ಶಿರಸಿಯ ವ್ಯಾಪಾರಿ, ಸಿದ್ದಾಪುರದ ಚಾಲಕನ ಜೊತೆ ಕುಮಟಾದ ಶಿಕ್ಷಕರೊಬ್ಬರು ಅಂದರ್ ಬಾಹರ್ ಆಟಕ್ಕೆ ಹೋಗಿ ಸಿಕ್ಕಿಬಿದ್ದಿದ್ದಾರೆ. ಮತ್ತಿಬ್ಬರು ಕೂಲಿ ಕಾರ್ಮಿಕರು ಈ ಆಟಕ್ಕೆ ಕೈ ಜೋಡಿಸಿದ್ದು, ಅವರು ಸಹ ಕಾನೂನು ಕ್ರಮಕ್ಕೆ ಒಳಗಾಗಿದ್ದಾರೆ.
ಕುಮಟಾ ಮಿರ್ಜಾನಿನ ತಾರಿಬಾಗಿಲುವಿನ ಶಿಕ್ಷಕ ಶ್ರೀಕಾಂತ ಸೀತಾರಾಮ ಪಟಗಾರ ಅವರು ಇಸ್ಪಿಟ್ ಆಟದಲ್ಲಿ ತಲ್ಲೀನರಾಗಿರುವಾಗ ಕುಮಟಾ ಪಿಐ ಯೋಗೀಶ ಕೆ ಎಂ ಅವರು ದಾಳಿ ಮಾಡಿದ್ದಾರೆ. ಆ ವೇಳೆ ಸಿದ್ದಾಪುರದ ಹೊಸೂರಿನ ಕಾನಗೇರಿಯ ಚಾಲಕ ಸತೀಶ ಬೊಮ್ಮ ನಾಯ್ಕ, ಸಿದ್ದಾಪುರ ಹೆಗನೂರು ಅತ್ತಿಸೌಲು ಬಳಿಯ ಗೋಳಿಮಕ್ಕಿ ನರಹರಿ ಮಾಬ್ಲು ಗೌಡ, ಕುಮಟಾ ಸಂತೆಗುಳಿಯ ಡಿಯೋಗ ಸಂತಾನ ಅಲ್ಮೇಡಾ, ಕುಮಟಾ ನೆಹರು ನಗರ ಇಂಡಿಯನ್ ಗ್ಯಾಸ್ ಬಳಿಯ ಮಂಜುನಾಥ ನಾಗು ಗೌಡ ಹಾಗೂ ಶಿರಸಿ ಬನವಾಸಿ ಬಳಿಯ ಹುಸೇರಿಯ ವ್ಯಾಪಾರಿ ಕೃಷ್ಣಮೂರ್ತಿ ನಾಗರಾಜ ನಾಯ್ಕ ಅವರು ಅಲ್ಲಿ ಜೂಜಾಟದಲ್ಲಿ ನಿರತರಾಗಿರುವುದು ಗೊತ್ತಾಗಿದೆ.
ಕುಮಟಾದ ಮೇದಿನಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಫೆಬ್ರವರಿ 9ರ ರಾತ್ರಿ ಭಾರೀ ಪ್ರಮಾಣದಲ್ಲಿ ಜೂಜಾಟ ನಡೆಯುತ್ತಿತ್ತು. ಈ ಬಗ್ಗೆ ಮಾಹಿತಿ ಅರೆಸಿ ಕುಮಟಾ ಪೊಲೀಸರು ಅಲ್ಲಿ ಹೋದರು. ಕಾಡಿನಲ್ಲಿ ಅವಿತಿದ್ದ ಎಲೆಮಾನವರಿಗಾಗಿ ಪೊಲೀಸರು ಶೋಧ ನಡೆಸಿದರು. ನಸುಕಿನ 4.45ರ ಅವಧಿಯಲ್ಲಿ ಈ ಆರು ಜನ ಪೊಲೀಸರ ಕಣ್ಣಿಗೆ ಬಿದ್ದರು. ಅವರು ಜೂಜಾಟಕ್ಕೆ ಬಳಸಿದ್ದ ಸಾಮಗ್ರಿಗಳನ್ನು ಪೊಲೀಸರು ಜಪ್ತು ಮಾಡಿದರು. ಆ ಕಾಡಿನಲ್ಲಿ ಸಿಕ್ಕ 27700ರೂ ಹಣವನ್ನು ವಶಕ್ಕೆಪಡೆದರು. ಇಸ್ಪಿಟ್ ಎಲೆ, ಪ್ಲಾಸ್ಟಿಕ್ ತಡಪಾಲ್, ಚಾರ್ಜಿಂಗ್ ಬಲ್ಪ್ ಸೇರಿ ಅಲ್ಲಿದ್ದ ವಸ್ತುಗಳನ್ನು ಜಪ್ತು ಮಾಡಿ, ಎಲೆಮಾನವರ ವಿರುದ್ಧ ಕಾನೂನು ಕ್ರಮ ಜರುಗಿಸಿದರು.
`ಜೂಜಾಟದಿಂದ ಜೀವನ ಹಾಳು’