`ಕುಮಟಾ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಅವರು ಸದನದ ಒಳಗೆ ಒಂದು ರೀತಿ ಮಾತನಾಡುತ್ತಾರೆ. ಕ್ಷೇತ್ರಕ್ಕೆ ಬಂದ ನಂತರ ಮತ್ತೊಂದು ರೀತಿ ವರ್ತಿಸುತ್ತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹಿರಂಗ ಸಭೆಯಲ್ಲಿಯೇ ಭಾಷಣ ಮಾಡಿದ್ದಾರೆ. `ದಿನಕರ ಶೆಟ್ಟಿ ಅವರು ಕಾಂಗ್ರೆಸ್ಸಿಗೆ ಬಂದರೂ ಅವರನ್ನು ನಾವು ಸೇರಿಸಿಕೊಳ್ಳುವುದಿಲ್ಲ’ ಎನ್ನುವ ಮೂಲಕ ದಿನಕರ ಶೆಟ್ಟಿ ಅವರಿಗೆ ಅವಮಾನ ಆಗುವ ರೀತಿ ಮಾತನಾಡಿದ್ದಾರೆ.
ಈಚೆಗೆ ದಿನಕರ ಶೆಟ್ಟಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. `ಕ್ಷೇತ್ರದ ಅಭಿವೃದ್ಧಿಗೆ 50 ಲಕ್ಷ ಬೇಡಿದರೂ ಕೊಟ್ಟಿಲ್ಲ’ ಎಂದು ಸುದ್ದಿಗಾರರ ಬಳಿ ಹೇಳಿಕೊಂಡಿದ್ದರು. ಭಾನುವಾರ ಗಂಗಾವಳಿ ಸೇತುವೆ ಉದ್ಘಾಟನೆಗೆ ಆಗಮಿಸಿದ ಮುಖ್ಯಮಂತ್ರಿ `2017ರಲ್ಲಿ ಈ ಸೇತುವೆಗೆ ನಾನು ಅಡಿಗಲ್ಲು ಹಾಕಿದಾಗ 28 ಕೋಟಿ ಅಂದಾಜು ವೆಚ್ಚ ಆಗಿತ್ತು. ಈಗ 35 ಕೋಟಿ ರೂ ವೆಚ್ಚವಾಗಿದೆ. ಹಿಂದಿನ ಸರ್ಕಾರ ಸೇತುವೆ ನಿರ್ಮಾಣಕ್ಕೆ ಆಸಕ್ತಿವಹಿಸದ ಕಾರಣ ವಿಳಂಭವಾಗಿದೆ. ಜೊತೆಗೆ ಹಣವೂ ಅಧಿಕವಾಗಿದೆ’ ಎಂದವರು ಹೇಳಿದರು. ನಂತರ ಮಾಡಿದ ಭಾಷಣದಲ್ಲಿ ದಿನಕರ ಶೆಟ್ಟಿ ಅವರ ವಿರುದ್ಧ ಸಾಕಷ್ಟು ಹಗುರವಾಗಿ ಮಾತನಾಡಿದ್ದು, ಬಿಜೆಪಿ ಆಡಳಿತವನ್ನು ವಿರೋಧಿಸಿದರು.
`ನೀವು ಬಿಜೆಪಿಯಲ್ಲಿಯೇ ಇರಿ. ನಾವು ನಿಮ್ಮನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳುವುದಿಲ್ಲ’ ಎಂದು ದಿನಕರ ಶೆಟ್ಟಿ ಅವರಿಗೆ ಸಿದ್ದರಾಮಯ್ಯ ಅವರು ಹೇಳಿದರು. `ದಿನಕರ ಶೆಟ್ಟಿ ಅವರು ಸುಳ್ಳು ಹೇಳುತ್ತಾರೆ’ ಎಂದು ಸಾರ್ವಜನಿಕರ ಎದರೇ ಹೇಳಿದರು. `ನಾವು ಯಾರನ್ನು ಪಕ್ಷಕ್ಕೆ ಕರೆಯುವುದು ಇಲ್ಲ. ಸೇರಿಸಿಕೊಳ್ಳುವುದು ಇಲ್ಲ’ ಎಂದರು. `ಗೋಕರ್ಣವನ್ನು ಪಟ್ಟಣ ಪಂಚಾಯತ ಮಾಡಿ ಎಂದು ದಿನಕರ ಶೆಟ್ಟಿ ಅವರು ಹೇಳಿದ್ದಾರೆ. ಈಗ ಅದನ್ನು ಮಾಡಲು ಆಗಲ್ಲ. ಸ್ಥಳೀಯ ಸಂಸ್ಥೆ ಚುನಾವಣೆ ನಂತರ ಗೋಕರ್ಣ ಪಟ್ಟಣ ಪಂಚಾಯತ ಮಾಡಲಿದ್ದೇವೆ’ ಎಂದು ಸೀಎಂ ಸಿದ್ದರಾಮಯ್ಯ ಅವರು ಘೋಷಿಸಿದರು.
`ನೀವು ಮನಸ್ಸು ಮಾಡಿದರೆ ಈಗಲೇ ಮಾಡಬಹುದು’ ಎಂದು ದಿನಕರ ಶೆಟ್ಟಿ ಅವರು ನಡುವೆ ಮಾತನಾಡಿದ್ದು, `ಆಗಲ್ಲ, ಎಂದರೆ ಆಗಲ್ಲ. `ನಿಮಗೇನು ಗೊತ್ತಿಲ್ವ?’ ಎಂದು ಸಿದ್ದರಾಮಯ್ಯ ಅವರು ದಿನಕರ ಶೆಟ್ಟಿ ಅವರನ್ನು ಉದ್ದೇಶಿಸಿ ಮರುಪ್ರಶ್ನೆ ಹಾಕಿದರು. `ಈಗಾಗಲೇ ಪಟ್ಟಣ ಪಂಚಾಯತಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆ ಆದ ಮೇಲೆ ಗೋಕರ್ಣವನ್ನು ಪಟ್ಟಣ ಪಂಚಾಯತ ಮಾಡುತ್ತೇವೆ’ ಎಂದರು. `ಈಗ ಪಟ್ಟಣ ಪಂಚಾಯತ ಮಾಡಲು ಹೋದರೆ ಚುನಾವಣೆ ಯಾವಾಗ ಮಾಡಬೇಕು?’ ಎಂದು ದಿನಕರ ಶೆಟ್ಟಿ ಅವರನ್ನು ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದು, ಆಗ `ಡಿಸೆಂಬರಿನಲ್ಲಿ ಚುನಾವಣೆ ಮಾಡಿ’ ಎಂದು ದಿನಕರ ಶೆಟ್ಟಿ ಸಲಹೆ ನೀಡಿದರು. `ಡಿಸೆಂಬರಿನಲ್ಲಿ ಗ್ರಾಮ ಪಂಚಾಯತ, ಚುನಾವಣೆ ಮಾಡಬೇಕು ಎಂದಾಗ, ಆಗ ಯಾಕೆ? ಈಗಲೇ ಮಾಡಿ ಎನ್ನುತ್ತೀರಿ. ಈಗ ಇನ್ನೊಂದು ರೀತಿ ಮಾತನಾಡುತ್ತೀರಿ. ದಿನಕರ ಶೆಟ್ಟಿ ಅವರು ಅಲ್ಲಿ ಒಂದು ಮಾತು, ಇಲ್ಲಿ ಒಂದು ರೀತಿ ಮಾತನಾಡುತ್ತಾರೆ. ಅವರು ಸದಾ ಸುಳ್ಳು ಹೇಳುತ್ತಾರೆ’ ಎಂದು ಸಿದ್ದರಾಮಯ್ಯ ಅವರು ತಮ್ಮ ಭಾಷಣದಲ್ಲಿ ಹೇಳಿದರು.