ಪದೇ ಪದೇ ಅಪಘಾತವಾಗುತ್ತಿರುವ ಜೊಯಿಡಾದ ಆನಮೋಡ-ಹೆಮ್ಮೆಡ್ಗಾ ಮಾರ್ಗದಲ್ಲಿ ಮಂಗಳವಾರ ರಾತ್ರಿ ಮತ್ತೊಂದು ಅಪಘಾತವಾಗಿದ್ದು, ಮಹಿಳೆಯೊಬ್ಬರು ಸಾವನಪ್ಪಿದ್ದಾರೆ. ಜೊತೆಗೆ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹಳೆಯ ಗೋವಾದಲ್ಲಿ ವಾಸಿಸುತ್ತಿದ್ದ ದತ್ತಪ್ರಸಾದ್ ಹರಿದಾಸ್ ಹಾಗೂ ಜಾಗೃತಿ ಹರಿದಾಸ ಅವರು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದರು. ಅವರು ಹೊರಟಿದ್ದ ಕಾರು ಮರಕ್ಕೆ ಗುದ್ದಿದ್ದು, ಗುದ್ದಿದ ರಭಸಕ್ಕೆ ಜಾಗೃತಿ ಹರಿದಾಸ ಅವರು ಅಲ್ಲಿಯೇ ಸಾವನಪ್ಪಿದರು. ಈ ದಂಪತಿ ಸಂಬAಧಿಕರ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಖಾನಾಪುರಕ್ಕೆ ಆಗಮಿಸಿದ್ದರು. ಕಾರ್ಯಕ್ರಮ ಮುಗಿಸಿ ಕಾರಿನಲ್ಲಿ ಮರಳುವಾಗ ಅವಘಡ ನಡೆದಿದೆ.
ಅನಮೋಡ – ಹೆಮ್ಮೆಡ್ಗಾ ರಸ್ತೆಯ ಪಾಲಿ ಸಮೀಪ ಎದುರುಗಡೆಯಿಂದ ಬಂದ ಭಾರೀ ಪ್ರಮಾಣದ ವಾಹನಕ್ಕೆ ಕಾರು ಗುದ್ದುವುದನ್ನು ತಪ್ಪಿಸುವ ಅವಸರದಲ್ಲಿ ಈ ಅವಘಡ ನಡೆದಿದೆ. ಗಂಭೀರ ಗಾಯಗೊಂಡ ದತ್ತಪ್ರಸಾದ್ ಹರಿದಾಸ್ ಅವರನ್ನು ಗೋವಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವನಪ್ಪಿದ ಜಾಗೃತಿ ಹರಿದಾಸ್ ಅವರು ಜೊಯಿಡಾ ತಾಲ್ಲೂಕಿನ ಕೊನಶೇತ್ ಗ್ರಾಮದವರಾಗಿದ್ದು, ಮಹಾರಾಷ್ಟ್ರದ ಸಾವಂತವಾಡಿಯ ದತ್ತಪ್ರಸಾದ್ ಹರಿದಾಸ್ ಅವರನ್ನು ವಿವಾಹವಾಗಿದ್ದರು. ವಿವಾಹದ ನಂತರ ದಂಪತಿ ಗೋವಾದಲ್ಲಿ ನೆಲೆಸಿದ್ದರು.