮತ್ತು ಪರಿಸರ ವಿರೋಧಿ ಅಘನಾಶಿನಿ ನದಿ ಜೋಡಣೆಯ ಯೋಜನೆಯನ್ನು ಸ್ಥಗಿತಗೊಳಿಸಬೇಕು’ ಎಂದು ಈ ವೇಳೆ ಹೋರಾಟಗಾರ ರವೀಂದ್ರ ನಾಯ್ಕ ಆಗ್ರಹಿಸಿದರು.
ಹೋರಾಟಗಾರರು ನದಿಯ ಅಕ್ಕಪಕ್ಕದ ಮಣ್ಣಿನ ಗುಣವವನ್ನು ಪರೀಕ್ಷಿಸಿದರು. `ಯೋಜನೆಯಲ್ಲಿ ಪ್ರಸ್ತಾಪಿಸಿದಂತೆ ಕೇವಲ 1.2 ಲಕ್ಷ ಗಿಡ ಮಾತ್ರ ನಾಶವಾಗುವುದಿಲ್ಲ. ಇನ್ನಷ್ಟು ಕಾಡು ನಶಿಸಲಿದೆ’ ಎಂದವರು ವಿವರಿಸಿದರು. `ನದಿ ಜೋಡಣೆಯಿಂದ ನದಿಯ ಪಾವಿತ್ರತೆ ಮತ್ತು ಜನ ಸಾಮಾನ್ಯರ ಜೀವನಕ್ಕೆ ಆತಂಕ ಎದುರಾಗಿದೆ’ ಎಂದು ಸುರೇಶ ಹೆಗಡೆ ಹಸಗೆ ಕಳವಳವ್ಯಕ್ತಪಡಿಸಿದರು.
`ಜನಾಭಿಪ್ರಾಯ ಸಂಗ್ರಹಿಸದೇ ಯೋಜನೆ ರೂಪಿಸಲಾಗಿದೆ’ ಎಂದು ನಾಗಪತಿ ಗೌಡ ಹುಕ್ಕಳ್ಳಿ ಅಸಮಧಾನವ್ಯಕ್ತಪಡಿಸಿದರು. ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಹರಿ ನಾಯ್ಕ ಓಂಕಾರ, ಸೀತಾರಾಮ ಗೌಡ ಹುಕ್ಕಳ್ಳಿ, ನಾಗರಾಜ ಹಲಸಿನಮನೆ ಅವರು ತಮ್ಮ ಅಭಿಪ್ರಾಯಹೊರಹಾಕಿದರು. ಕೆ ಟಿ ನಾಯ್ಕ , ಎಮ್ ಪಿ ಗೌಡ, ರಾಜೇಶ್ ಭಟ್ಟ ಮಕ್ಕಿಗದ್ದೆ, ರಫೀಕ ಗೌಡಳ್ಳಿ, ಅಶೋಕ ನಾಯ್ಕ ಇಟಗಿ, ರಮೇಶ್ ನಾಯ್ಕ, ಮಧುಕೇಶ್ವರ, ವಿನಯ ನಾಯ್ಕ, ಮಾಬ್ಲೇಶ್ವರ ಕೃಷ್ಣಪ್ಪ ನಾಯ್ಕ, ವಿನಯ ತಿಮ್ಮಪ್ಪ ನಾಯ್ಕ, ಮಾದೇವ ನಾಯ್ಕ, ಭದ್ರ ಗೌಡ, ವಿನೋದ ಗೌಡ ಹುಕ್ಕಳ್ಳಿ, ಮಂಜುನಾಥ ನಾಯ್ಕ ಹುತ್ಗಾರ, ಮಾಬ್ಲೇಶ್ವರ ಗೌಡ ಸುಳಗಾರ, ನಾರಾಯಣ ಗೌಡ, ಈಶ್ವರ ನಾಯ್ಕ, ರಾಜು ನಾಯ್ಕ, ಶಿವಾನಂದ, ದಿವಾಕರ್ ಬಾಳೆಜಡ್ಡಿ ಅವರು ಯೋಜನೆ ಬಗ್ಗೆ ಆತಂಕವ್ಯಕ್ತಪಡಿಸಿದರು.
ಅಘನಾಶಿನಿ ನದಿ ಜೋಡಣೆ ವಿರೋಧವಾಗಿ ಜಾಗೃತೆ ಮೂಡಿಸುವ ಉದ್ದೇಶದಿಂದ ಫೆಬ್ರವರಿ 2ರಂದು ಗೋಳಿಮಕ್ಕಿಯಲ್ಲಿ ಸಭೆ ನಡೆಸಲು ಎಲ್ಲರೂ ಸೇರಿ ನಿರ್ಧರಿಸಿದರು. ಗೋಳಿಮಕ್ಕಿಯಿಂದ ಗೆಜಕಟ್ಟಾವರೆಗೆ ಪಾದಯಾತ್ರೆ ನಡೆಸಲು ನಿರ್ಣಯ ಮಾಡಿದರು.