ನಾಲ್ಕು ತಿಂಗಳ ಹಿಂದೆ ಶಿರಸಿಯಲ್ಲಿ ವಕೀಲರ ನಡುವೆ ನಡೆದಿದ್ದ ಹೊಡೆದಾಟ ಪ್ರಕರಣಕ್ಕೆ ದಾಖಲಾದ ಪೊಲೀಸ್ ದೂರುಗಳಿಗೆ ಹೈಕೋರ್ಟ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಇದರ ಬೆನ್ನಲ್ಲೆ ಮತ್ತೆ ಎರಡು ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ!
2025ರ ನವೆಂಬರ್ 11ರಂದು ಶಿರಸಿಯಲ್ಲಿ ವಕೀಲರ ಸಭೆಯಲ್ಲಿ ನಡೆದ ಹೋಡೆದಾಟ ನಡೆದಿತ್ತು. ಅಧಿಕಾರ ಅವಧಿ ಮುಗಿದರೂ ಆಗದ ಹೊಸ ನೇಮಕಾತಿ, ಸದಸ್ಯತ್ವ ರದ್ಧತಿಯ ಬಗ್ಗೆ ಪ್ರಶ್ನೆ ಮಾಡಿದ್ದು ಸೇರಿ ವಿವಿಧ ವಿಷಯಗಳು ಹೊಡೆದಾಟಕ್ಕೆ ಕಾರಣವಾಗಿದ್ದವು. ಎರಡು ಬಣಗಳ ನಡುವೆ ನಡೆದ ವಾದ-ವಾಗ್ವಾದ ಗೊಂದಲ ಸೃಷ್ಠಿಸಿತ್ತು. ಈ ವಿಷಯವಾಗಿ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ವಿವಿಧ ದೂರುಗಳು ದಾಖಲಾಗಿದ್ದವು. ಜಾತಿ ನಿಂದನೆ, ಹಲ್ಲೆ ಹಾಗೂ ಮಹಿಳೆಯ ಮೈ ಮುಟ್ಟಿದ ಬಗ್ಗೆ ದೂರಿನ ಆರೋಪಗಳಿದ್ದು, ಆ ಎಲ್ಲಾ ಪ್ರಕರಣಗಳಿಗೂ ಹೈಕೋರ್ಟ ತಡೆಯಾಜ್ಞೆ ನೀಡಿದೆ. ಸದ್ಯ ಇದೇ ವಿಷಯದ ಮುಂದುವರೆದ ಭಾಗವಾಗಿ ಮತ್ತೆರಡು ಪೊಲೀಸ್ ಕೇಸ್ ದಾಖಲಾಗಿದೆ!
ವಕೀಲ ಆರ್ ಎಸ್ ಹೊಸೂರು ಅವರು ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಗೆ ತೆರಳಿ ಆ ದಿನ ನಡೆದ ಕಹಿ ಘಟನೆಗಳ ಬಗ್ಗೆ ವಿವರಿಸಿದ್ದಾರೆ. ಮರಾಠಿಕೊಪ್ಪದ ವಕೀಲ ಸಿ ಎಫ್ ಈರೇಶ್, ಸಿದ್ದಾಪುರದ ವಕೀಲ ಮಂಜುನಾಥ ನಾಯ್ಕ, ಶಿರಸಿ ಆಳ್ಮನೆಯ ವಕೀಲ ವಿ ಎಂ ಹೆಗಡೆ, ರಾಮನಬೈಲಿನ ವಕೀಲ ರಾಜೀವ ರೇವಣಕರ್ ಅವರ ವಿರುದ್ಧ ಆರ್ ಎಸ್ ಹೊಸೂರು ಅವರು ಆರೋಪ ಮಾಡಿದ್ದಾರೆ. `ಸಂಘದ ಚುನಾವಣೆಯಲ್ಲಿ ತಮಗೆ ಸಹಕರಿಸಿಲ್ಲ ಎಂಬ ಕಾರಣಕ್ಕೆ ಮಾಜಿ ಅಧ್ಯಕ್ಷ ಸಿ ಎಫ್ ಈರೇಶ್ ಅವರು ದ್ವೇಷದಿಂದ ಇದ್ದರು. ಆ ದಿನ 80ಕ್ಕೂ ಅಧಿಕ ಸದಸ್ಯರಿದ್ದರೂ ಸಹ ಅವರು ಸಂಘದ ಸಭೆ ಮುಂದೂಡಿರುವುದಾಗಿ ವೇದಿಕೆ ಮೇಲೆ ಘೋಷಿಸಿದರು. ಆ ವೇಳೆ ಅದನ್ನು ರಾಜೇಶ್ ಶೆಟ್ಟಿ ಅವರು ಪ್ರಶ್ನಿಸಿದ್ದು, ಎದುರುದಾರರಾದ ನಾಲ್ಕು ವಕೀಲರು ಸೇರಿ ಗಲಾಟೆ ಶುರು ಮಾಡಿದರು’ ಎಂದು ಆರ್ ಎಸ್ ಹೊಸೂರು ಅವರು ಹೇಳಿದ್ದಾರೆ. `ಈ ವೇಳೆ ಸಮಾಧಾನ ಮಾಡಲು ಮುಂದಾದ ತಮಗೂ ಆ ನಾಲ್ವರು ವಕೀಲರು ಕುತ್ತಿಗೆ ಹಿಡಿದು ಕೊಲೆ ಪ್ರಯತ್ನ ಮಾಡಿದ್ದಾರೆ. ರಿಟ್ ಪಿಟಿಶನ್ ಹಾಕಿದನ್ನು ಪ್ರಶ್ನಿಸಿ ಬೈದಿದ್ದಾರೆ. ಇದರಿಂದ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಜೀವ ಬೆದರಿಕೆಯಿದೆ’ ಎಂದು ಆರ್ ಎಸ್ ಹೊಸೂರು ಅವರು ಪೊಲೀಸರ ಬಳಿ ವಿವರಿಸಿದ್ದಾರೆ. ಜೊತೆಗೆ ರಕ್ಷಣೆ ಕೋರುವಂತೆಯೂ ಮನವಿ ಮಾಡಿದ್ದಾರೆ.
ಇದೇ ವಿಷಯವಾಗಿ ರಾಮನಬೈಲಿನ ವಕೀಲ ರಾಜೇಶ ವಿ ಶೆಟ್ಟಿ ಅವರು ಸಹ ಪೊಲೀಸರ ಬಳಿ ಇನ್ನಷ್ಟು ವಿಷಯ ಪ್ರಸ್ತಾಪಿಸಿದ್ದಾರೆ. ವಕೀಲರಾದ ಸಿ ಎಫ್ ಈರೇಶ್, ಮಂಜುನಾಥ ನಾಯ್ಕ, ವಿ ಎಂ ಹೆಗಡೆ ಹಾಗೂ ರಾಜೀವ ರೇವಣಕರ್ ಅವರ ವಿರುದ್ಧ ರಾಜೇಶ ಶೆಟ್ಟಿ ಅವರು ಆರೋಪ ಮಾಡಿದ್ದಾರೆ. `ಸಂಘದ ಸಭೆಯಲ್ಲಿ ಪ್ರಶ್ನಿಸಿದ ಕಾರಣ ನೀನು ಸಂಘದ ಸದಸ್ಯನಲ್ಲ ಎಂದು ವಕೀಲ ಸಿ ಎಫ್ ಈರೇಶ್ ಅವರು ಕೂಗಾಡಿದ್ದು, ನಾನು ಇನ್ನೂ ಒಂದು ಅವಧಿಗೆ ಅಧ್ಯಕ್ಷನಾಗಬೇಕಿದೆ. ಅದಕ್ಕೆ ಅವಕಾಶ ಕೊಡದೇ ನನ್ನ ವಿರುದ್ಧ ರಿಟ್ ಹೋಗುವಿರಾ?’ ಎಂದು ಪ್ರಶ್ನಿಸಿದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಸಿ ಕುತ್ತಿಗೆ ಹಿಡಿದ ಬಗ್ಗೆಯೂ ವಿವರಿಸಿದ್ದು, ಆ ವೇಳೆ ಇನ್ನಿತರ ವಕೀಲರು ಹೊಡೆದಾಟ ಬಿಡಿಸಿರುವುದಾಗಿ ರಾಜೇಶ ಶೆಟ್ಟಿ ಅವರು ಹೇಳಿದ್ದಾರೆ.
ಆ ದಿನ ನಡೆದಿದ್ದೇನು? ಆ ಸುದ್ದಿ ಇಲ್ಲಿ ಓದಿ: ವಾದದಿಂದ ವಾಗ್ವಾದ!
ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಈ ಎರಡು ಪ್ರಕರಣ ದಾಖಲಿಸಿದ್ದು, ಸತ್ಯಾಸತ್ಯತೆಯ ಪರಿಶೀಲನೆ ಶುರು ಮಾಡಿದ್ದಾರೆ.