ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಅವರು ಅಧ್ಯಕ್ಷರಾಗಿರುವ ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯನ್ನು ಶಾಸಕ ಶಿವರಾಮ ಹೆಬ್ಬಾರ್ ಅವರು ದತ್ತು ತೆಗೆದುಕೊಳ್ಳುವ ಅವಕಾಶ ತಪ್ಪಿಸಿಕೊಂಡಿರುವ ಬಗ್ಗೆ ಪ್ರಕಟಣೆಯೊಂದು ಹೊರಬಿದ್ದಿದೆ. ಬಿಜೆಪಿ ಯಲ್ಲಾಪುರ ಘಟಕದವರು ಇಂಥಹದೊoದು ಪ್ರಕಟಣೆ ನೀಡಿದ್ದು, ಬಿಜೆಪಿ ಮಾಧ್ಯಮ ಸಂಚಾಲಕ ಕೆ ಟಿ ಹೆಗಡೆ ಅವರು ಆ ಪ್ರಕಟಣೆಯನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ನದಿ ತಿರುವು ವಿಷಯವಾಗಿ ಈಚೆಗೆ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಹಾಗೂ ಯಲ್ಲಾಪುರ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಜಂಟಿ ಸುದ್ದಿಗೋಷ್ಠಿ ನಡೆಸಿ ಶಿವರಾಮ ಹೆಬ್ಬಾರ್ ಅವರ ಉದ್ದಿಮೆಯ ಕುರಿತು ಮಾತನಾಡಿದ್ದರು. `ಹಾವೇರಿ ಜಿಲ್ಲೆಯಲ್ಲಿ ಶಿವರಾಮ ಹೆಬ್ಬಾರ್ ಅವರು ಉದ್ದಿಮೆಯಿರುವ ಕಾರಣ ಶಾಸಕರಿಗೆ ನೆರೆ ಜಿಲ್ಲೆಯ ಮೇಲೆ ಹೆಚ್ಚಿನ ವ್ಯಾಮೋಹ’ ಎಂಬರ್ಥದಲ್ಲಿ ಮಾತನಾಡಿದ್ದರು. ಇದಕ್ಕೆ ಪ್ರತಿಯಾಗಿ ಶಿವರಾಮ ಹೆಬ್ಬಾರ್ ಅವರ ಬೆಂಬಲಿಗರು ಪ್ರಸಾದ ಹೆಗಡೆ ಒಡೆತನದ ನಿಸರ್ಗಮನೆ ಹಾಗೂ ಹರಿಪ್ರಕಾಶ ಅವರ ಒಡೆತನದ ಸಂಸ್ಥೆಯ ವ್ಯವಹಾರಗಳ ಬಗ್ಗೆ ಹೇಳಿಕೆ ನೀಡಿದ್ದರು. ಅದಕ್ಕೆ ಪ್ರತಿಯಾಗಿ ಬುಧವಾರ ಬಿಜೆಪಿ ಘಟಕದ ಹೆಸರಿನಲ್ಲಿ ಮತ್ತೊಂದು ಹೇಳಿಕೆ ಹರಿದಾಡುತ್ತಿದೆ. `ಬಿಜೆಪಿ ಹಾಗೂ ಮಾಧ್ಯಮ’ ಎಂಬ ವಾಟ್ಸಪ್ ಗುಂಪಿನಲ್ಲಿ ಕೆ ಟಿ ಹೆಗಡೆ ಅವರು ಈ ಪ್ರಕಟಣೆಯನ್ನು ಮೊದಲು ಹಂಚಿಕೊoಡಿದ್ದಾರೆ. ಅದಾದ ನಂತರ ಅದೇ ಪ್ರಕಟಣೆ ವಿವಿಧ ಕಡೆ ಹರಿದಾಡಿದೆ. ಪ್ರಕಟಣೆಯ ಕೊನೆಯಲ್ಲಿ ಬಿಜೆಪಿ ಪ್ರಮುಖರಾದ ರವಿ ಕೈಟ್ಕರ್, ನಟರಾಜ ಗೌಡ, ಜಿ ಎನ್ ಗಾಂವ್ಕರ್, ಉಮೇಶ ಭಾಗ್ವತ, ರಾಘವೇಂದ್ರ ಭಟ್ಟ ಹಾಸಣಗಿ ಹಾಗೂ ಕೆ ಟಿ ಹೆಗಡೆ ಅವರ ಹೆಸರಿದೆ. ಆದರೆ, ಬಿಜೆಪಿ ಲೇಟರ್ ಹೆಡ್ ಮೂಲಕ ಆ ಪ್ರಕಟಣೆ ಬಂದಿದ್ದರೂ ಯಾರೂ ಅದಕ್ಕೆ ಸಹಿ ಮಾಡಿಲ್ಲ.
`ಮಾಜಿ ಶಾಸಕ ಉಮೇಶ ಭಟ್ಟ ಅವರು ಕಟ್ಟಿದ ಶಿಕ್ಷಣ ಸಂಸ್ಥೆ ಕಾರಣಾಂತರದಿoದ ಸಮಸ್ಯೆಯ ಸುಳಿಗೆ ಸಿಲುಕಿತ್ತು. ಅವರ ಕುಟುಂಬದವರ ಆಶಯದಂತೆ ಹರಿಪ್ರಕಾಶ ಕೋಣೆಮನೆ ಅವರು ಸಂಸ್ಥೆಯ ಜವಾಬ್ದಾರಿವಹಿಸಿಕೊಂಡಿದ್ದು, ಶಕ್ತಿ ಮೀರಿ ಸಂಸ್ಥೆ ಮುನ್ನಡೆಸಿದ್ದಾರೆ. ಡೊಮಗೇರಿಯಲ್ಲಿ ಬಡ ಗೌಳಿ ಮಹಿಳೆ ಸಾವನಪ್ಪಿದಾಗ ಆಕೆಯ ಹಸುಗೂಸಿಗೆ ವಿಶ್ವದರ್ಶನದಲ್ಲಿ ಉಚಿತ ಶಿಕ್ಷಣದ ಘೋಷಣೆ ಮಾಡಲಾಗಿದೆ. ದಲಿತ ಹೆಣ್ಣು ಮಗಳ ಹತ್ಯೆ ಆದಾಗ ಅನಾಥ ಮಗುವಿಗೆ ಶಿಕ್ಷಣ ನೀಡುವ ಬಗ್ಗೆ ಘೋಷಣೆ ಮಾಡಲಾಗಿದೆ. ನೂರಾರು ಬಡ ಮಧ್ಯಮ ವರ್ಗದವರಿಗೆ ಉಚಿತ ಶಿಕ್ಷಣ ಕೊಡಲಾಗುತ್ತಿದೆ. ಹೀಗಿರುವಾಗ ಇದು ವ್ಯಾಪಾರಿಕರಣವಾ ಅಥವಾ ಉದಾರಿಕರಣವಾ? ಎಂದು ಬಲ್ಲವರಿಗೆ ಗೊತ್ತಿದೆ. ಬೆವರು ಸುರಿಸಿ ಸಾವಿರಾರು ಕೋಟಿ ಸಂಪಾದನೆ ಮಾಡಿದ ಮಾಜಿ ಶಾಸಕ ಶಿವರಾಮ ಹೆಬ್ಬಾರ್ ಅವರು ಮತದಾರರಿಗೆ ಒಳ್ಳೆಯ ಮಾಡುವ ಕನಸು ಹೊಂದಿದ್ದರೆ ವಿಶ್ವದರ್ಶನ ಸಂಸ್ಥೆಯನ್ನೇ ದತ್ತುಪಡೆಯಬಹುದಾಗಿತ್ತು. ಶಿಕ್ಷಣ ಸಂಸ್ಥೆ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಸಹಾಯ ಮಾಡಬಹುದಾಗಿತ್ತು. ಆದರೆ, ಮತದಾರರ ಮಕ್ಕಳ ಭವಿಷ್ಯದ ಬದಲು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಶಿವರಾಮ ಹೆಬ್ಬಾರ್ ಅವರು ಸಾವಿರಾರು ಕೋಟಿ ರೂ ವೆಚ್ಚ ಮಾಡಿ ಪಕ್ಕದ ಜಿಲ್ಲೆಯಲ್ಲಿ ಉದ್ದಿಮೆ ಮಾಡಿದ್ದಾರೆ. ಬೇರೆ ಬೇರೆ ದಂಧೆಗೂ ಇಳಿದಿದ್ದು ಎಲ್ಲರಿಗೂ ಗೊತ್ತಿದೆ’ ಎಂದು ಆ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
`ಶಿರಸಿಯಲ್ಲಿ ನಡೆದ ಜನ ಸಮಾವೇಶದಲ್ಲಿ ನದಿ ತಿರುವು ಯೋಜನೆ ಬಿಜೆಪಿ ಅವಧಿಯಲ್ಲಿ ನಡೆದಿದ್ದು ಎಂದು ಸಚಿವ ಮಂಕಾಳು ವೈದ್ಯ ಅವರೇ ಹೇಳಿದ್ದಾರೆ. ಆ ವೇಳೆ ಬಿಜೆಪಿಯಿಂದ ಸಚಿವರಾಗಿದ್ದ ಶಿವರಾಮ ಹೆಬ್ಬಾರ್ ಅವರು ಅದನ್ನು ಏಕೆ ವಿರೋಧಿಸಲಿಲ್ಲ?’ ಎಂದು ಪ್ರಕಟಣೆಯಲ್ಲಿ ಪ್ರಶ್ನಿಸಲಾಗಿದೆ. ಇದರೊಂದಿಗೆ ನಿಸರ್ಗಮನೆ ಮನೆಯೂ ಪ್ರಮೋದ ಹೆಗಡೆ ಅವರ ಕನಸಿನ ಕೂಸು. ಅಲ್ಲಿ ಯಾವುದೇ ಅಕ್ರಮ ನಡೆಯುತ್ತಿಲ್ಲ’ ಎಂಬ ಬಗ್ಗೆಯೂ ಪ್ರಕಟಣೆಯಲ್ಲಿದೆ. ಗಣಿ ಹಗರಣ ಸೇರಿ ಇನ್ನಷ್ಟು ವಿಷಯಗಳ ಬಗ್ಗೆ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.