ಅಡಿಕೆ ಬೆಳೆ ವಿಮೆ ಪರಿಹಾರದ ವಿಷಯವಾಗಿ ಯಲ್ಲಾಪುರ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಅವರು ಮಾತನಾಡಿದ್ದು, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್ ಅವರ ನಿಲುವು ಖಂಡಿಸಿದ್ದಾರೆ.
`ಬೆಳೆ ವಿಮೆ ಪರಿಹಾರ ಏಕೆ ಬರುತ್ತಿಲ್ಲ ಎಂದು ನನಗೂ ಅರ್ಥವಾಗುತ್ತಿಲ್ಲ. ಪ್ರತಿ ವರ್ಷ ಮಳೆ ಮಾಪನ ಯಂತ್ರ ಹಾಳಾಗುವುದು ಹಾಗೂ ಪರಿಹಾರ ವಿಳಂಬವಾಗುತ್ತಿರುವುದು ನನಗೂ ಅಚ್ಚರಿ ತಂದಿದೆ’ ಎಂದು ಶಿವರಾಮ ಹೆಬ್ಬಾರ್ ಅವರು ಹೇಳಿದ್ದರು. `ಬೆಳೆ ವಿಮಾ ಪರಿಹಾರ ತಡೆಯುವವರು ಯಾರು? ಅದನ್ನು ಕೊಡಿಸುವವರು ಯಾರು? ಎಂಬುದು ಅರ್ಥವಾಗದ ಹಾಗಾಗಿದೆ. ತಡೆ ಹಿಡಿಯುವುದು ಹಾಗೂ ಕೊನೆಗೆ ಮಂಜೂರು ಮಾಡಿಸುವುದು ಯಕ್ಷಪ್ರಶ್ನೆಯಾಗಿದೆ. ಇಷ್ಟು ವರ್ಷ ಸರಿಯಾಗಿದ್ದ ವ್ಯವಸ್ಥೆ ಈಗ ಎರಡು ವರ್ಷದಲ್ಲಿ ಮಾತ್ರ ಹೀಗಾಗುವುದು ಆಶ್ಚರ್ಯ. ವಿಮಾ ಪರಿಹಾರ ತಡೆ ಹಿಡಿಯುವವರೇ ಅದನ್ನು ಮಂಜೂರಿ ಮಾಡಿಸಿದ್ದೇವೆ ಎನ್ನುವುದು ಯಾವ ಕಾರಣಕ್ಕೆ?’ ಎಂದು ಪ್ರಶ್ನಿಸಿದ್ದರು.
ಶಿವರಾಮ ಹೆಬ್ಬಾರ್ ಅವರು ಆಡಿದ ಈ ಮಾತುಗಳಿಗೆ ಪ್ರಸಾದ ಹೆಗಡೆ ತಿರುಗೇಟು ನೀಡಿದ್ದಾರೆ. `ಬೆಳೆ ವಿಮೆ ಪರಿಹಾರದ ವಿಷಯವಾಗಿ ಶಿವರಾಮ ಹೆಬ್ಬಾರ್ ಅವರು ಬಾಲಷ ಹೇಳಿಕೆ ನೀಡುತ್ತಿದ್ದಾರೆ’ ಎಂದು ಪ್ರಸಾದ ಹೆಗಡೆ ಅವರು ಅಸಮಧಾನವ್ಯಕ್ತಪಡಿಸಿದ್ದಾರೆ. `ಶಾಸಕರು ಆಗಿರುವ ಶಿವರಾಮ ಹೆಬ್ಬಾರ್ ಅವರು ಆಡಳಿತ ವಿಷಯದಲ್ಲಿ ಅನುಭವಹೊಂದಿದವರು. ಅವರ ಇಂಥ ಹೇಳಿಕೆ ಆಡಳಿತಾತ್ಮಕ ವೈಪಲ್ಯವನ್ನು ತೋರಿಸುತ್ತದೆ. ರೈತರಿಗೆ ನ್ಯಾಯ ಒದಗಿಸಬೇಕಾದ ಸ್ಥಾನದಲ್ಲಿರುವವರು ರೈತ ವಿರೋಧಿ ಹೇಳಿಕೆ ನೀಡುವುದು ಸರಿಯಲ್ಲ’ ಎಂದು ಪ್ರಸಾದ ಹೆಗಡೆ ಅವರು ಹೇಳಿದ್ದಾರೆ. `ಕಳೆದ ಬಾರಿ ಬೆಳೆ ವಿಮೆ ಕೊಡಿಸುವಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಶೇಷ ಪ್ರಯತ್ನವಹಿಸಿದ್ದರು. ಈ ಬಾರಿಯೂ ಅವರು ಅದೇ ನಿಟ್ಟಿನಲ್ಲಿ ಹೋರಾಟ ನಡೆಸಿದ್ದಾರೆ. ಆ ಬಗ್ಗೆ ಅರಿವಿಲ್ಲದೇ ಶಿವರಾಮ ಹೆಬ್ಬಾರ್ ಅವರು ಮಾತನಾಡುವುದು ಸರಿಯಲ್ಲ’ ಎಂದು ಸಹ ಪ್ರಸಾದ ಹೆಗಡೆ ಅವರು ಹೇಳಿದ್ದಾರೆ.
`ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದೇ ರೈತರನ್ನು ಶೋಷಿಸುವ ಹಾಗೂ ರೈತ ವಿರೋಧಿ ನೀತಿಯನ್ನು ಶಿವರಾಮ ಹೆಬ್ಬಾರ್ ಅವರು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. 2 ಬಾರಿ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಅವರು ಮಳೆ ಮಾಪನ ಯಂತ್ರ ನಿರ್ವಹಣೆ ಮಾಡಿಸುವ ಜವಾಬ್ದಾರಿ ಯಾವ ಸರಕಾರದ್ದು ಎಂಬ ಅರಿವಿಲ್ಲದೇ ಮಾತನಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ. `ಶಿವರಾಮ ಹೆಬ್ಬಾರ್ ಅವರು ರೈತರ ಪರವಾಗಿ ಏನು ಮಾಡಿದ್ದಾರೆ? ಬೆಳೆ ವಿಮೆ ಪರಿಹಾರಕ್ಕಾಗಿ ರಾಜ್ಯ ಸರಕಾರದ ಮಟ್ಟದಲ್ಲಿ ಯಾವ ರೀತಿಯ ಪ್ರಯತ್ನ ಮಾಡಿದ್ದಾರೆ? ಎಂಬುದನ್ನು ಬಹಿರಂಗಪಡಿಸಲಿ’ ಎಂದು ಸವಾಲು ಹಾಕಿದ್ದಾರೆ.