95 ಲಕ್ಷ ರೂ ವೆಚ್ಚ ಮಾಡಿ ಶಿರಸಿಯಿಂದ ದೊಡ್ನಳ್ಳಿಗೆ ಹೋಗುವ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಆ ಅಭಿವೃದ್ಧಿ ಕೆಲಸದ ನಂತರವೇ ಅಲ್ಲಿ ಅಪಘಾತದ ಪ್ರಮಾಣ ಹೆಚ್ಚಾಗಿದೆ!
ಶಿರಸಿಯಿಂದ ದೊಡ್ನಳ್ಳಿಗೆ ಹೋಗುವ ರಸ್ತೆ ಹದಗೆಟ್ಟಿತ್ತು. ಸಾರ್ವಜನಿಕರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದ ಕಾರಣ ಆ ರಸ್ತೆ ಅಭಿವೃದ್ಧಿಗೆ ಸರ್ಕಾರ ಮುಂದಾಯಿತು. ಒಂದು ತಿಂಗಳ ಹಿಂದೆ ರಸ್ತೆಗೆ ಮರುಡಾಂಬರೀಕರಣ ಕೆಲಸ ನಡೆಯಿತು. ಕೆಲಸದ ಗುಣಮಟ್ಟವೂ ಚನ್ನಾಗಿಯೇ ಇದ್ದು, ಚಿಕ್ಕದೊಂದು ಅವೈಜ್ಞಾನಿಕ ಪದ್ಧತಿ ಅನುಸರಿಸಿದ್ದರಿಂದ ಅಪಘಾತಗಳ ಪ್ರಮಾಣ ಹೆಚ್ಚಾಯಿತು.
ಕಳೆದ ಒಂದು ತಿಂಗಳ ಅವಧಿಯಲ್ಲಿ ಈ ಮಾರ್ಗದಲ್ಲಿ ಮೂರು ವಾಹನಗಳು ರಸ್ತೆ ಬಿಟ್ಟು ಗಟಾರಕ್ಕೆ ಬಿದ್ದಿವೆ. ರಸ್ತೆ ಕೆಲಸ ಸರಿ ಮಾಡಿದ ಗುತ್ತಿಗೆದಾರರು ರಸ್ತೆಯ ಅಂಚು ಸರಿಪಡಿಸುವ ಕೆಲಸ ಮಾಡಿಲ್ಲ. ರಸ್ತೆ ಬದಿಯ ಒಂದು ಕಡೆ ಚರಂಡಿವರೆಗೆ ಡಾಂಬರು ಹಾಕಲಾಗಿದೆ. ಇನ್ನೊಂದು ಕಡೆ ಡಾಂಬರು ಸುರಿಯದೇ ಹಾಗೇ ಬಿಡಲಾಗಿದೆ. ರಸ್ತೆ ಅಂಚಿನ ಅಲೈನಮೆಂಟ್ ಸರಿಯಾಗಿ ಗಮನಿಸದೇ ಮಾಡಿದ ಕಾಮಗಾರಿಯಿಂದ ವಾಹನಗಳು ಚರಂಡಿಗೆ ಬೀಳುತ್ತಿವೆ.
ಚರಂಡಿ ಕಡೆ ಡಾಂಬರಿಕರಣ ಭಾಗದ ಕಡೆ ವಾಹನಗಳು ವಾಲುತ್ತಿದ್ದು, ಚಾಲಕ ಕೊಂಚ ಆಯತಪ್ಪಿದರೂ ಅವು ಗಟಾರಕ್ಕೆ ಬೀಳುತ್ತಿದೆ. ಹೀಗಾಗಿ ಆ ಅವೈಜ್ಞಾನಿಕ ಪದ್ಧತಿ ಸರಿಪಡಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜನ ಆಗ್ರಹಿಸಿದ್ದಾರೆ. ರಸ್ತೆ ಅಂಚಿನ ಎರಡು ಕಡೆ ಸಮಾನ ಜಾಗ ಬಿಟ್ಟರೆ ಅಪಾಯ ಕಡಿಮೆ ಆಗಲಿದ್ದು, ಅದನ್ನು ಗಮನಿಸಬೇಕು ಎಂದು ಒತ್ತಾಯಿಸಿದ್ದಾರೆ.