ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಯಲ್ಲಾಪುರದ ಕಾಳಮ್ಮ-ದುರ್ಗಮ್ಮ ಜಾತ್ರೆಗೆ ಕ್ಷಣಗಣನೆ ಶುರುವಾಗಿದೆ. ಫೆಬ್ರವರಿ 11ರಿಂದ 19ರವರೆಗೆ ಅದ್ಧೂರಿಯಾಗಿ ಗ್ರಾಮದೇವಿ ಜಾತ್ರೆ ನಡೆಯಲಿದ್ದು, ಮೂರು ವರ್ಷಕ್ಕೆ ಒಮ್ಮೆ ನಡೆಯುವ ಈ ಜಾತ್ರೆಯಲ್ಲಿ ಈ ಬಾರಿಯೂ ಲಕ್ಷಾಂತರ ಭಕ್ತರು ಭಾಗವಹಿಸಲಿದ್ದಾರೆ.
ಯಲ್ಲಾಪುರದಲ್ಲಿ ನೆಲೆಸಿರುವ ದೇವಿಯರ ಪ್ರತಿಮೆಗಳು 600 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿವೆ. ಶತಮಾನಗಳ ಹಿಂದೆ ಹಿಂದುಳಿದ ಪ್ರದೇಶವಾದ ನಾರಾಯಣಗೆರೆಯಲ್ಲಿ ವ್ಯಕ್ತಿಯೊಬ್ಬರು ಉಳುಮೆ ಮಾಡುತ್ತಿರುವಾಗ ಎರಡು ಸವಕಲು ಪ್ರತಿಮೆಗಳು ಸಿಕ್ಕಿದ್ದು, ಅದನ್ನು ಹೋಲುವ ಶಿವಣಿ ಕಟ್ಟಿಗೆಯ ಹೊಸಪ್ರತಿಮೆಯನ್ನು ಮಾಡಿ ಪಟ್ಟಣದ ಕೇಂದ್ರ ಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು. ಆ ಪ್ರತಿಮೆಗಳೇ ಕಾಳಮ್ಮ ಹಾಗೂ ದುರ್ಗಮ್ಮಾ ಎಂದು ಕರೆಯಿಸಿಕೊಂಡು ಗ್ರಾಮದ ಅಭಿವೃದ್ಧಿ ಮಾಡುತ್ತಿವೆ.
ಆಕಾಶ ಬಣ್ಣದ ಪ್ರತಿಮೆ ಕಾಳಮ್ಮ ದೇವಿಯದ್ದಾಗಿದ್ದು, ಕೋಣ ಈ ದೇವರ ವಾಹನ. ಕೆಂಪು ಬಣ್ಣದ ಪ್ರತಿಮೆ ದುರ್ಗಮ್ಮನಾಗಿದ್ದು, ದುರ್ಗಮ್ಮ ದೇವಿಯ ವಾಹನ ಸಿಂಹವಾಗಿದೆ. ಚಿಕ್ಕ ಗುಡಿಯಿಂದ ಆರಂಭವಾದ ಈ ದೇವಿ ಸನ್ನಿದಿ ಇದೀಗ ವಿಶಾಲವಾದ ದೇವಾಲಯದೊಂದಿಗೆ ಊರಿನ ಹೆಮ್ಮೆಯೆನಿಸಿದೆ. ದೇವಿಯರ ಶಕ್ತಿ ಎಷ್ಟರ ಮಟ್ಟಿಗೆ ಇದೆಯಂದರೆ, ಯಲ್ಲಾಪುರಕ್ಕೆ ಬರುವ ಗಣ್ಯರು-ಸಾಧಕರು ಮೊದಲು ದೇವಿ ದರ್ಶನಪಡೆದೇ ನಂತರ ತಮ್ಮ ಕೆಲಸ ಶುರು ಮಾಡುತ್ತಾರೆ. ನಿತ್ಯಪೂಜೆ, ನೈವೇದ್ಯ, ಕುಂಕುಮಾರ್ಚನೆ, ಉಡಿ ತುಂಬುವುದು, ದೇವಿ ಪಾರಾಯಣೆ, ನವರಾತ್ರಿಯಲ್ಲಿ 9 ದಿನಗಳ ಕಾಲ ಕೀರ್ತನೆ ಸೇರಿ ನಾನಾ ಬಗೆಯ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ನಿರಂತರವಾಗಿ ನಡೆಯುತ್ತದೆ. ಅದರ ಪ್ರಕಾರ ಮೂರು ವರ್ಷಕ್ಕೆ ಒಮ್ಮೆ ಅದ್ಧೂರಿ ಜಾತ್ರೆಯೂ ನಡೆಯುತ್ತಿದೆ.
ವಿಶೇಷ ಹೊರ ಮಂಗಳವಾರ: ರಾಜ್ಯದ ಯಾವುದೇ ಪ್ರಾದೇಶಿಕ ಜಾತ್ರೆಗಲಲ್ಲಿಲ್ಲದ ಹೊರ ಮಂಗಳವಾರ ಎಂಬ ವಿಶಿಷ್ಟ ಆಚರಣೆಯೊಂದು ಯಲ್ಲಾಪುರ ಜಾತ್ರೆಯಲ್ಲಿ ನಡೆಯುತ್ತದೆ. ಜಾತ್ರೆ ನಡೆಯುವ ಮುನ್ನದ ಮೂರು ಅಥವಾ ಐದು ಮಂಗಳವಾರಗಳನ್ನು ಹೊರಮಂಗಳವಾರ ಎಂದು ಆಚರಿಸಲಾಗುತ್ತದೆ. ದೇವಿಯ ಪ್ರಸಾದದ ಮೂಲಕ ಜಾತ್ರೆಯ ದಿನಾಂಕ ನಿರ್ಧಾರವಾದ ಬಳಿಕ ದೇವಸ್ಥಾನ ಸಮಿತಿಯವರು ಹೊರ ಮಂಗಳವಾರದ ದಿನಾಂಕಗಳನ್ನು ಪ್ರಕಟಿಸುತ್ತಾರೆ. ಹೊರಮಂಗಳವಾರದ ದಿನ ಜನತೆ ಬೆಳಿಗ್ಗೆ 10 ಘಂಟೆಯಿAದ ಸಂಜೆ 5 ಘಂಟೆಯವರೆಗೆ ಮನೆಯಿಂದ ಹೊರಗೆ ದೂರದ ಹಳ್ಳಿಗಳಿಗೆ ತೆರಳುತ್ತಾರೆ. ಊರ ಹೊರಗೆಯೇ ಆ ದಿನದ ಅಡುಗೆ ಬೇಯಿಸಿ ಊಟಮಾಡಿ ಕಾಲ ಕಳೆಯುತ್ತಾರೆ. ಈ ವೇಳೆ ದೇವಿಯರು ಮನೆಯಲ್ಲಿ ನೃತ್ಯ ಮಾಡಿ ಮನೆಯವರನ್ನು ಹರಸುತ್ತಾರೆಂಬ ಪ್ರತೀತಿಯಿದೆ. ಅತ್ಯಂತ ಕಟ್ಟು ನಿಟ್ಟಾಗಿ ಈ ಪದ್ಧತಿಯನ್ನು ಅನೇಕ ತಲೆಮಾರುಗಳಿಂದ ಆಚರಿಸಿಕೊಂಡು ಬಂದಿದ್ದಾರೆ.
ಜಾತ್ರೆಗೂ ಮುನ್ನ ದೇವಿಯರನ್ನು ಅಲಂಕಾರ ಮಾಡುವುದಕ್ಕೆ `ಅಂಕೆ’ ಎನ್ನುತ್ತಾರೆ. ನಂತರ ದೇವಿಗೆ ಮಂಗಲಸೂತ್ರ ಕಟ್ಟಿ,ಭಕ್ತರ ಮನದಿಚ್ಛೆ ಅರ್ಪಿಸುವುದಕ್ಕೆ `ಅಹಿರ’ ಎನ್ನುವರು. ಧರ್ಮದರ್ಶಿ ಏರ್ಪಡಿಸುವ ಭೋಜನಕ್ಕೆ `ಹುಲಪ’ ಎಂದು ಕರೆಯುತ್ತಾರೆ. ಪ್ರತಿ ಬಾರಿಯೂ ಬುಧವಾರವೇ ಜಾತ್ರೆ ಆರಂಭವಾಗುವದು ಇತಿಹಾಸದ ಪುಟಗಳಲ್ಲಿ ಲಭ್ಯವಾಗುವ ಮಾಹಿತಿಗಳಲ್ಲಿ ಪ್ರಮುಖವಾದದ್ದಾಗಿದೆ. ದೇವಿಯರ ಲಗ್ನದೊಂದಿಗೆ ಜಾತ್ರೆ ಆರಂಭವಾಗುತ್ತದೆ. ಎಲ್ಲಡೆ ವೇದಘೋಷಗಳು ಮೊಳಗುತ್ತವೆ. ಶಿವಾಷ್ಟೋತ್ತರ ನಾಮಾವಳಿ ಮಂತ್ರ ಪಠಣದೊಂದಿಗೆ ಅಲಂಕಾರದಿoದ ಕಂಗೊಳಿಸುತ್ತಿರುವ ದೇವಿಯರನ್ನು ಭಕ್ತರೇ ತಲೆಯ ಮೇಲೆ ಹೊತ್ತು ದೇವಿ ಮೈದಾನದ ಗದ್ದುಗೆಗೆ ಕರೆತರುತ್ತಾರೆ. ಸುಮಾರು ಲಕ್ಷಕ್ಕೂ ಅಧಿಕ ಭಕ್ತಾದಿಗಳು ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ದೇವಿಯೊಂದಿಗೆ ಪಟ್ಟಣದಲ್ಲಿ ಹೆಜ್ಜೆಯಿಡುತ್ತಾರೆ. ಪಟ್ಟಣದ ಎಲ್ಲೆಲ್ಲೂ ಭಕ್ತಾದಿಗಳು ದರ್ಶನಕ್ಕೆ ಮುಗಿ ಬೀಳುತ್ತಲಿರುತ್ತಾರೆ.
ಜಾತ್ರೆ ಆರಂಭದ ದಿನ ಮಂಟಪದ ಎದುರು ದೇವಿಗೆ ಅಕ್ಕಿರಾಶಿ ಪಂಚಜ್ಯೋತಿಗಳನ್ನು ಹಚ್ಚಿ ಅವು ಒಂಬತ್ತು ದಿನಗಳ ಕಾಲ ನಿರಂತರವಾಗಿ ಉರಿಯುವಂತೆ ನೋಡಿಕೊಳ್ಳಲಾಗುತ್ತದೆ ಅದನ್ನು `ಹುಲುಸು’ ಎಂದು ಕರೆಯುತ್ತಾರೆ. ಹಿಟ್ಟಿನ ಕೋಣನ ಬಲಿ, ಊರಿಗೆ ಅನ್ನ ಬೇಲಿ ಹಾಕಿ ಕುಂಕುಮ ಮಿಶ್ರಿತ ಅನ್ನದ ಉಂಡೆಗಳನ್ನು ನಾಲ್ಕು ದಿಕ್ಕುಗಳಲ್ಲಿ ಯಾವದೇ ವಿಘ್ನ ಬಾರದಂತೆ ಪ್ರಾರ್ಥಿಸಿ ಗಣಪತಿಯನ್ನು ಸ್ಮರಿಸಿ ಇಡಲಾಗುತ್ತದೆ. ಮುಂದಿನ ಒಂಬತ್ತು ದಿವಸಗಳ ಕಾಲ ಧಾರ್ಮಿಕ ಸಾಂಸ್ಕೃತಿಕ ಹಬ್ಬವೇ ಯಲ್ಲಾಪುರದಲ್ಲಿ ನೆಲೆಸುತ್ತದೆ.
ಅಲಂಕಾರಗೊoಡ ಯಲ್ಲಾಪುರ: ಜಾತ್ರೆಗಾಗಿ ಇಡೀ ಯಲ್ಲಾಪುರ ಸಿಂಗಾರಗೊoಡಿದ್ದು, ಎಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿದೆ. ಪಟ್ಟಣದ ಪ್ರಮುಖ ರಸ್ತೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿದೆ. ಮೆರವಣಿಗೆ ಸಾಗಿ ಬರುವ ರಸ್ತೆಯುದ್ದಕ್ಕೂ ಆಕರ್ಷಕ ರಂಗೋಲಿಗಳು ದೇವಿಯರ ಸ್ವಾಗತಕ್ಕೆ ಅಣಿಯಾಗಿವೆ. 25 ಲಕ್ಷ ರೂ ವೆಚ್ಚದಲ್ಲಿ ಕಂಚಿ ದೇವಸ್ಥಾನದ ಮಾದರಿಯಲ್ಲಿ ಮಂಟಪ ನಿರ್ಮಾಣಗೊಂಡಿದೆ. ವೈಟಿಎಸ್ಎಸ್ ಮೈದಾನ, ಶ್ರೀರಾಮ ರೆಸಿಡೆನ್ಸಿ ಹಿಂಭಾಗದಲ್ಲಿ ಅಮ್ಯೂಸಮೆಂಟ್ ಪಾರ್ಕ್ ಜನರನ್ನು ರಂಜಿಸಲಿವೆ. ಪಟ್ಟಣದ ವಿವಿಧೆಡೆ ಅಂಗಡಿ ಪ್ಲಾಟ್ ಗಳನ್ನು ಬಾಡಿಗೆಗೆ ಪಡೆದಿರುವವರು ಟೆಂಟ್ ನಿರ್ಮಿಸಿ ಅಂಗಡಿ ಆರಂಭಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಜಾತ್ರೆಗೆ ಚಾಲನೆ: ಫೆಬ್ರವರಿ 11ರ ಮಧ್ಯಾಹ್ನ 3.30ಕ್ಕೆ ಗ್ರಾಮದೇವಿಯವರ ಮೆರವಣಿಗೆ ಆರಂಭಗೊAಡು, ದೇವಿ ಮೈದಾನದ ಜಾತ್ರಾ ಗದ್ದುಗೆಯಲ್ಲಿ ಗ್ರಾಮದೇವಿಯರು ವಿರಾಜಮಾನರಾಗಲಿದ್ದಾರೆ. ಫೆ.12 ರಿಂದ ಭಕ್ತರು ಉಡಿ, ಹಣ್ಣುಕಾಯಿ ಮುಂತಾದ ಸೇವೆಗಳನ್ನು ಸಲ್ಲಿಸಲು ಅವಕಾಶವಿದೆ.
ಪೊಲೀಸ್ ಬಂದೋಬಸ್ತ್: ಜಾತ್ರೆಯಲ್ಲಿ ಸುರಕ್ಷತೆಗೆ ಪೊಲೀಸರು ಹೆಚ್ಚಿನ ಮಹತ್ವ ನೀಡಿದ್ದು, 400 ಕ್ಕೂ ಹೆಚ್ಚು ಸಿಬ್ಬಂದಿ ನೇಮಿಸಲಾಗಿದೆ.