ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣರ ಬಗ್ಗೆ ಅವಹೇಳನ ಮಾಡುತ್ತಿದ್ದ ಸಿದ್ದಾಪುರದ ಪತ್ರಕರ್ತ ಕೋಲಸಿರ್ಸಿ ಕನ್ನೇಶ ಅವರಿಗೆ ತಲೆಬಿಸಿ ಶುರುವಾಗಿದೆ. ವೈದಿಕರ ಬಗ್ಗೆ ನಿಂದನಿಯ ಬರಹ ಪ್ರಕಟಿಸಿದ್ದ ಕಾರಣ ಸಿದ್ದಾಪುರ ಪೊಲೀಸರು ಕನ್ನೇಶ ನಾಯ್ಕ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.
ಕನ್ನೇಶ ನಾಯ್ಕ ಅವರು ಪ್ರತಿಷ್ಠಿತ ಸುದ್ದಿ ವಾಹಿನಿಯೊಂದರ ವರದಿಗಾರರಾಗಿದ್ದರು. ಆ ವಾಹಿನಿ ತೊರೆದ ನಂತರ `ಸಮಾಜಮುಖಿ’ ಎಂಬ ಹೆಸರಿನಲ್ಲಿ ಸ್ವತಂತ್ರ ಪತ್ರಿಕೋದ್ಯಮ ಶುರು ಮಾಡಿದ್ದರು. ಅದೇ ಹೆಸರಿನ ಫೇಸ್ಬುಕ್ ಪುಟದಲ್ಲಿ ಅವರು ಆಗಾಗ ಬ್ರಾಹ್ಮಣರ ವಿರುದ್ಧ ಬರಹಗಳನ್ನು ಪ್ರಕಟಿಸುತ್ತಿದ್ದರು. ಕೊಲೆ ಆರೋಪದ ಅಡಿ ಜೈಲು ಪಾಲಾಗಿರುವ ಜ್ಯೋತಿಷಿ ಕಮಲಾಕರ ಭಟ್ಟರ ವಿರುದ್ಧ ಕನ್ನೇಶ ನಾಯ್ಕ ಅವರು ಮಾಹಿತಿ ಪ್ರಸಾರ ಮಾಡಿದ್ದು, ಇದರೊಂದಿಗೆ ಬ್ರಾಹ್ಮಣ ಸಮುದಾಯದ ವಿರುದ್ಧ ಅಸಂಬದ್ಧ ಪದ ಪ್ರಯೋಗ ಮಾಡಿದ್ದರು.
ಬ್ರಾಹ್ಮಣರ ಜುಟ್ಟು ಹಾಗೂ ಜನಿವಾರದ ಬಗ್ಗೆ ಕನ್ನೇಶ ನಾಯ್ಕ ಅವರು ಕೆಟ್ಟದಾಗಿ ಬರೆದಿದ್ದರು. `ಜುಟ್ಟು ಜನಿವಾರ ಕಿತ್ತು ಮಧ್ಯ ಎಶಿಯಾಗೆ ಪಾರ್ಸಲ್ ಮಾಡಬೇಕು. ಬಿಜೆಪಿ ಬೆಂಬಲಿಗ ಹಗಲು ದರೋಡೆಕೋರರನ್ನು ಜೀವಂತವಾಗಿ ದಹಿಸಬೇಕು’ ಎಂಬುದನ್ನು ಸೇರಿ `ಕಮಲಾಕರ ಭಟ್ಟ ಅವರ ಗುರು’ ಎಂದು ಬಿಂಬಿಸಿದ್ದರು. ಜೊತೆಗೆ `ದೇಶಕ್ಕೆ ಕಂಟಕ’ ಎಂಬ ನಿಟ್ಟಿನಲ್ಲಿ ತಮ್ಮ ಬರಹವನ್ನು ಪ್ರಸಾರ ಮಾಡಿದ್ದರು. ಕಮಲಾಕರ ಭಟ್ಟರ ಪ್ರಕರಣ ಮುಖ್ಯವಾಗಿಸಿಕೊಂಡು ಆರ್ ಎಸ್ ಎಸ್, ಬಿಜೆಪಿ ಹಾಗೂ ಬ್ರಾಹ್ಮಣರ ವಿರುದ್ಧ ಕಿಡಿಕಾರಿದ್ದರು..
ಫೇಸ್ಬುಕ್ ಮೂಲಕ ಹರಿದಾಡಿದ ಈ ಬರಹವನ್ನು ಫೆಬ್ರವರಿ 6ರಂದು ಪೊಲೀಸ್ ಸಿಬ್ಬಂದಿ ಮೋಹನ ಗಾವಡಿ ಅವರು ಗಮನಿಸಿದರು. ಪೊಲೀಸ್ ಸಿಬ್ಬಂದಿ ಪ್ರಶಾಂತಕುಮಾರ ಬಿ ಅವರಿಗೆ ಮೋಹನ ಗಾವಡಿ ಅವರು ಈ ವಿಷಯ ತಿಳಿಸಿದರು. ಈ ನಡುವೆ ಕನ್ನೇಶ ನಾಯ್ಕ ಅವರ ಬರಹಕ್ಕೆ ಕೆಲವರು ವಿರುದ್ಧವಾಗಿ ಕಮೆಂಟ್ ಮಾಡಿದ್ದು, ಕಮೆಂಟ್ ಮಾಡಿದವರ ವಿರುದ್ಧ ದೂರು ನೀಡಲು ಕನ್ನೇಶ ನಾಯ್ಕ ಅವರು ಪೊಲೀಸ್ ಠಾಣೆಗೆ ಹೋಗಿದ್ದರು. ಈ ವೇಳೆ ಜಾತಿಯ ಬಗ್ಗೆ ಕೆಟ್ಟದಾಗಿ ನಿಂದಿಸಿ ದ್ವೇಷ ಭಾವನೆ ಮೂಡಿಸಲು ಪ್ರಯತ್ನಿಸಿದ್ದ ಕನ್ನೇಶ ನಾಯ್ಕ ವಿರುದ್ಧವೇ ಪೊಲೀಸರು ಕ್ರಮ ಜರುಗಿಸಿದರು.
ಸದ್ಯ, ಬ್ರಾಹ್ಮಣರ ಬಗ್ಗೆ ಕೆಟ್ಟದಾಗಿ ಬರಹ ಪ್ರಕಟಿಸಿ ಗಲಭೆ ಸೃಷ್ಠಿಸಲು ಪ್ರಯತ್ನಿಸಿದ ಕಾರಣ ಕನ್ನೇಶ ನಾಯ್ಕ ಅವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ದ್ವೇಷದ ಬರಹ ಪ್ರಕಟಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆತರಲು ಪ್ರಯತ್ನಿಸಿದ ಆರೋಪದ ಅಡಿ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.