ಹೊನ್ನಾವರದ ಮಂಕಿಯ ಉದಯ ನಾಯ್ಕ ಅವರ ಜಮೀನಿನಲ್ಲಿದ್ದ 38 ಅಡಿ ಆಳದ ಬಾವಿಗೆ ಬಿದ್ದು ರಾಜೀವ ರಾಜನ್ ಅವರು ಸಾವನಪ್ಪಿದ್ದಾರೆ.
ಹೊನ್ನಾವರದ ಮಂಕಿಯ ಗಣೇಶ ನಗರದ ಬಳಿ ಉದಯ ಸಾಂತಯ್ಯ ನಾಯ್ಕ ಅವರು ವಾಸವಾಗಿದ್ದಾರೆ. ಅವರು ತಮ್ಮ ಜಮೀನಿನಲ್ಲಿ ಬಾವಿ ತೋಡಿಸಿದ್ದು, ಅದಕ್ಕೆ ಸಿಮೆಂಟ್ ರಿಂಗ್’ಗಳನ್ನು ಅಳವಡಿಸಿದ್ದಾರೆ. ಬಾವಿ ನಿರ್ಮಾಣ ಹಾಗೂ ರಿಂಗ್ ಅಳವಡಿಸುವ ಪ್ರಕ್ರಿಯೆಗೆ ಕೇರಳದ ರಾಜೀವ ರಾಜನ್ ಅವರು ತಮ್ಮ ತಂಡದ ಜೊತೆ ಬಂದಿದ್ದು, ಕೆಲಸ ಅವಧಿಯಲ್ಲಿ ಬಾವಿಯ ಅಂಚಿನ ಮಣ್ಣು ಕುಸಿದ ಪರಿಣಾಮ ರಾಜೀವ ರಾಜನ್ (29) ಅವರು ಬಾವಿ ಆಳಕ್ಕೆ ಬಿದ್ದಿದ್ದಾರೆ. ಅಲ್ಲಿಂದ ಮೇಲೆ ಬರಲಾಗದೇ ಕೊನೆಯುಸಿರೆಳೆದಿದ್ದಾರೆ.
ಜನವರಿ 3ರಂದು ಈ ಅವಘಡ ನಡೆದಿದೆ. ಇನ್ನಿತರ ಕೆಲಸಗಾರರ ಸಮ್ಮುಖದಲ್ಲಿಯೇ ದುರಂತ ನಡೆದರೂ ರಾಜೀವ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ದುರಂತಕ್ಕೂ ಮುನ್ನ ರಾಜೀವ ರಾಜನ್ ಅವರು ಸಿಮೆಂಟ್ ರಿಂಗುಗಳಿಗೆ ಅಳವಡಿಸಿದ್ದ ಕಬ್ಬಿಣದ ಬಾಕ್ಸುಗಳನ್ನು ತೆಗೆಯುತ್ತಿದ್ದು, ಅವರು ಮುನ್ನಚ್ಚರಿಕೆವಹಿಸದಿರುವುದೇ ಸಾವಿಗೆ ಮುಖ್ಯ ಕಾರಣವಾಗಿದೆ. ಅವರ ಜೊತೆ ಕೆಲಸ ಮಾಡುತ್ತಿದ್ದ ಮನೋಜ ಮೋಹನನ್ ಈ ಬಗ್ಗೆ ಮಾಹಿತಿ ನೀಡಿದ್ದು, ಮಂಕಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.